ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ: ಬಸವರಾಜ ಬೊಮ್ಮಾಯಿ ಆರೋಪ
ಬೆಂಗಳೂರು: ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಯಾವುದೇ ಭೇದಭಾವ ಮಾಡಿರಲಿಲ್ಲ. ಸೀನಿಯಾರಿಟಿ ಮೇಲೆ ಅನುದಾನ ಕೊಟ್ಟಿದ್ದೇವು. ಈಗ ಸಿನಿಯಾರಿಟಿ ಇಲ್ಲ. ಈಗಾಗಲೇ ಪಾಲಿಕೆ ವಾರ್ಡ್ ಗಳಿಗೆ ಅನುದಾನ ಕೊಡದೇ ನಿಲ್ಲಿಸಿದ್ದಾರೆ. ಈಗ ಅದರ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ತಾರತಮ್ಯ ಮಾಡದೇ ಸರ್ಕಾರ ಕೂಡಲೇ ಅನುದಾನ ಕೊಡಲಿ. ಬೇರೆ ವಾರ್ಡ್ ಗಳಿಗೆ ಅನುದಾನ ಕೊಟ್ಟು ರಾಜರಾಜೇಶ್ವರಿ ವಲಯಕ್ಕೆ ಕೊಟ್ಟಿಲ್ಲ ಅಂದರೆ ಅದು ರಾಜಕೀಯ ಎಂದು ಹೇಳಿದರು.
ಬೆಂಗಳೂರಿನಲ್ಲಿ ಟನೆಲ್ ರಸ್ತೆಗಳ ನಿರ್ಮಾಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಟನೆಲ್ ರಸ್ತೆ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ತರಾತುರಿಯಲ್ಲಿ ಮಾಡುತ್ತಿದೆ. ಈಗಾಗಲೇ ನಗರದ ಸಂಚಾರ ವ್ಯವಸ್ಥೆ ಬಹಳ ಹದಗೆಟ್ಟಿದೆ. ಈಗ ಏಳೆಂಟು ರಸ್ತೆಗಳನ್ನು ಅಗೆದು ಸಂಚಾರ ಸಂಪೂರ್ಣ ನಿಲ್ಲಿಸಿದರೆ ಕಷ್ಟ. ಪರ್ಯಾಯ ಪರಿಹಾರ ಕಂಡುಕೊಂಡು ಕೆಲಸ ಮಾಡಲಿ ವೈಟ್ ಟ್ಯಾಪಿಂಗ್ ಮಾಡುವುದಕ್ಕಾಗಿ ವರ್ಷಗಟ್ಟಲೆ ಸಮಯ ಹಿಡೀತು, ಆಗ ಸಮಸ್ಯೆ ಆಯಿತು. ಈಗ ಟನೆಲ್ ರಸ್ತೆಗಳ ವಿಚಾರದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.
ಬಿಜೆಪಿ ನಾಯಕರ ಪ್ರವಾಸ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅಧ್ಯಕ್ಷರು, ನಾವು ಎಲ್ಲ ಕೂತು ಚರ್ಚೆ ಮಾಡುತ್ತೇವೆ, ಎಲ್ಲರೂ ಚರ್ಚಿಸಿ ಪ್ರವಾಸದ ರೂಪರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದರು.
ಇದೇ ವೇಳೆ ಇಸ್ರೇಲ್ ಮೇಲೆ ಹಮಾಸ್ ದಾಳಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿರುವುದು ಅತ್ಯಂತ ಖಂಡನೀಯ ಎಂದರು. ಈ ದಾಳಿಯನ್ನು ಇಡೀ ವಿಶ್ವವೇ ಗಂಭೀರವಾಗಿ ತೆಗೆದುಕೊಳ್ಳಬೇಕು. ದಾಳಿಗೆ ಕಾರಣ ಆಗಿರುವವರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಶಾಂತಿ ನೆಲೆಸಬೇಕು, ಯುದ್ಧ ನಿಲ್ಲಬೇಕು
ಭಾರತದ ನಿಲುವನ್ನು ನಮ್ಮ ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಜತೆ ನಿಲ್ಲುದಾಗಿ ಪ್ರಧಾನಿ ಘೋಷಿಸಿದ್ದಾರೆ. ಇದು ಒಂದು ಒಳ್ಳೆಯ ನಿರ್ಧಾರ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ