ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ನಲ್ಲಿ ಪ್ರಮುಖ ಹುದ್ದೆಯೋ ಅಥವಾ ಚುನಾವಣೆಗೆ ಸ್ಪರ್ಧಿಸಲು ವೇದಿಕೆ ಸಜ್ಜಾಗಿದೆಯೋ?
ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಂಪೂರ್ಣವಾಗಿ ನಿರ್ನಾಮ ಮಾಡುವ ಬದಲು ನಿರ್ಮಾಣ ಮಾಡಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಬಾಯ್ತಪ್ಪಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಟ್ರೋಲ್ ಆಗಿದೆ.
ಇತ್ತೀಚೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಘೋಷಿಸಿಕೊಂಡ ನಂತರ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಷದಲ್ಲಿ ಮುಂಬರುವ ದಿನಗಳಲ್ಲಿ ಅವರಿಗೆ ಪ್ರಮುಖ ಹುದ್ದೆ ನೀಡುವ ಅಥವಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆಯೇ ಎಂಬ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಪಕ್ಷದ ವರಿಷ್ಠ ನಿಖಿಲ್ ತಂದೆ ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಗೆ ಚುನಾವಣಾ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ.
ಕಳೆದ ಭಾನುವಾರ ಕುಮಾರಸ್ವಾಮಿಯವರ ಬಿಡದಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಜೆಡಿಎಸ್ ಶಾಸಕರು, ಎಂಎಲ್ಸಿ ಗಳು, ಜಿಲ್ಲಾಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಸಭೆ ನಡೆದಿತ್ತು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಮುನಿಸಿಕೊಂಡು ಅಲ್ಪಸಂಖ್ಯಾತ ಮುಸ್ಲಿಂ ನಾಯಕರು ಪಕ್ಷ ತೊರೆಯಲು ಮುಂದಾಗಿದ್ದರಿಂದ ಅವರ ಸಿಟ್ಟನ್ನು ಶಮನ ಮಾಡಲು ಸಭೆ ಕರೆದಿದ್ದರು.
ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಎಂಎಲ್ಸಿ ರಮೇಶ್ ಬಾಬು, ನಿಖಿಲ್ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು, 2023ರಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಕೂಡ ಸೋತರು, 2004ರಲ್ಲಿ ದೇವೇಗೌಡರು ಕಾಂಗ್ರೆಸ್ ಎದುರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. 1999ರಲ್ಲಿ ಕುಮಾರಸ್ವಾಮಿಯವರು ಸಾತನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತರು. ಅವರ ಪತ್ನಿ ಅನಿತಾ ಕುಮಾರಸ್ವಾಮಿ 2014ರಲ್ಲಿ ಲೋಕಸಭೆ ಉಪ ಚುನಾವಣೆಯಲ್ಲಿ ಸೋತರು. ನಿಖಿಲ್ ಅವರಿಗೆ ಕಾಂಗ್ರೆಸ್ ನ ಶಕ್ತಿ ಗೊತ್ತು, ಹೀಗಾಗಿ ಅವರು ಕಾಂಗ್ರೆಸ್ ನ್ನು ನಿರ್ನಾಮ ಮಾಡುವ ಬದಲು ನಿರ್ಮಾಣ ಮಾಡುತ್ತೇವೆ ಎಂದು ಬಾಯ್ತಪ್ಪಿ ಹೇಳಿರುವುದು ಸರಿಯಾಗಿದೆ ಎಂದರು.
ನಿಖಿಲ್ ಅವರು ಬಾಯ್ತಪ್ಪಿ ಹೇಳಿರುವ ಮಾತಿನ ಬಗ್ಗೆ ಅವರ ತಂದೆ ಕುಮಾರಸ್ವಾಮಿಯವರನ್ನು ಕೇಳಿದಾಗ, ನಿಖಿಲ್ ಅವರಿಗೆ ಸಾಮರ್ಥ್ಯವಿದೆ, ಪರಿಣಾಮಕಾರಿ ಸಂವಹನ ಕೌಶಲ್ಯ ಹೊಂದಿದ್ದಾರೆ. ಅವರ ಶಕ್ತಿಯನ್ನು ಸರಿಯಾಗಿ ಪಕ್ಷ ಬಳಸಿಕೊಳ್ಳುತ್ತದೆ ಎಂದರು.
ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ, ಇಷ್ಟು ದಿನ ಜೆಡಿಎಸ್ ನಲ್ಲಿ ಹಿಂದೆ ಉಳಿದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮುನ್ನಲೆಗೆ ಬಂದಿದ್ದಾರೆ. ಅಮಿತ್ ಶಾ ಅವರೊಂದಿಗಿನ ಪಕ್ಷದ ನಾಯಕತ್ವದ ಸಭೆಯ ಸಂದರ್ಭದಲ್ಲಿ ಅವರು ದೆಹಲಿಯಲ್ಲಿದ್ದರು. ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಬಂದಿದ್ದರು. ಬಿಡದಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಆರೋಗ್ಯ ಉತ್ತಮವಾಗಿಲ್ಲದ ಕಾರಣ, ಪ್ರಮುಖ ನಾಯಕರಾಗಿ ಪಕ್ಷದಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆಯೇ ಎಂದು ಹಲವರು ಭಾವಿಸಿದರೆ ಅಚ್ಚರಿಯಿಲ್ಲ ಎನ್ನುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ