ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಗೆ ಹುಟ್ಟುಹಬ್ಬ ಸಂಭ್ರಮ: 'ಕನಕಪುರ ಬಂಡೆ'ಗೆ ಹೈಕಮಾಂಡ್ ಕೊಡುತ್ತಾ ಸಿಹಿಸುದ್ದಿ?

ಕರ್ನಾಟಕ ಚುನಾವಣಾ ಕುರುಕ್ಷೇತ್ರದಲ್ಲಿ 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷ ಅದ್ವಿತೀಯವಾಗಿ ಹೊರಹೊಮ್ಮಿದೆ. ಪ್ರಚಂಡ ಬಹುಮತ ಪಡೆದಿರುವ ಪಕ್ಷದಲ್ಲಿ ಈಗ ಎದ್ದಿರುವ ಸಮಸ್ಯೆ ಮುಖ್ಯಮಂತ್ರಿ ಆಯ್ಕೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯೆ ಫೈಟ್ ಜೋರಾಗಿದೆ. ಸಿಎಂ ಆಯ್ಕೆ ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ಡಿ ಕೆ ಶಿವಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಅವರ ನಿವಾಸದ ಹೊರಗೆ ರಾರಾಜಿಸುತ್ತಿರುವ ಕಟೌಟ್
ಡಿ ಕೆ ಶಿವಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಅವರ ನಿವಾಸದ ಹೊರಗೆ ರಾರಾಜಿಸುತ್ತಿರುವ ಕಟೌಟ್
Updated on

ಬೆಂಗಳೂರು: ಕರ್ನಾಟಕ ಚುನಾವಣಾ ಕುರುಕ್ಷೇತ್ರದಲ್ಲಿ 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷ ಅದ್ವಿತೀಯವಾಗಿ ಹೊರಹೊಮ್ಮಿದೆ. ಪ್ರಚಂಡ ಬಹುಮತ ಪಡೆದಿರುವ ಪಕ್ಷದಲ್ಲಿ ಈಗ ಎದ್ದಿರುವ ಸಮಸ್ಯೆ ಮುಖ್ಯಮಂತ್ರಿ ಆಯ್ಕೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯೆ ಫೈಟ್ ಜೋರಾಗಿದೆ. ಸಿಎಂ ಆಯ್ಕೆ ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ. ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಿದ ಉಭಯ ನಾಯಕರು ಈಗ ಸಿಎಂ ಕುರ್ಚಿಗೆ ಪಟ್ಟು ಬಿಗಿಗೊಳಿಸಿದ್ದಾರೆ. 

ಡಿ ಕೆ ಶಿವಕುಮಾರ್ ಹುಟ್ಟುಹಬ್ಬ: ರಾಜಕೀಯ ಬಿಗಿ ಪರಿಸ್ಥಿತಿ ನಡುವೆ ಇಂದು ಕೆಪಿಸಿಸಿ ಸಾರಥಿ, ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಹುಟ್ಟುಹಬ್ಬ. ಪಕ್ಷದ ನಾಯಕರು, ಕಾರ್ಯಕರ್ತರು, ಡಿ ಕೆ ಶಿವಕುಮಾರ್ ಅಭಿಮಾನಿಗಳು ಈ ಬಾರಿ ಕಾಂಗ್ರೆಸ್ ಗೆದ್ದ ಖುಷಿಯಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸದ ಹೊರಗೆ, ಅರಮನೆ ಮೈದಾನ ರಸ್ತೆಯ ಬದಿಯಲ್ಲಿ ಡಿ ಕೆ ಶಿವಕುಮಾರ್ ಫೋಟೋ, ಕಟೌಟ್ ಗಳು ರಾರಾಜಿಸುತ್ತಿವೆ. 

ತಮ್ಮ ನಿವಾಸದ ಹೊರಗೆ ಬೆಂಬಲಿಗರು ಮತ್ತು ಅಭಿಮಾನಿಗಳನ್ನು ಡಿಕೆಶಿ ಭೇಟಿ ಮಾಡಿದರು. ಅವರಿಗೆ ಹಾರ-ತುರಾಯಿ ಹಾಕಿ ಸನ್ಮಾನಿಸಲಾಯಿತು. ಅವರ ನಿವಾಸದ ಹೊರಗೆ ಜನಜಂಗುಳಿ ಸೇರಿದೆ. 

ಮುಖ್ಯಮಂತ್ರಿ ಸ್ಥಾನದ ಜಟಾಪಟಿ ಮಧ್ಯೆಯೂ 62ನೇ ವಸಂತಕ್ಕೆ ಕಾಲಿಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬವನ್ನು ಕಳೆದ ರಾತ್ರಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಹೊಟೇಲ್ ನಲ್ಲಿ ಆಚರಿಸಲಾಯಿತು.ಸಿಎಂ ಹುದ್ದೆಗೆ ಪೈಪೋಟಿ ಇದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಕ್ ತಿನ್ನಿಸಿ, ಶುಭಾಶಯ ತಿಳಿಸಿದರು.

ಹುಟ್ಟುಹಬ್ಬಕ್ಕೆ ಸಿಹಿಸುದ್ದಿ?: ಈ ಎಲ್ಲದರ ಮಧ್ಯೆ ಇಂದು ಬೆಳಗ್ಗೆ ಮತ್ತೆ ಡಿಕೆಶಿ ಪಕ್ಷದ ಶಾಸಕರನ್ನು ಭೇಟಿ ಮಾಡಲು ಶಾಂಗ್ರಿಲಾ ಹೊಟೇಲ್ ಗೆ ಆಗಮಿಸಿದ್ದಾರೆ. ಕೆ ಸಿ ವೇಣುಗೋಪಾಲ್ ಅವರನ್ನು ಸಹ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ ದೆಹಲಿಗೆ ಹೋಗಬೇಕೋ, ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದರು.

ನಾವು ಒಂದು ಸಾಲಿನ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದೇವೆ. ದೆಹಲಿಗೆ ಹೋಗುವ ಬಗ್ಗೆ ನಿರ್ಧಾರ ಮಾಡಿಲ್ಲ. ನಾನು ಮಾಡಬೇಕಾದ ಕೆಲಸವನ್ನು ಪಕ್ಷದಲ್ಲಿ ಮಾಡಿದ್ದೇನೆ ಎಂದರು. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಿಂದ ನಾಯಕರನ್ನು ದೆಹಲಿಗೆ ಬುಲಾವ್ ಮಾಡಿದ್ದು ಇಂದು ಮಧ್ಯಾಹ್ನ ಹೊತ್ತಿಗೆ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com