ಕಾಂಗ್ರೆಸ್ ಪಕ್ಷ ನನಗೆ ದೇವಸ್ಥಾನ ಇದ್ದಂತೆ, ಜನರ ಆಶೀರ್ವಾದ ನನ್ನ ಮೇಲಿರಲಿ, ದೆಹಲಿಗೆ ಹೋಗುತ್ತಿದ್ದೇನೆ: ಡಿ ಕೆ ಶಿವಕುಮಾರ್

ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವ ಕೆಲಸವಾಗಬೇಕು. ಕಾಂಗ್ರೆಸ್ ಪಕ್ಷ ನನಗೆ ದೇವಸ್ಥಾನವಿದ್ದಂತೆ ಎಂದು ದೆಹಲಿಗೆ ಹೊರಟಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವ ಕೆಲಸವಾಗಬೇಕು. ಕಾಂಗ್ರೆಸ್ ಪಕ್ಷ ನನಗೆ ದೇವಸ್ಥಾನವಿದ್ದಂತೆ ಎಂದು ದೆಹಲಿಗೆ ಹೊರಟಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳು ನನಗೆ ಒಬ್ಬನೇ ದೆಹಲಿಗೆ ಬರಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾನೊಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಶಕ್ತಿ ನೀಡಿದೆ, ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ದೆಹಲಿಗೆ ಹೊರಟ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ಕರ್ನಾಟಕದ ಸಿಎಂ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿ ಇರುವುದರಿಂದ ವರಿಷ್ಠರ ಸೂಚನೆಯಂತೆ ಸಿದ್ದರಾಮಯ್ಯ ನಿನ್ನೆ ಮಧ್ಯಾಹ್ನ ದೆಹಲಿಗೆ ತೆರಳಿದ್ದರು. ನಿನ್ನೆ ರಾತ್ರಿ ಅಲ್ಲಿಯೇ ತಂಗಿದ್ದರು. ಆರಂಭದಲ್ಲಿ ದೆಹಲಿಗೆ ಹೋಗುವ ಕಾರ್ಯಕ್ರಮ ಹಾಕಿಕೊಂಡಿದ್ದ ಡಿ ಕೆ ಶಿವಕುಮಾರ್ ಅವರು ಅನಾರೋಗ್ಯದ ಕಾರಣ ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದರು. 

ಇಂದು ದೆಹಲಿಗೆ ಹೊರಡುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಡಿ ಕೆ ಶಿವಕುಮಾರ್ ಮಾನಸಿಕವಾಗಿ ಸಿದ್ಧರಾದಂತೆ ಹೊಸ ಹುರುಪಿನಿಂದ ಕಂಡುಬಂದರು. ನಾನು ಇವತ್ತು ಆರೋಗ್ಯವಾಗಿದ್ದೇನೆ. ಯಾವ ಆತಂಕವೂ ಬೇಡ, ಕನ್ನಡ ಜನತೆ, ಕನ್ನಡ ತಾಯಿ ಭುವನೇಶ್ವರಿ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿರಲಿ ಎಂದರು.

ಕಾಂಗ್ರೆಸ್ ಪಕ್ಷ ಒಗ್ಗಟ್ಟಿನ ಮನೆಯಾಗಿದೆ. ನಮ್ಮ ಸಂಖ್ಯೆ 135. ಇಲ್ಲಿ ಯಾರನ್ನೂ ವಿಭಜಿಸಲು ನಾನು ಬಯಸುವುದಿಲ್ಲ. ಅವರು ನನ್ನನ್ನು ಇಷ್ಟಪಡಲಿ ಅಥವಾ ಇಲ್ಲದಿರಲಿ, ನಾನು ಜವಾಬ್ದಾರಿಯುತ ವ್ಯಕ್ತಿ. ನಾನು ಬೆನ್ನಿಗೆ ಚೂರಿ ಹಾಕುವುದಿಲ್ಲ, ಬ್ಲ್ಯಾಕ್ ಮೇಲ್ ಮಾಡುವುದಿಲ್ಲ ಎಂದು ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳುವ ವೇಳೆ ಎಎನ್ಐ ಸುದ್ದಿಸಂಸ್ಥೆಯ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳಿದರು. 

ನನ್ನ ಕೆಲಸವನ್ನು ನಾನು ಮಾಡಿದ್ದೇನೆ: ಮುಂದಿನ ಸಿಎಂ ವಿಚಾರ ಬಗ್ಗೆ ಕೇಳಿದಾಗ ನನ್ನ ಕೆಲಸವನ್ನು ನಾನು ಮಾಡಿದ್ದೇನೆ, ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದು ಡಿ ಕೆ ಶಿ ಇಂದು ಪುನರುಚ್ಛರಿಸಿದರು.

#WATCH | Bengaluru: "We have built this party (Congress), we have built this house. I am a part of it...A mother will give everything to her child": Karnataka Congress president DK Shivakumar before leaving for Delhi pic.twitter.com/0GMTSZKxpJ

ನಾವು ಈ ಪಕ್ಷವನ್ನು ಕಟ್ಟಿದ್ದೇವೆ, ಇದು ನಮಗೆ ಮನೆಯಂತೆ. ನಾನು ಅದರ ಭಾಗವಾಗಿದ್ದೇನೆ. ತಾಯಿ ತನ್ನ ಮಗುವಿಗೆ ಎಲ್ಲವನ್ನೂ ನೀಡುತ್ತಾಳೆ ಎಂದು ಮಾರ್ಮಿಕವಾಗಿ ಹೇಳಿದರು. 

ಡಿ ಕೆ ಶಿವಕುಮಾರ್ ದೆಹಲಿಗೆ ಹೋದ ನಂತರ ವರಿಷ್ಠರ ಭೇಟಿಯಾಗಿ ಚರ್ಚೆಯಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಜೆ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com