ಬೆಂಗಳೂರು: ಕಾಂಗ್ರೆಸ್ ನಾಯಕರ ನಡುವೆ ಆಂತರಿಕ ಪೈಪೋಟಿ ಇರುವುದರಿಂದ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೆ ಧೀರ್ಘ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಮೂರನೇ ಪಟ್ಟಿ ಹೊರ ಬರಲ್ಲ. ಕಾದು ನೋಡಿ, ಅಲ್ಲಿ ನಾಯಕರ ನಡುವೆ ಕಿತ್ತಾಟವಿದೆ ಎಂದರು.
ಹಿರಿಯರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಮಣೆ ಕುರಿತಂತೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಎಲ್ಲರೂ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಟಿಕೆಟ್ ನಿರಾಕರಿಸಿದಾಗ ನೋವು ಸಹಜ. ಆದರೆ ಬಿಜೆಪಿ ಸದಸ್ಯರು ರಾಷ್ಟ್ರ ಮೊದಲು ಎಂಬ ಸಿದ್ದಾಂತಕ್ಕಾಗಿ ಕೆಲಸ ಮಾಡುತ್ತಾರೆ. ಪಕ್ಷದ ಎಲ್ಲರೂ ಒಗ್ಗಟ್ಟಾಗಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಬಣಗಳಾಗಿ ವಿಭಜನೆಯಾಗಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಲ್ಲಿ ಪೈಪೋಟಿ ಕಂಡುಬರುತ್ತಿದೆ. ಬಿಜೆಪಿ 212 ಸ್ಥಾನಗಳ ಪೈಕಿ 66ರಲ್ಲಿ ಹೊಸಬರಿಗೆ ಟಿಕೆಟ್ ನೀಡಿದ್ದು, ಚುನಾವಣೆಯಲ್ಲಿ ಪಕ್ಷ ಉತ್ತಮ ಫಲಿತಾಂಶ ಪಡೆಯಲಿದೆ ಎಂದರು.
ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರ ಅಲೆಯಿದೆ. ಕರ್ನಾಟಕದ ಪರಿಸ್ಥಿತಿ ಈಗ ಗಟ್ಟಿಯಾಗಿದೆ. ಸುಲಭ ಜೀವನ ನಿರ್ವಹಣೆ ಅಥವಾ ಅನ್ವೇಷಣೆ ಎಲ್ಲದರಲ್ಲೂ ಪ್ರಗತಿಯಾಗಿದ್ದು, ಜನರ ಭಾವನೆ ಬಿಜೆಪಿ ಜೊತೆಗಿದೆ ಎಂದು ಅವರು ಹೇಳಿದರು.
Advertisement