ಬೆಂಗಳೂರು: 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚು ರೂಪಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಗುರುವಾರ ಆರೋಪಿಸಿದ್ದಾರೆ.
ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ಸಿದ್ದರಾಮಯ್ಯ. ಅದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ ಸರ್ಕಾರ ಪತನ ಮಾಡಿದೆ ಎಂದು ಹೇಳಿದ್ದೆ. ಆದರೆ ಇದಕ್ಕೆ ನಾಂದಿ ಹಾಡಿದ್ದು ಸಿದ್ದರಾಮಯ್ಯ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸರ್ಕಾರ ಬೀಳಿಸಲು ಮುಂದಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಯಾವುದೇ ದ್ವೇಷವಿಲ್ಲ, ಆದರೆ ಸರ್ಕಾರ ಪತನವಾಗಬೇಕೆಂದು ಅವರು ಬಯಸಿದ್ದರು ಎಂದು ತಿಳಿಸಿದ್ದಾರೆ. ಬೆಳಗಾವಿ ರಾಜಕೀಯ ಸಮಸ್ಯೆಯನ್ನು ಸರಿಪಡಿಸುವಂತೆ ಸಿದ್ದರಾಮಯ್ಯ ಅವರಿಗೆ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದರು, ನಂತರ ಸಿದ್ದರಾಮಯ್ಯ ಬಿಜೆಪಿ ಜೊತೆ ಕೈಜೋಡಿಸಿದ್ದರು ಎಂದರು.
ಬಿಸಿ ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಸಿದ್ದರಾಮಯ್ಯ ಕೇಳಿದರೂ ಇಬ್ಬರು ಸ್ವತಂತ್ರ ಶಾಸಕರನ್ನು ಸಚಿವರನ್ನಾಗಿಸಿದರು ಸಿದ್ದರಾಮಯ್ಯ. ಶ್ರೀಮಂತ ಪಾಟೀಲ್ ಮತ್ತು ಆರ್.ಶಂಕರ್ ಅವರನ್ನು ರೆಸಾರ್ಟ್ನಿಂದ ಕಳುಹಿಸಿದ್ದು ಸಿದ್ದರಾಮಯ್ಯ' ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹೊಟೇಲ್ನಿಂದ ಸರ್ಕಾರ ನಡೆಸಿದ್ದರು ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಬಂಧಿಸಿದಂತೆ ನಾನು ಯಾವತ್ತೂ ಹೊಟೇಲ್ನಲ್ಲಿ ಮೋಜು ಮಾಡಿಲ್ಲ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದರ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದಿದ್ದಾರೆ.
14 ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆಗೆ ಗೌರವ ನೀಡದೆ ಕಾಂಗ್ರೆಸ್ ನಾಯಕರು ತಮ್ಮನ್ನು ಕೈಗೊಂಬೆ ಮಾಡಿಕೊಳ್ಳುವ ಮೂಲಕ ಅವಮಾನಿಸಿದ್ದಾರೆ ಎಂದು ಕುಮಾರಸ್ವಾಮಿ ವಿಷಾದಿಸಿದರು.
ಚುನಾವಣೆ ನಡೆಯುತ್ತಿರುವ ರಾಜಸ್ಥಾನದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 10,000 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಏಕೆ ಭರವಸೆ ನೀಡಿದೆ ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಎಲ್ಲೆಡೆ ಭರವಸೆಗಳನ್ನು ನೀಡುತ್ತಿದೆ. ಇದರಿಂದಾಗಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಭವಿಷ್ಯದಲ್ಲಿ ಜನರು ನಿಮ್ಮ ಭರವಸೆಗಳನ್ನು ತಿರಸ್ಕರಿಸುವ ಸಮಯ ಬರುತ್ತದೆ ಎಂದು ಅವರು ಹೇಳಿದರು.
Advertisement