ಬೇಲೂರು: ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಜಾವಗಲ್ ಮೂಲಕ ಪ್ರಾರಂಭವಾಗಿ ಹಳೇಬೀಡಿಗೆ ಬಂದ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ನಾಯಕರ ಮುಂದೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಜಿದ್ದಿಗೆ ಪರಿಣಾಮ ಬೇಸತ್ತ ನಾಯಕರು ಯಾತ್ರೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸ್ ಹೊರಟ ಘಟನೆ ಗುರುವಾರ ನಡೆಯಿತು.
ಈ ಕ್ಷೇತ್ರದ ಬಿಜೆಪಿ ಟಿಕೆಟ್'ಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಹಾಗೂ ಸಿದ್ದೇಶ್ ನಾಗೇಂದ್ರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹಾಗಾಗಿ ವಿಜಯ ಸಂಕಲಪ್ ಯಾತ್ರೆಯಲ್ಲಿ ಸೇರಿದ್ದ ಜನರನ್ನೇ ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳಲು ತಮ್ಮ ತಮ್ಮೊಳಗೇ ಶಕ್ತಿ ಪ್ರದರ್ಶನಕ್ಕೆ ಮುಂದಾದರು.
ಒಂದು ಗುಂಪು ಹೆಚ್.ಕೆ.ಸುರೇಶ್ ಪರವಾಗಿ ಜೈಕಾರ ಕೂಗಿದರೆ, ಮತ್ತೊಂದು ಗುಂಪು ಸಿದ್ಧೇಶ್ ನಾಗೇಂದ್ರ ಪರವಾಗಿ ಘೋಷಣೆ ಕೂಗುತ್ತಿತ್ತು. ಮತ್ತೊಂದು ಬಣ ಸಂತೋಷ್ ಕೆಂಚಾಂಬ ಪರವಾಗಿ ಘೋಷಣೆ ಕೂಗಿದರು. ಜೈಕಾರಗಳು ಅತಿರೇಕಕ್ಕೇ ಹೋಗಿದ್ದರಿಂದ ತೀವ್ರ ಮುಜುಗರಕ್ಕೊಳಗಾದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಬೇಲೂರಿನಲ್ಲಿ ಸಾಗಬೇಕಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ರದ್ದುಗೊಳಿಸಿ, ಹೆಲಿಕಾಪ್ಟರ್ ಮೂಲಕ ಹಳೇಬೀಡಿನಿಂದ ನೇರವಾಗಿ ಸಕಲೇಪುರ ತಲುಪಿದರು.
ಹಳೇಬೀಡಿನಲ್ಲಿ ಕೇಂದ್ರ ಸಚಿವರುಗಳು ಸಂಘಟನಾ ತ್ಮಕವಾಗಿ ಕಾರ್ಯಕರ್ತರ ಮನೆಯಲ್ಲಿದ್ದ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರದ ಆಕಾಂ ಕ್ಷಿಗಳ ಬೆಂಬಲಿಗರು ಮನೆಯ ಹೊರ ಭಾಗದಲ್ಲಿ ಗುಂಪು ಗಳಾಗಿ ಕೈ-ಕೈ ಮಿಲಾಯಿಸಲು ಹಂತಕ್ಕೆ ಮುಂದಾಗಿದ್ದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಎಲ್ಲಾ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement