ಬೆಂಗಳೂರು: ಬಿಜೆಪಿ ಪಕ್ಷ ಹುಟ್ಟಿದ್ದೇ ಸುಳ್ಳಿನಲ್ಲಿ,ಸುಳ್ಳೇ ಬಿಜೆಪಿಯ ತಂದೆ ತಾಯಿ, ಸುಳ್ಳೇ ಬಿಜೆಪಿಯ ಬಂಧು ಬಳಗ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಸುಳ್ಳು ಸುದ್ದಿ ಹರಡಲು ಸಿ.ಟಿ ರವಿ ನೇತೃತ್ವದಲ್ಲಿ ಪ್ರತ್ಯೇಕವಾದ ವಾಟ್ಸಾಪ್ ಇಲಾಖೆ ರಚನೆ ಬಿಜೆಪಿಯ ಪ್ರಣಾಳಿಕೆ, ಭರವಸೆ ಆಗಬಹುದು ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಭರವಸೆಗಳನ್ನು ಟೀಕಿಸುತ್ತಿರುವ ಬಿಜೆಪಿಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿ ಜನತೆಗೆ ಬೆಲೆ ಏರಿಕೆಯನ್ನಲ್ಲದೆ ಬೇರೇನು ಕೊಡಬಲ್ಲದು. ಜನಾಭಿಪ್ರಾಯದಿಂದಂತೂ ಅಧಿಕಾರಕ್ಕೆ ಬರುವುದಿಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದೇ ಆದರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಇನ್ನಷ್ಟು ಏರಿಸುವುದೇ ಬಿಜೆಪಿ ಅಜೆಂಡವಾಗಿರುತ್ತದೆ. ಮುಂದೆ ಅಧಿಕಾರಕ್ಕೆ ಬಂದಲ್ಲಿ ಶಾಸಕರ ಸಿಡಿಗಳಿಗೆ ಇಸ್ರೇಲ್ ತಂತ್ರಜ್ಞಾನದ ರಕ್ಷಣೆಯ ಯೋಜನೆ ರೂಪಿಸಬಹುದು! ಸ್ಯಾಂಟ್ರೋ ರವಿ ನೇತೃತ್ವದ ಸಮಿತಿ ರಚಿಸಿ ಪೈರಸಿ ನಿಷೇಧವನ್ನು ಗಟ್ಟಿಗೊಳಸಬಹುದು ಎಂದು ಟೀಕಿಸಿದೆ.
ಅಧಿಕಾರಕ್ಕಾಗಿ ಬಿಜೆಪಿಗಿರುವ ತಂತ್ರ ಒಂದೇ - ಆಪರೇಷನ್ ಕಮಲ. ಆಪರೇಷನ್ ಕಮಲಕ್ಕಾಗಿ ಐಷಾರಾಮಿ ರೆಸಾರ್ಟ್ಗಳ ನಿರ್ಮಾಣ ಬಿಜೆಪಿಯ ಭರವಸೆಗಳಾಗಬಹುದು! ಗಾಂಧಿ, ಅಂಬೇಡ್ಕರ್ ಬದಲು ಗೋಡ್ಸೆ, ಬಿಜೆಪಿಗರ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡರ ಪ್ರತಿಮೆ ನಿರ್ಮಿಸಿದರೂ ಆಶ್ಚರ್ಯವಿಲ್ಲ! ಜನರ ಸುಲಿಗೆಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್ ಆಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
Advertisement