'ಕರ್ನಾಟಕಕ್ಕೆ ಡಬಲ್ ಎಂಜಿನ್ ಸರ್ಕಾರ ಬೇಕಾ, ರಿವರ್ಸ್ ಗೇರ್ ಸರ್ಕಾರ ಬೇಕಾ ನೀವೇ ನಿರ್ಧರಿಸಿ': ಅಮಿತ್ ಶಾ

ಕರ್ನಾಟಕದಲ್ಲಿ ಸುಭದ್ರ ಮತ್ತು ಸುಸ್ಥಿರ ಸರ್ಕಾರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರೋಡ್ ಶೋದಲ್ಲಿ ಮಾತನಾಡಿದ ಅಮಿತ್ ಶಾ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರೋಡ್ ಶೋದಲ್ಲಿ ಮಾತನಾಡಿದ ಅಮಿತ್ ಶಾ
Updated on

ಹುಬ್ಬಳ್ಳಿ: ಕರ್ನಾಟಕದಲ್ಲಿ ಸುಭದ್ರ ಮತ್ತು ಸುಸ್ಥಿರ ಸರ್ಕಾರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ಕರ್ನಾಟಕಕ್ಕೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕಾ ಅಥವಾ ಕಾಂಗ್ರೆಸ್‌ನ ರಿವರ್ಸ್ ಗೇರ್ ಸರ್ಕಾರ ಬೇಕಾ ಎಂದು ಜನರು ನಿರ್ಧರಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಸಂವಿಧಾನದ ಅಡಿಯಲ್ಲಿ ಬರುವುದಿಲ್ಲ. ಆದರೆ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅದನ್ನು ಮುಂದುವರಿಸಿದೆ. ರಾಜ್ಯವನ್ನು ಎಟಿಎಂನಂತೆ ನೋಡುತ್ತಿರುವ ಕಾಂಗ್ರೆಸ್‌ಗೆ ಕರ್ನಾಟಕದ ಹಿತ ಮುಖ್ಯವಲ್ಲ. ಇನ್ನು ಜೆಡಿಎಸ್ ವಂಶ ರಾಜಕಾರಣ ಮಾಡುತ್ತದೆ. ಆರಂಭದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ನಂತರ ಅಧಿಕಾರ ಪಡೆಯಲು ಅದೇ ಪಕ್ಷದೊಂದಿಗೆ ಕೈಜೋಡಿಸುತ್ತದೆ, ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡುವಂತೆ ನಾನು ಕರ್ನಾಟಕದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಆರೋಪಿಸಿದರು. 

ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಪಿಎಫ್‌ಐ ಸದಸ್ಯರಿಗೆ ಕಾಂಗ್ರೆಸ್ ವಿಶೇಷ ಒಲವು ತೋರಿಸುತ್ತದೆ ಎಂದು ಸಹ ಅಮಿತ್ ಶಾ ಆರೋಪಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದೇಶವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕದಲ್ಲಿ 24 ಪ್ರಕರಣಗಳ ತನಿಖೆ ನಡೆಸುತ್ತಿದೆ. ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಕಾಂಗ್ರೆಸ್ ಹಿಂದಿನಿಂದಲೂ ಅಗೌರವ ತೋರಿಸುತ್ತಾ ಬಂದಿದೆ. ರಾಜ್ಯ ಮತ್ತು ನೆರೆಯ ಗೋವಾದಲ್ಲಿ ಒಂದೇ ಸರ್ಕಾರವಿದ್ದಾಗಲೂ ಕಾಂಗ್ರೆಸ್‌ಗೆ ಮಹದಾಯಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ರೈತರು ಮಹದಾಯಿಗೆ ನೀರು ಕೊಡುವಂತೆ ಒತ್ತಾಯಿಸಿದಾಗ ನವಲಗುಂದದಲ್ಲಿ ರೈತರ ಮೇಲೆ ಗುಂಡು ಹಾರಿಸಲು ಕಾಂಗ್ರೆಸ್ ಸರ್ಕಾರ ಆದೇಶ ನೀಡಿತ್ತು. ಬಿಜೆಪಿ ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ಸಲ್ಲಿಸುತ್ತದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳನ್ನು ವಿವರಿಸಿದ ಅಮಿತ್ ಶಾ, ಹುಬ್ಬಳ್ಳಿ-ಧಾರವಾಡದಲ್ಲಿ ಸಾವಿರ ಕೋಟಿ ರೂಪಾಯಿಗಳ 62 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆ, ಕಳಸಾ-ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ನೀಡಿದ ಅನುದಾನವನ್ನು ವಿವರಿಸಿದರು. ರೈಲ್ವೆ, ಆರೋಗ್ಯ, ಶಿಕ್ಷಣ, ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆ ಮೂಲಸೌಕರ್ಯ ಮತ್ತು ಸಮಾಜ ಕಲ್ಯಾಣದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು ಕೇಂದ್ರವು ಶ್ರಮಿಸುತ್ತಿದೆ ಎಂದು ಹೇಳಿದರು.

ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರವು 2009 ಮತ್ತು 2014 ರ ನಡುವೆ ಕರ್ನಾಟಕಕ್ಕೆ 94 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಒದಗಿಸಿದೆ. ಆದರೆ ನರೇಂದ್ರ ಮೋದಿ ಸರ್ಕಾರವು 2,26,418 ಕೋಟಿ ರೂಪಾಯಿಗಳನ್ನು ನೀಡಿದ್ದು, ಇದು ಕಾಂಗ್ರೆಸ್ ಸರ್ಕಾರಕ್ಕಿಂತ ಶೇಕಡಾ 140ರಷ್ಟು ಹೆಚ್ಚು ಎಂದು ಹೇಳಿದರು.

ಲಿಂಗಾಯತರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ: ಕಾಂಗ್ರೆಸ್ ಇಬ್ಬರು ಲಿಂಗಾಯತ ನಾಯಕರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿ ಇಬ್ಬರನ್ನೂ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅಗೌರವದಿಂದ ಸಿಎಂ ಹುದ್ದೆಯಿಂದ ತೆಗೆದುಹಾಕಿದ್ದರು. ಲಿಂಗಾಯತರ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ವಾಸ್ತವವಾಗಿ, ಹಾಲಿ ಲಿಂಗಾಯತ ಶಾಸಕರಿಗೆ ಟಿಕೆಟ್ ನಿರಾಕರಿಸಿದವರಿಗೆ ಬಿಜೆಪಿ ಸರ್ಕಾರ ಟಿಕೆಟ್ ಖಾತ್ರಿಪಡಿಸಿದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com