ಕೇಸರಿ ಪಾಳಯದ ಭದ್ರಕೋಟೆ ಕರಾವಳಿ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಕ್ಲೀನ್ ಸ್ವೀಪ್? ಕಮಾಲ್ ಮಾಡಲಿದ್ಯಾ ಕಾಂಗ್ರೆಸ್!
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿವೆ. ಅಂತೆಯೇ 2018ರಲ್ಲಿ ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಿರುವ ಕರಾವಳಿ ಕರ್ನಾಟಕದಲ್ಲಿ ಕೇಸರಿ ಪಕ್ಷ ಒಟ್ಟು 19 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿತ್ತು.
Published: 01st April 2023 09:22 AM | Last Updated: 01st April 2023 01:59 PM | A+A A-

ಆರ್. ವಿ ದೇಶಪಾಂಡೆ,ರಮಾನಾಥ ರೈ ಮತ್ತು ವಿನಯ್ ಕುಮಾರ್ ಸೊರಕೆ
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿವೆ. ಅಂತೆಯೇ 2018ರಲ್ಲಿ ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಿರುವ ಕರಾವಳಿ ಕರ್ನಾಟಕದಲ್ಲಿ ಕೇಸರಿ ಪಕ್ಷ ಒಟ್ಟು 19 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿತ್ತು.
ಅದಾದ ನಂತರ 2019 ರ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲುವ ಮೂಲಕ ಸಂಖ್ಯೆ 17ಕ್ಕೇರಿತು. ಈ ಬಾರಿ, ಮೋದಿ ಅಂಶ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಮೇಲೆ ಬಿಜೆಪಿ ತನ್ನ ಕೋಟೆಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.
ಆದರೆ ಆಡಳಿತ ವಿರೋಧಿ ಅಂಶ ಮತ್ತು ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ಭದ್ರಕೋಟೆಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಒಂದೋ ಎರಡೋ ಕ್ಷೇತ್ರಗಳನ್ನು ಹೊರತುಪಡಿಸಿದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೆಡಿಎಸ್, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ಎಎಪಿ ಮತ್ತು ಎಸ್ಡಿಪಿಐ ಇಲ್ಲಿ ಯಾವುದೇ ಪ್ರಭಾವ ಬೀರಲಿದೆಯೇ ಎಂದು ಹೇಳಲು ಸಾಧ್ಯವಿಲ್ಲ.
ಕೇವಲ ಎರಡು ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಈ ಬಾರಿ ಹೆಚ್ಚಿನ ಕ್ಷೇತ್ರ ಗಳಿಸಲು ಹವಣಿಸುತ್ತಿದೆ. ಸರಿಯಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಪಕ್ಷವು ಇನ್ನೂ ಕೆಲವು ಸ್ಥಾನಗಳನ್ನು ಗಳಿಸಬಹುದು. ಆದರೆ ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಪಸ್ವರ ಎದ್ದಿದೆ. ಬಂಟ್ವಾಳ, ಭಟ್ಕಳ ಮತ್ತು ಕಾಪುಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ: ಕಾಂಗ್ರೆಸ್
ಈ ಭಾಗದಲ್ಲಿ ಕಣಕ್ಕಿಳಿದಿರುವ ಆರ್.ವಿ.ದೇಶಪಾಂಡೆ, ಬಿ.ರಮಾನಾಥ್ ರೈ ಮತ್ತು ವಿನಯ್ ಕುಮಾರ್ ಸೊರಕೆ ಅವರಂತಹ ದಿಗ್ಗಜರು ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಮತದಾರರಲ್ಲಿ ಭಾವನಾತ್ಮಕ ಮನವಿ ಮಾಡಿದ್ದಾರೆ. ಹಿಂದುಳಿದ ವರ್ಗಗಳನ್ನು ಮರಳಿ ಗೆಲ್ಲಿಸಲು ಪಕ್ಷವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ಬಿಜೆಪಿ ಅವರನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
2018 ರಲ್ಲಿ, ಪರೇಶ್ ಮೇಸ್ತಾ ಸಾವಿನ ಸುತ್ತಲಿನ ಸಮಸ್ಯೆಗಳಿಂದಾಗಿ ಬಿಜೆಪಿ ಜಯಗಳಿಸಿತು. ಆದರೆ ಸಿಬಿಐ ನಂತರ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು.
'ನೈತಿಕ ಪೋಲೀಸ್ ಗಿರಿ ಹಾಗೂ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಹೈಲೈಟ್ ಮಾಡಿ ಬಿಜೆಪಿ ಸೋಲಿಸಲು ತಂತ್ರ ರೂಪಿಸುತ್ತಿದೆ. ಸಾಕಷ್ಟು ಮಟ್ಟದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಈ ಭಾಗ ವಿಫಲವಾಗಿದೆ , ಇದರ ಪರಿಣಾಮವಾಗಿ ಯುವಕರು ವಲಸೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಂಗ್ರೆಸ್ನ 'ಅಲ್ಪಸಂಖ್ಯಾತ ಓಲೈಕೆ' ರಾಜಕೀಯದಿಂದ ಉಂಟಾಗಿರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎನ್ಐಎ ನಡೆಸಿದ ಭಯೋತ್ಪಾದನಾ ಚಟುವಟಿಕೆಗಳ ಹಾಗೂ ಹಲವು ಆರೋಪಿಗಳ ಬಂಧನವನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಿರುಗಿಸಿಕೊಳ್ಳುತ್ತಿದೆ. ಬಿಜೆಪಿಯಿಂದ ಮಾತ್ರ ಈ ಭಾಗವನ್ನು ದೇಶವಿರೋಧಿ ಕೆಲಸಗಳಿಂದ ಮುಕ್ತಿಗೊಲಿಸಲು ಸಾಧ್ಯ ಎಂಬ ಸಂದೇಶ ರವಾನೆಗೆ ಮುಂದಾಗಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಆಂತರಿಕ ವಿಮರ್ಶೆ ಆರಂಭ; ಗೆಲುವಿನ ಅಂಶಗಳೇ ಪ್ರಮುಖ ಮಾನದಂಡ!
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದು ಹಾಗೂ ಪ್ರಮುಖ ಜಂಕ್ಷನ್ನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಪಕ್ಷವು ನಾರಾಯಣ ಗುರು ಮತ್ತು ಬಿಲ್ಲವರನ್ನು ಕಡೆಗಣಿಸುತ್ತಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದೆ. ಪಕ್ಷದ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಿಂದ ಹಲವು ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು, ಆದರೆ ಪಕ್ಷವು ಬೆಂಕಿಯನ್ನು ನಂದಿಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಲಿಂಗಾಯತರು ಮತ್ತು ಒಕ್ಕಲಿಗರ ಕೋಟಾ ಹೆಚ್ಚಳ, ದಲಿತರಿಗೆ ಒಳಮೀಸಲಾತಿ ಹೆಚ್ಚಿಸುವ ಸಂಪುಟದ ಇತ್ತೀಚಿನ ನಿರ್ಧಾರವು ಈ ಪ್ರದೇಶದಲ್ಲಿ ಯಾವುದೇ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ 4 ಪರ್ಸೆಂಟ್ ಮುಸ್ಲಿಂ ಕೋಟಾ ರದ್ದುಗೊಳಿಸುವುದರಿಂದ ಏನಾದರೂ ಪರಿಣಾಮ ಬೀರುತ್ತದೆಯೇ ಎಂದು ನೋಡಬೇಕು.
ಇಡಬ್ಲ್ಯೂಎಸ್ ನಲ್ಲಿ ಮುಸ್ಲಿಮರಿಗೆ ಕೋಟಾವನ್ನು ಪಡೆಯಲು ಅವಕಾಶ ನೀಡುವುದರಿಂದ ಕರಾವಳಿ ಪ್ರದೇಶದ ಮೇಲ್ಜಾತಿಗಳ ಮೇಲೆ ಎಲ್ಲಕ್ಕಿಂತ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಭಾವನೆ ಇದೆ.