ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿನ್ನೆ ಬೆಳಗಾವಿಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಶಾಸಕರು ಹೋಗದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ, ಡಿ ಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಆಶ್ಚರ್ಯ ತಂದಿದೆ. ಇದು 8ನೇ ಅದ್ಭುತ ಎಂದ ಶಾಸಕ ಮುನಿರತ್ನ, ಇದು ಒಂಥರಾ ನಿಗೂಢ ಎಂದು ಲೇವಡಿ ಮಾಡಿದರು. ಡಿಕೆಶಿ ಸ್ವಾಗತಕ್ಕೆ ಸತೀಶ್ ಜಾರಕಿಹೊಳಿ ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ ಕಾವೇರಿ ನೀರಿನ ರೀತಿ ಉಕ್ಕಿ ಹರಿಯುತ್ತಿದೆ. ಈ ಹಿಂದೆ ಇದೇ ರೀತಿ ಆಗಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಿತ್ತು. ಅದೇ ರೀತಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಕೆಲಸ ಬೆಳಗಾವಿಯಿಂದ ಆರಂಭ ಆಗಿದೆ. ಬೆಂಗಳೂರು ನಗರದಲ್ಲಿ ಅದು ಮುಕ್ತಾಯ ಆಗುತ್ತದೆ ಎಂದು ಹೇಳಿದರು.
ಸರ್ಕಾರ ಬೀಳಿಸಲು ಆಪರೇಷನ್ ಕಮಲ ಬಗ್ಗೆ ಡಿಕೆ ಶಿವಕುಮಾರ್ ಮಾಡಿದ್ದ ಆರೋಪ ಕುರಿತು ಮಾತನಾಡಿದ ಮುನಿರತ್ನ, ಕಾಂಗ್ರೆಸ್ ನಾಯಕರು ನೆಮ್ಮದಿಯಾಗಿ ಆಡಳಿತ ಮಾಡಿ. ಒಳ್ಳೆಯ ರೀತಿಯಲ್ಲಿ ಸರ್ಕಾರವನ್ನು ನಡೆಸಿಕೊಂಡು ಹೋಗಿ, ರಾಜ್ಯದ ಅಭಿವೃದ್ಧಿ ಮಾಡಿ. ಸರ್ಕಾರ ಬೀಳಿಸುವ ಯಾವುದೇ ಆಲೋಚನೆ ನಮಗೆ ಇಲ್ಲ. ಆದರೆ ಕಾಂಗ್ರೆಸ್ ನವರು ಆಪರೇಷನ್ಗೆ ದಾರಿ ಮಾಡಿಕೊಟ್ಟರೆ ಆ ಮಾತು ಸತ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement