'ಆಳುವ ಎಡಬಿಡಂಗಿಗಳಿಂದ ಇತಿಹಾಸ ತಿರುಚುವ ಹುನ್ನಾರ; ಗೋಮೂತ್ರ ಶ್ರೇಷ್ಠವಾಗಿದ್ದರೆ ನೀವೇ ಕುಡಿಯಿರಿ, ನಮ್ಮನ್ನು ಸ್ವಚ್ಛವಾಗಿರಲು ಬಿಡಿ'

ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಪ್ರಕಾಶ್ ರಾಜ್
ಪ್ರಕಾಶ್ ರಾಜ್

ಮೈಸೂರು: ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ವಾಟ್ಸ್​ಆ್ಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ, ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಆರ್​ಎಸ್​ಎಸ್ ವಿರುದ್ಧ ಪರೋಕ್ಷವಾಗಿ ಬಹುಭಾಷಾ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಜೈಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಅಶೋಕಪುರಂ ಬಳಿ ಇರುವ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಂಗಾವ್ ಸ್ಥಂಭಕ್ಕೆ ರವಿವಾರ ಪುಷ್ಪಾರ್ಚನೆ ಮಾಡಿ ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ  ಅವರಿಗೆ ಅನುಕೂಲಕರವಾಗುವಂತೆ ಇತಿಹಾಸವನ್ನು ಬದಲಿಸಲು ಹೊರಟಿದಿದ್ದಾರೆ ಎಂದು ಆರೋಪಿಸಿದರು.

ದೇಶಕ್ಕೆ‌ ಇಂತಹ ಸಂಘಟನೆಗಳು ಅಪಾಯಕಾರಿ. ಯಾರು ಸಂಘಟನೆಯೊಂದನ್ನು ನಿಷೇಧ ಮಾಡಿದ್ದರೂ ಅಂತಹ ಪಟೇಲರಿಗೆ ಮೂರು ಸಾವಿರ ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಸೆಲ್ಫಿ ತೆಗೆದುಕೊಳ್ಳಲು ಆಗುತ್ತದೆ. ಇವರ ಕಾಗಕ್ಕ ಗುಬಕ್ಕ ಕಥೆಗಳನ್ನು ಜನರು ನಂಬುವುದಿಲ್ಲ. ಗೋ ಮೂತ್ರ ಕುಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಕುಡಿದು ತೋರಿಸಲಿ. ಜೈ ಭೀಮ್ ಅಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ತಿರುಗೇಟು ಕೊಟ್ಟರು.

ವ್ಯಾಟ್ಸ್‌ಆ್ಯಪ್ ಯೂನಿವರ್ಸಿಟಿ ಮೂಲಕ ಕಾಗಕ್ಕ ಗುಬ್ಬಕ್ಕನ ಕಥೆಯಂತಹ ಇತಿಹಾಸವನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಬುಲ್‌ಬುಲ್ ಹಕ್ಕಿ ಮೇಲೆ ಸಾವರ್ಕರ್ ಪ್ರಯಾಣ, ಗೋಮೂತ್ರ ಸೇವನೆ ಆರೋಗ್ಯಕರ ಎಂಬ ಹಸಿಸುಳ್ಳು ಇದಕ್ಕೆ ಇತ್ತೀಚಿನ ನಿದರ್ಶನವಾಗಿದೆ. ಗೋಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕುಡಿಯಿರಿ. ನಮ್ಮನ್ನು ಸ್ವಚ್ಛವಾಗಿರಲು ಬಿಡಿ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com