ಯಾದಗಿರಿ: ಬುಧವಾರ ಹಾಸನದಲ್ಲಿ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆಯುತ್ತಿದ್ದರೂ ಸಭೆಗೆ ಯಾದಗಿರಿಯ ಗುರುಮಟ್ಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗೈರಾಗುವ ಮೂಲಕ ವರಿಷ್ಠರಿಗೆ ಶಾಕ್ ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಮೈತ್ರಿ ಕುರಿತು ಮಹತ್ವ ಪಡೆದುಕೊಂಡಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧಿಸಿದ್ದ ಶಾಸಕ ಶರಣಗೌಡ ಕಂದಕೂರು ಮೊದಲಿನಿಂದಲೂ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿದ್ದಾರೆ.
ಜೆಡಿಎಸ್ ಪಕ್ಷದೊಂದಿಗೆ ಅಂತರ ಕಾಯ್ದಕೊಳ್ಳುತ್ತಿರುವ ಶಾಸಕ ಶರಣಗೌಡ ಕಂದಕೂರು ಪದೇ ಪದೇ ಜೆಡಿಎಸ್ ಸಭೆಗೆ ಗೈರಾಗುತ್ತಿದ್ದಾರೆ. ಈಗಾಗಲೇ 3-4 ಬಾರಿ ಜೆಡಿಎಸ್ ಸಭೆಗೆ ಗೈರಾಗಿರುವ ಶಾಸಕ ಶರಣಗೌಡ ಕಂದಕೂರು, ಬೆಂಗಳೂರಿನಲ್ಲಿದ್ದರೂ ಇಂದಿನ ಹಾಸನದ ಶಾಸಕರ ಸಭೆಗೆ ಹಾಜರಾಗಿಲ್ಲ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಶರಣಗೌಡ ಕಂದಕೂರು, ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧ ಇದೆ. ನನ್ನ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ಹೇಳಿದ್ದಾರೆ. ಸಭೆಗೆ ಹೋಗದೇ ಇರಲು ಪಕ್ಷದ ವಿರುದ್ದ ಸಮಾಧಾನ ಅಸಮಾಧಾನ ಪ್ರಶ್ನೆ ಅಲ್ಲ. ಅನೇಕ ದಿನಗಳಿಂದ ಸಮಿತಿ ಸಭೆಗೆ ಹೋಗಿರಲಿಲ್ಲ. ಸಮಿತಿ ಸಭೆ ಇವತ್ತು ಇದೆ ಅದಕ್ಕೆ ಅಲ್ಲಿನ ಸಭೆಗೆ ಹೋಗಿಲ್ಲ ಎಂದು ತಿಳಿಸಿದರು.
ವರಿಷ್ಠರು ಸಭೆಗೆ ಆಹ್ವಾನ ನೀಡಿದ್ದರು. ನಾನು ಸಭೆಗೆ ಬರುವುದಿಲ್ಲ ಎಂದು ಹೇಳಿಲ್ಲ. ಸಮಿತಿ ಸಭೆ ಇರುವುದರಿಂದ ನಾನು ಹೋಗಲಿಲ್ಲ ಅಷ್ಟೇ ಎಂದು ತಿಳಿಸಿದರು. ಮೈತ್ರಿಗೆ ನನ್ನ ಅಸಮಾಧಾನ ಇದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್ನಿಂದ ದೂರ ಆಗುತ್ತಿಲ್ಲ. ಅಸಮಾಧಾನ ಇದ್ದರೂ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.
Advertisement