ಬೆಂಗಳೂರು: ಲಿಂಗಾಯತವಾದ ಹಿಂದುತ್ವವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಸ್ಥ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸತತ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಭಾರತದ ಅತ್ಯಂತ ಹಿರಿಯ 92 ವರ್ಷದ ಶಾಮನೂರ್ ಶಿವಶಂಕರಪ್ಪ ಹೇಳಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಟಿಕೆಟ್ ನೀಡಿದ್ದಕ್ಕೆ ಸ್ಪರ್ಧಿಸಿದೆ. ಕ್ಷೇತ್ರದ ಜನರು ಕೂಡ ನನ್ನನ್ನು ಆಶೀರ್ವದಿಸಿದ್ದಾರೆ, ಹರಸಿದ್ದಾರೆ ಎಂದರು.
ನಮ್ಮ ಪಕ್ಷದಲ್ಲಿ ಹಲವು ಸಮರ್ಥ ಲಿಂಗಾಯತ ನಾಯಕರಿದ್ದಾರೆ. ಹಾಗೆಂದು ಅವರ ಹೆಸರುಗಳನ್ನು ನಾನು ಸಿಎಂ ಸ್ಥಾನಕ್ಕೆ ಪ್ರಸ್ತಾವಿಸುತ್ತಿಲ್ಲ. ನನಗೆ ಸಿಎಂ ಸ್ಥಾನ ಕೊಟ್ಟರೆ ಬೇಡ ಎನ್ನುವುದಿಲ್ಲ, ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಯಾರು ಹೇಳುತ್ತಾರೆ ಎಂದು ಕೇಳಿದರು.
ಭ್ರಷ್ಟಾಚಾರರಹಿತ ಆಡಳಿತ ಕೊಡುವುದು ನಮ್ಮ ಪ್ರಮುಖ ಆದ್ಯತೆ, ಆರಂಭದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾ ಬಂದಿತ್ತು. ಈ ಬಾರಿ ಜಗದೀಶ್ ಶೆಟ್ಟರ್ ಸೇರ್ಪಡೆ ನಮಗೆ ಖಂಡಿತಾ ಸಹಾಯವಾಗಿದೆ ಎಂದರು.
ಲಿಂಗಾಯತವಾದ ಹಿಂದುತ್ವವಲ್ಲ: ಬಿಜೆಪಿಯ ಹಿಂದುತ್ವವಾದವನ್ನು ನಾವು ಒಪ್ಪುವುದಿಲ್ಲ. ನಾವು ಹಿಂದೂ ತತ್ವಗಳನ್ನು ಪಾಲಿಸುವವರಲ್ಲ, ಬಸವತತ್ವವನ್ನು ಪಾಲಿಸುವವರು. ನಾವು ಹಿಂದೂಗಳಲ್ಲ ಎಂದರು.
Advertisement