ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ, ಯಾವಾಗ ಬೇಕಾದರೂ ಸರ್ಕಾರ ಬೀಳಬಹುದು: ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು ತಮ್ಮ ವಿರುದ್ಧದ ಕೇಸ್ ಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜೊತೆ ಚೌಕಾಸಿ ಮಾಡುತ್ತಿದ್ದಾರೆ ಎಂದು ಜನತಾ ದಳ-ಜಾತ್ಯತೀತ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು ತಮ್ಮ ವಿರುದ್ಧದ ಕೇಸ್ ಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜೊತೆ ಚೌಕಾಸಿ ಮಾಡುತ್ತಿದ್ದಾರೆ ಎಂದು ಜನತಾ ದಳ-ಜಾತ್ಯತೀತ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.

ಆ ಪ್ರಭಾವಿ ಸಚಿವ ಕಾಂಗ್ರೆಸ್ ಪಕ್ಷವನ್ನು ತೊರೆದು '50 ರಿಂದ 60 ಶಾಸಕರೊಂದಿಗೆ' ಬಿಜೆಪಿ ಸೇರಬಹುದು ಮತ್ತು ಈ ಸಂಬಂಧ ಅವರು ಬಿಜೆಪಿ ನಾಯಕರೊಂದಿಗೆ 'ಮಾತುಕತೆ' ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ, "ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಈ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು. ಪ್ರಭಾವಿ ಸಚಿವರೊಬ್ಬರು ತಮ್ಮ ಮೇಲಿನ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ" ಎಂದರು.

ಆ ಪ್ರಭಾವಿ ಸಚಿವರ ಹೆಸರು ಹೇಳುವಂತೆ ವರದಿಗಾರರು ಕೇಳಿದಾಗ, ಸಣ್ಣಪುಟ್ಟ ನಾಯಕರಿಂದ ಇದು ಸಾಧ್ಯವೇ? ದೊಡ್ಡವರು, ಅದರಲ್ಲೂ ಪ್ರಭಾವಿಗಳೇ ಈ ಸಾಹಸ ಮಾಡಲು ಸಾಧ್ಯ. ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದುಬಿಡ್ತಿನಿ. ಅಲ್ಲಿಯವರೆಗೂ ಐದಾರೂ ತಿಂಗಳ ರಿಲೀಫ್ ಕೊಡಿ ಅಂತ ಬೇಡಿಕೊಂಡು ಹೋಗಿದ್ದು ಇದೆ ಎಂದು ಕುಮಾರಸ್ವಾಮಿ ಅವರು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ಕರ್ನಾಟಕದಲ್ಲಿ ಯಾವ ಕ್ಷಣದಲ್ಲಾದರೂ 'ಮಹಾರಾಷ್ಟ್ರದಲ್ಲಾದಂತೆ' ಇಲ್ಲಿ ಯಾರು ಬಂಡಾಯ ನಾಯಕ  ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಈಗಿರುವ ರಾಜಕೀಯ ವಾತಾವರಣ ನೋಡಿದರೆ ಏನು ಬೇಕಾದರೂ ಆಗಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com