ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕುರುಬ ಸಮುದಾಯದ ಮುಖಂಡರನ್ನು ಸೆಳೆಯಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಹಿಂದುಳಿದ ಈ ಸಮುದಾಯ ರಾಷ್ಟ್ರದಾದ್ಯಂತ ಸುಮಾರು 11 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ರಾಜಕೀಯವಾಗಿ ಹೆಚ್ಚಿನ ಪ್ರಭಾವಶಾಲಿ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹೋಲಿಸಿದರೆ ಕುರುಬ ಸಮುದಾಯದ ಸಂಖ್ಯೆಯೂ ಗಮನಾರ್ಹವಾಗಿದೆ.
ಹೆಚ್ಚಿನ ರಾಜ್ಯಗಳಲ್ಲಿ, ಕುರುಬರನ್ನು ಹಿಂದುಳಿದವರು ಎಂದು ಪರಿಗಣಿಸಲಾಗುತ್ತದೆ ಆದರೆ ಗಣನೀಯ ಪ್ರಭಾವವನ್ನು ಹೊಂದಿದ್ದಾರೆ ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವ ಸಂದರ್ಭದಲ್ಲಿ ಇತರ ಸಣ್ಣ ಹಿಂದುಳಿದ ಸಮುದಾಯಗಳು ಕುರುಬರನ್ನು ಅನುಸರಿಸುತ್ತವೆ. ಇದೀಗ, ಅಕ್ಟೋಬರ್ 2 ಮತ್ತು 3 ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮುದಾಯದ ಒಂಬತ್ತನೇ ವಾರ್ಷಿಕ ಸಭೆಯಲ್ಲಿ ಕುರುಬರು ತಮ್ಮ ರಾಜಕೀಯ ಶಕ್ತಿಯನ್ನು ವೃದ್ದಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕುರುಬ ಸಮುದಾಯದ ಮುಖಂಡರು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಕೇಂದ್ರ ಸಚಿವರಾದ ಎಸ್ಪಿ ಸಿಂಗ್ ಭಾಗೇಲ್ ಮತ್ತು ಫಗ್ಗನ್ ಕುಲಸ್ತೆ, ಯುಪಿ ಸಚಿವರಾದ ರಾಜಕೀಯ ಸಾಧಕರನ್ನು ಸನ್ಮಾನಿಸುವುದಾಗಿ ಹೇಳಿದರು.
ಉತ್ತರ ಪ್ರದೇಶದ ಸಚಿವ ಅಜಿತ್ ಸಿಂಗ್ ಪಾಲ್, ಆಂಧ್ರಪ್ರದೇಶದ ಸಚಿವ ಉಷಾಶ್ರೀ ಚರಣ್, ಗುಜರಾತ್ ಶಾಸಕ ಮಾವ್ಜಿಭಾಯಿ ದೇಸಾಯಿ, ಯುಪಿ ಶಾಸಕ ಪ್ರೇಂಪಾಲ್ ಸಿಂಗ್ ಧಂಗರ್, ದೆಹಲಿ ಶಾಸಕ ದಿನೇಶ್ ಮೊಂಗಿಯಾ, ತೆಲಂಗಾಣ ಎಂಎಲ್ಸಿ ಯೆಗ್ಗಿ ಮಲ್ಲೇಶಂ, ಗುಜರಾತ್ನ ರಾಜ್ಯಸಭಾ ಸಂಸದ ಬಾಬುಭಾಯ್ ದೇಸಾಯಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಹಲವು ಮುಖಂಡರನ್ನು ಸನಾನ್ಮಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಮತ್ತು ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಮಾತನಾಡಿ, ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಕ್ಷಗಳಲ್ಲಿನ ಸಂಕುಚಿತ ಮನೋಭಾವ ಮತ್ತು ಭಾಷೆಯಲ್ಲಿನ ಭಿನ್ನಾಭಿಪ್ರಾಯಗಳನ್ನು ಮೀರಿ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಈ ಮಧ್ಯೆ ಹಲವಾರು ಸಮುದಾಯದ ಸದಸ್ಯರು ಬೆಳಗಾವಿ ಟಿಕೆಟ್ಗಳನ್ನು ಕಾಯ್ದಿರಿಸಿದ್ದಾರೆ. ಕೆಲವು ಸಮುದಾಯದ ಸದಸ್ಯರು ಅನೇಕ ಹೋಟೆಲ್ಗಳನ್ನು ಈಗಾಗಲೇ ಬುಕ್ ಮಾಡಿರುವುದರಿಂದ ವಸತಿ ಹುಡುಕುವುದು ಕಷ್ಟ ಎಂದು ಹೇಳಿದರು. ಸುಮಾರು 90 ನಿಮಿಷಗಳ ದೂರದಲ್ಲಿರುವ ಹುಬ್ಬಳ್ಳಿಯ ಅನೇಕ ಹೋಟೆಲ್, ಲಾಡ್ಜ್ ಗಳಲ್ಲಿ ಕೆಲವು ತಂಗಲು ವ್ಯವಸ್ಥೆ ಮಾಡಲಾಗಿದೆ.
Advertisement