ಮೋದಿ ಬಗ್ಗೆ ಅನಗತ್ಯ ಟೀಕೆ ಮಾಡುವುದು ಸಿದ್ದರಾಮಯ್ಯ ಚಾಳಿ; ಕಾಂಗ್ರೆಸ್ ನವರು ನಾಯಿ-ನರಿಗಳಂತೆ ಕಚ್ಚಾಡುತ್ತಾರೆ: ಯಡಿಯೂರಪ್ಪ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಸ್ಥಗಿತ ಆಗಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು, ಸಚಿವರು ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಆರೋಪಗಳ ಸುರಿಮಳೆಗೈದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಸ್ಥಗಿತ ಆಗಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು, ಸಚಿವರು ಹೋಗಿಲ್ಲ. ಶಾಸಕರಿಗೆ ಕೇವಲ 50 ಲಕ್ಷ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ನಿಗಮಗಳಿಗೆ ಹಣ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಆರೋಪಗಳ ಸುರಿಮಳೆಗೈದಿದ್ದಾರೆ. 

ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕದ ಖರ್ಚು ರೈತನೇ ಭರಿಸಬೇಕು ಎಂಬ ಆದೇಶ ಹೊರಡಿಸಲು ಸರ್ಕಾರ ಹೊರಟಿದೆ. ಉಚಿತ ಬಸ್ ಹೊರತು ಬೇರೆ ಸರ್ಕಾರದ ಬೇರೆ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಗೆ ಬಂದಿಲ್ಲ. ಅರ್ಧದಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ನಿಧಿ ಕೊಟ್ಟಿಲ್ಲ. ಇದು ಲೂಟಿ ಸರ್ಕಾರ, ಐಟಿ ದಾಳಿಯಿಂದ ಸರ್ಕಾರದ ಲೂಟಿ ಬಯಲಾಗಿದೆ ಎಂದು ಆರೋಪಿಸಿದರು. 

ಬಣಗಳ ನಡುವಿನ ಜಗಳ: ಸಿದ್ದರಾಮಯ್ಯ- ಡಿಕೆಶಿ ಬಣಗಳ ನಡುವೆ ನಾಯಕತ್ವದ ಜಗ್ಗಾಟ ತಾರಕಕ್ಕೇರಿದೆ. ಮೊದಲಿಗಿಂತ ಹೆಚ್ಚು ವರ್ಗಾವಣೆ ದಂಧೆ ಮಿತಿಮೀರಿದೆ. ಡಿಸಿಎಂ ಕಟ್ಟಿ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಬೆಳಗ್ಗೆ ಎದ್ದರೆ ನಾಯಿ-ನರಿಗಳಂತೆ ಕಚ್ಚಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಮುಂದೆ ಹೋಗುತ್ತಿಲ್ಲ, ಸರ್ಕಾರದ ಚಕ್ರಗಳಲ್ಲಿ ಗಾಳಿ ಇಲ್ಲ, ಮುಖ್ಯಮಂತ್ರಿಗಳಿಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಿದರು.  

ಮಳೆ ಕೊರತೆ ಅರಿವಿದ್ದರೂ ಮುಂಜಾಗ್ರತಾ ಕ್ರಮ ವಹಿಸಲಿಲ್ಲ. ಭೀಕರ ಬರ ಪರಿಸ್ಥಿತಿ ಇದೆ. ಬರ ಪರಿಹಾರ ಕೊಡದೇ ಕೇಂದ್ರಕ್ಕೆ ಮೂದಲಿಸುವ ಕೆಲಸ ಮಾಡ್ತಿದ್ದಾರೆ. ಆಡಳಿತ ಯಂತ್ರ ಸರಿಪಡಿಸುವ ಬದಲು ವಿಪಕ್ಷಗಳ ಮೇಲೆ ಹರಿಹಾಯ್ತಿರೋದು ಪ್ರಜಾಪ್ರಭುತ್ವದ ಅಣಕ. ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಬರ ಪರಿಹಾರ ನಿಶ್ಚಿತವಾಗಿ ಕೊಡುತ್ತದೆ. ಆದರೆ ಇವರು ಕೇಂದ್ರದ ಪರಿಹಾರಕ್ಕೆ ಕಾಯುತ್ತಿದ್ದಾರೆ. ಸಂಪನ್ಮೂಲಗಳ ಕೊರತೆಯಿಂದ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ಸುರ್ಜೇವಾಲಾ, ವೇಣುಗೋಪಾಲ ಕಲೆಕ್ಷನ್ ಟಾರ್ಗೆಟ್ ಕೊಡಲು ಭೇಟಿ ಕೊಟ್ಟಿದ್ದಾರೆ. ಇದು ಎಐಸಿಸಿಗೆ ಎಟಿಎಂ ಸರ್ಕಾರ ಆಗಿದೆ. ಮೋದಿಯವರನ್ನು ನಿತ್ಯ ಟೀಕಿಸೋದು ಸಿದ್ದರಾಮಯ್ಯ ಚಾಳಿಯಾಗಿದೆ ಎಂದು ಟೀಕಿಸಿದರು. 

ಕಳೆದ ಒಂಬತ್ತು ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಡಿ 12,407 ಕೋಟಿ, ಎಸ್‌ಡಿಆರ್‌ಎಫ್‌ನಡಿ 3,377 ಕೋಟಿ ರೂಪಾಯಿ ಹಣ ಕೇಂದ್ರ ಕೊಟ್ಟಿದೆ. ರಾಜ್ಯದಲ್ಲಿ 54 ಹೆದ್ದಾರಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮುಂದಿನ ಮಾರ್ಚ್‌ಗೆ ಸಿದ್ಧವಾಗಲಿದೆ. ಹೀಗೆ ಹಲವು ಕಾಮಗಾರಿಗಳು ಕೇಂದ್ರದಿಂದ ರಾಜ್ಯದಲ್ಲಿ ನಡೆಯುತ್ತಿವೆ ಎಂದರು. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com