ಅಲುಗಾಡುತ್ತಿದೆ ಬಿಜೆಪಿ ಲಿಂಗಾಯತ ಮೂಲ: ಸಂತೋಷ್ 'ಕು'ತಂತ್ರಕ್ಕೆ ಕೇಸರಿ ಪಡೆ ವಿಲವಿಲ; ಶೆಟ್ಟರ್ ಸೇರ್ಪಡೆಯಿಂದ 'ಕೈ'ಗೆ ಆನೆ ಬಲ!

ಶೆಟ್ಟರ್ ಅವರದ್ದು ರಾಜಕೀಯದಲ್ಲಿ 40 ವರ್ಷಗಳ ತಪಸ್ಸು, ಅವರು ಪಕ್ಕಾ ಜನಸಂಘ-ಆರ್‌ಎಸ್‌ಎಸ್ ಕುಟುಂಬದಿಂದ ಬಂದವರಾಗಿದ್ದರು. ಶೆಟ್ಟರ್ ಅವರ ತಂದೆ ಮೇಯರ್ ಆಗಿದ್ದರು ಮತ್ತು ಅವರ ಚಿಕ್ಕಪ್ಪ ಕೂಡ ರಾಜಕೀಯದಲ್ಲಿದ್ದರು.
ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್
ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್

ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯಂತೆ ಲಿಂಗಾಯತ ಬೆಂಬಲವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆಯೇ? ಎಂಬ ಅನುಮಾನ ಮೂಡುತ್ತಿದೆ. ಕಾಂಗ್ರೆಸ್ ಪಕ್ಷ ಧರ್ಮ ಒಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಧರ್ಮ ರಾಜಕಾರಣ ಮಾಡಿತ್ತು, ಹೀಗಾಗಿ ಅತೀವ ಪ್ರಮಾಣದ ಲಿಂಗಾಯತ ಮತಗಳು ಬಿಜೆಪಿ ಪಾಲಾಗಿದ್ದವು.

ಆದರೆ ಈ ಬಾರಿ ಬಿಜೆಪಿ ಹೆಚ್ಚ ದುರ್ಬಲವಾಗಿ ಕಾಣುತ್ತಿದೆ, ಸಮುದಾಯದ ಕ್ರೋಢೀಕೃತ ಬೆಂಬಲವನ್ನು ಪಡೆಯಲು ಹೆಣಗಾಡುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಕ್ಷ ತೊರೆದಿರುವುದರಿಂದ ಬಿಜೆಪಿ ಮತ್ತಷ್ಟು ದುರ್ಬಲವಾಗುತ್ತಿದೆ ಎನ್ನಲಾಗಿದೆ.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ನೋವಿನಿಂದ ಅಧಿಕಾರದಿಂದ ಕೆಳಗಿಳಿದ ನಂತರ ಬಿಜೆಪಿಗೆ ಸಮುದಾಯದ ಬೆಂಬಲ ಕ್ಷೀಣಿಸಿತ್ತು, ಈಗ ಶೆಟ್ಟರ್ ನಿರ್ಗಮನದ ನಂತರ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಲಿಂಗಾಯತರು ಮತ್ತು ಒಕ್ಕಲಿಗರ ನಾಯಕತ್ವವನ್ನು ಕೊನೆಗಾಣಿಸಲು ಆರ್‌ಎಸ್‌ಎಸ್‌ನಲ್ಲಿ ಹಿಡನ್ ಅಜೆಂಡಾ ಇದೆ ಎಂದು ಬಿಜೆಪಿ ಎಂಎಲ್‌ಸಿ ಎ.ಎಚ್.ವಿಶ್ವನಾಥ್ ಆರೋಪಿಸಿದರು.

ಸಂತೋಷ್ ಮಾಡಿದ್ದು ತಪ್ಪು, ಮಹೇಶ್ ಟೆಂಗಿನಕಾಯಿ (ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ) ಸಂತೋಷ್ ಅವರ ಅನುಯಾಯಿ, ಹೀಗಾಗಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಟೆಂಗಿನಕಾಯಿ ಅವರೇ ಟಿಕೆಟ್ ಬಗ್ಗೆ ಸ್ವತಃ ಉತ್ಸುಕರಾಗಿರಲಿಲ್ಲ. ಆದರೆ ಸಂತೋಷ್, ಶೆಟ್ಟರ್ ಅವರನ್ನು ಹೊರಹಾಕಲು ಬಯಸಿದ್ದರು ಎಂಬುದು ಸ್ಪಷ್ಟವಾಗಿದೆ. ಶೆಟ್ಟರ್ ಅವರದ್ದು ರಾಜಕೀಯದಲ್ಲಿ 40 ವರ್ಷಗಳ ತಪಸ್ಸು, ಅವರು ಪಕ್ಕಾ ಜನಸಂಘ-ಆರ್‌ಎಸ್‌ಎಸ್ ಕುಟುಂಬದಿಂದ ಬಂದವರಾಗಿದ್ದರು. ಶೆಟ್ಟರ್ ಅವರ ತಂದೆ ಮೇಯರ್ ಆಗಿದ್ದರು ಮತ್ತು ಅವರ ಚಿಕ್ಕಪ್ಪ ಕೂಡ ರಾಜಕೀಯದಲ್ಲಿದ್ದರು.

ಶೆಟ್ಟರ್ ಅವರ ಮೇಲೆ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೃಪಾಕಟಾಕ್ಷವಿತ್ತು, ಆದರೆ ಬಿಎಲ್ ಸಂತೋಷ್ ಕಾರಣದಿಂದ ಅವರಿಗೆ ಸಚಿವ ಸಂಪುಟದಲ್ಲು ಅವಕಾಶ ನೀಡಿರಲಿಲ್ಲ, ಸಂತೋಷ್ ಅವರು ವಿಧಿಸಿದ ಕಠಿಣ ನಿರ್ಬಂಧಗಳು ಬೊಮ್ಮಾಯಿ ಮತ್ತು ಬಿಎಸ್ ವೈ ಕೈ ಕಟ್ಟಿಹಾಕಿತ್ತು, ಪರಿಸ್ಥಿತಿಯ ಕೈ ಗೆ ಸಿಲುಕಿ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

2018 ರ ಚುನಾವಣೆಯಲ್ಲಿ ಕಾಂಗ್ರೆಸ್ 38% ಮತಗಳನ್ನು ಗಳಿಸಿತು, ಬಿಜೆಪಿಗಿಂತ 1.5% ಹೆಚ್ಚು. 28 ಸ್ಥಾನಗಳಲ್ಲಿ ಪಕ್ಷವು 10,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿತ್ತು. ಲಿಂಗಾಯತ ಮತಗಳಲ್ಲಿ ಅಲ್ಪ ಪ್ರಮಾಣದ ಇಳಿಕೆಯಾದರೂ ಬಿಜೆಪಿಗೆ ಈ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 17-20% ಮತಗಳನ್ನು ಹೊಂದಿರುವ ಲಿಂಗಾಯತರು ಸುಮಾರು 150 ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಮಾತನಾಡಿ, ಶೆಟ್ಟರ್ ಅವರೊಂದಿಗೆ ಬಿಜೆಪಿ ವ್ಯವಹರಿಸಿದ ರೀತಿ ಕುತಂತ್ರವಲ್ಲದೆ ಬೇರೇನೂ ಅಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆ ಖಂಡಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com