ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ, ಒಂದು ಕಡೆ ಬಾಹುಬಲ‌ ಚಾಚಿದರೆ ಆಗಲ್ಲ, ಅರ್ಥ ಆಯ್ತೇನಪ್ಪ!

ಒಂದು ಕಡೆ ಬಾಹುಬಲ‌ ಚಾಚಿದರೆ ಆಗಲ್ಲ. ಅರ್ಥ ಆಯ್ತೇನಪ್ಪ.. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತದೆ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ. ನಾನು ನಿಮ್ಮ ಮನೆ ಮೂಲ ದೇವರು..
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮಂಡ್ಯ: ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಚಟುವಟಿಗಳು ಬಿರುಸಿನಿಂದ ಸಾಗುತ್ತಿದ್ದು, ಈ ಮಧ್ಯೆ ಸಿದ್ದರಾಮಯ್ಯ ಅವರ ಮನೆ ದೇವರು ನುಡಿದಿರುವ ಭವಿಷ್ಯ ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ.

ಸಿದ್ದರಾಮಯ್ಯ ಅವರ ಮನೆ ದೇವರು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿರುವ ಆದಿನಾಡು ಚಿಕ್ಕಮ್ಮ ದೇವಿ ದೇವಾಲಯಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಇತ್ತೀಚಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಆದಿ ನಾಡು ಚಿಕ್ಕಮ್ಮತಾಯಿ ಎಚ್ಚರಿಕೆ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ನಿಂತರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ .

ಒಂದು ಕಡೆ ಬಾಹುಬಲ‌ ಚಾಚಿದರೆ ಆಗಲ್ಲ. ಅರ್ಥ ಆಯ್ತೇನಪ್ಪ.. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತದೆ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ. ನಾನು ನಿಮ್ಮ ಮನೆ ಮೂಲ ದೇವರು, ಅವಕಾಶ ಸಿಕ್ಕಿದರೆ, ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು" ಎಂದು ದೇವಾಲಯದ ಅರ್ಚಕ  ಲಿಂಗಣ್ಣ ಮೈ ಮೇಲೆ ಬಂದ ಶಕ್ತಿ ದೇವತೆ ಸೂಚನೆ ನೀಡಿದೆ ಎನ್ನಲಾಗಿದೆ.

ಒಂದೇ ಕಡೆ ನಿಂತ್ರೆ ಗೆಲುವು ಕಷ್ಟ, ಪ್ರಬಲ ಶಕ್ತಿಗಳ ವಿರೋಧವಿದೆ. ಎರಡು ಕಡೆ ಬಾಹುಬಲ ಚಾಚಬೇಕು ಎರಡು ಭುಜಬಲದಲ್ಲಿ ನಿಲ್ಲಬೇಕೆಂದು ದೇವಿ ಆದೇಶ ನೀಡಿದ್ದು, ಒಂದೇ ಕಡೆ ನಿಂತರೆ ರಾಜಕೀಯ ಭವಿಷ್ಯಕ್ಕೆ ಕುತ್ತು ಎಂದು ಮನೆತನದ ಶಕ್ತಿ ದೇವತೆ ಆದೇಶಿಸಿದೆ. ಅಲ್ಲದೇ ಪ್ರತಿ ವರ್ಷ ಬಂದು ನನ್ನ ದರ್ಶನ ಪಡೆಯಬೇಕು ಎಂದು ಸೂಚಿಸಿದೆ.

ಕಳೆದ ಬಾರಿ ಪುತ್ರ ಯತೀಂದ್ರ ಅವರಿಗಾಗಿ ತಮ್ಮ ವರುಣಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದ ಸಿದ್ದರಾಮಯ್ಯ ಬದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಳಿದಿದ್ದರು. ಬದಾಮಿ ಜನ ಸಿದ್ದರಾಮಯ್ಯ ಅವರ ಕೈ ಹಿಡಿದಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಕಂಡಿದ್ದರು. ಹೀಗಾಗಿ ಈ ಬಾರಿ ಈಗಾಗಲೇ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವ ಬಗ್ಗೆ ಘೋಷಣೆ ಮಾಡಿರುವ ಸಿದ್ದರಾಮಯ್ಯ ಮನೆ ದೇವರ ಸೂಚನೆಯಂತೆ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎನ್ನುವ ಕುತೂಹಲ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com