

ರಾಯಚೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆಗಳಿಗೆ ಕಾರಣವಾಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಪ್ರಚೋದನಕಾರಿ ಭಾಷಣ ಮಾಡಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಯಚೂರಿನಲ್ಲಿ ನಡೆದ ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಜನರು ಶಾಂತಿ ಪ್ರಿಯರು ಮತ್ತು ಬುದ್ಧ ಮತ್ತು ಬಸವ ತತ್ವಗಳಲ್ಲಿ ನಂಬಿಕೆ ಹೊಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಯಾಗುತ್ತದೆ ಎಂದು ಅಮಿತ್ ಶಾ ಹೇಳುತ್ತಾರೆ. ಏಕೆ? ಕಾಂಗ್ರೆಸ್ 60ರಿಂದ 70 ವರ್ಷ ಆಡಳಿತ ಮಾಡಿದೆ. ಗಲಭೆಗಳು ಎಲ್ಲಿ ನಡೆದಿವೆ? ಅಮಿತ್ ಶಾ ಈಗ ಜನರನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಹಿಂಸಾಚಾರ, ಗಲಭೆಗಳ ಇತಿಹಾಸವಿದೆ. ಆದರೆ, ಕರ್ನಾಟಕದ ಜನರು ಶಾಂತಿಪ್ರಿಯರು ಎಂದು ಹೇಳಿದರು.
ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ಹಿಂಸಾಚಾರಕ್ಕೆ ಯತ್ನಿಸುತ್ತಿರುವವರು ಯಾರು ಎಂಬುದು ಜನರಿಗೆ ಗೊತ್ತಾಗಲಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಖರ್ಗೆ ಹೇಳಿದರು.
ಪುತ್ರ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾತನಾಡಿದ ಅವರು, ತಮ್ಮ ಮಗ ಹೆದರುವ ವ್ಯಕ್ತಿಯಲ್ಲ, ಧೈರ್ಯಶಾಲಿ, ತತ್ವ, ಸಿದ್ಧಾಂತಕ್ಕಾಗಿ ಬದುಕುತ್ತಿದ್ದಾನೆ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಬೇಟಾ ಎಂದು ಕರೆದಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿತ್ತು.
'ಸ್ವಲ್ಪ ಹೆದರಿದರೆ ಬಿಜೆಪಿಯವರು ನಿಮ್ಮನ್ನು ಸಂಪೂರ್ಣವಾಗಿ ಹೆದರಿಸುತ್ತಾರೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಹಿಂಸಾಚಾರವನ್ನು ಸೃಷ್ಟಿಸುತ್ತಾರೆ. ಸೋಲಲು ಪ್ರಧಾನಿ ಹೇಗೆಲ್ಲಾ ಎಲ್ಲಾ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾರೆ ಎಂಬುದನ್ನು ನೋಡಿ, ಅವರು ಹೇಗೆ ಭರವಸೆ ಕಳೆದುಕೊಂಡಿದ್ದಾರೆಂದು ನೋಡಿ. ಅವರ ಆಡಳಿತದಲ್ಲಿ ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಈ ಅಂತರವನ್ನು ಹೋಗಲಾಡಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗುತ್ತದೆ ಎಂದು ಖರ್ಗೆ ಹೇಳಿದರು.
Advertisement