ಕಾಂಗ್ರೆಸ್ ಮುಸ್ಲಿಮರ ಮೀಸಲಾತಿಯನ್ನು ಶೇ.4 ರಿಂದ 6 ರಷ್ಟು ಹೆಚ್ಚಿಸುತ್ತದೆಯೇ? ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು: ಅಮಿತ್ ಶಾ

ಕಾಂಗ್ರೆಸ್ ಮುಸ್ಲಿಮರ ಮೀಸಲಾತಿಯನ್ನು ಶೇ. 4 ರಿಂದ 6ಕ್ಕೆ ಹೆಚ್ಚಿಸಲಿದೆಯೇ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಓಲೈಸಿಕೊಳ್ಳಲು ಕೊನೆ ಹಂತದ ಕಸರತ್ತು ನಡೆಸುತ್ತಿದ್ದಾರೆ. ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯವಾಗಲಿದ್ದು, ಮನೆ- ಮನೆ ಪ್ರಚಾರ ಆರಂಭವಾಗಲಿದೆ..

ಚುನಾವಣಾ ಪ್ರಚಾರದ ವೇಳೆಯಲ್ಲಿ ಅಭಿವೃದ್ಧಿ ವಿಚಾರಗಳಿಗಿಂತಲೂ ಮುಸ್ಲಿಮರ ಮೀಸಲಾತಿ ಹಾಗೂ ಬಜರಂಗದಳ ನಿಷೇಧ ವಿಚಾರ ಹೆಚ್ಚು ಅಬ್ಬರಿಸಿತು. ಈ ಎರಡು ವಿಚಾರಗಳಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಆರೋಪ, ಪ್ರತ್ಯಾರೋಪ, ಟೀಕಾಪ್ರಹಾರ, ವಾಕ್ ಪ್ರಹಾರಗಳು ಹೆಚ್ಚಾಗಿ ಕಂಡುಬಂದಿತು.

ಕಾಂಗ್ರೆಸ್ ಮುಸ್ಲಿಮರ ಮೀಸಲಾತಿಯನ್ನು ಹೆಚ್ಚಿಸುವುದಾಗಿ ವಾಗ್ದಾನ ಮಾಡಿದರೆ, ಅದನ್ನು ತಡೆಯಲು ಜನರು ಬಿಜೆಪಿ ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಜನರಲ್ಲಿ ಮನವಿ ಮಾಡಿದರು. 

ಅದೇ ರೀತಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಬಜರಂಗದಳ ಬ್ಯಾನ್ ವಿಚಾರ ಕೂಡಾ ಪ್ರಚಾರದ ವೇಳೆಯಲ್ಲಿ ಎಲ್ಲೆಲ್ಲೂ ಮಾರ್ದನಿಸಿತು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದಂತೆ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮತದಾನ ವೇಳೆ ಬಜರಂಗಿಬಲಿ ಘೋಷಣೆ ಕೂಗಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಕೂಡಾ ಜನರಿಗೆ ಕರೆ ನೀಡಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಮುಸ್ಲಿಮರ ಮೀಸಲಾತಿಯನ್ನು ಶೇ. 4 ರಿಂದ 6ಕ್ಕೆ ಹೆಚ್ಚಿಸಲಿದೆಯೇ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದಾರೆ. ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾಕಷ್ಟು ಯೋಚಿಸಿ ಮೀಸಲಾತಿ ಹೆಚ್ಚಿಸಲಾಗಿದೆ. ಒಂದು ವೇಳೆ ಕಾಂಗ್ರೆಸ್ ಮುಸ್ಲಿಮರ ಮೀಸಲಾತಿಯನ್ನು ಹೆಚ್ಚಿಸಲಿದೆಯೇ ಎಂಬುದನ್ನು ಚುನಾವಣಾ ಪ್ರಚಾರ ಮುಗಿಯುವುದರೊಳಗೆ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.

ಧರ್ಮ ಆಧಾರಿತ ಮೀಸಲಾತಿಗೆ ನಮ್ಮ ಸಂವಿಧಾನದಲ್ಲಿ ವಿನಾಯಿತಿ ಇಲ್ಲ. ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದು, ಡಬಲ್ ಎಂಜಿನ್ ಸರ್ಕಾರದ ಪರವಾಗಿ ಒಲವಿರುವುದನ್ನು ನೋಡಿದ್ದೇವೆ. ಇದು ಪಕ್ಷಕ್ಕೆ ಮತಗಳಾಗಿ ಪರಿವರ್ತನೆ ಆಗಲಿದೆ ಎಂದು ಅಮಿತ್ ಶಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com