ಮಾಜಿ ಸಿಎಂ ನಿವಾಸ ಮುಂದೆ ಹೈಡ್ರಾಮಾ, ಆತ್ಮಹತ್ಯೆ ಎಚ್ಚರಿಕೆ: ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ನಾನು ಎಲ್ಲಿ ಹೇಳಿದ್ದೇನೆ ಎಂದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ.
ಬೆಂಗಳೂರಿನ ಸಿದ್ದರಾಮಯ್ಯ ಸರ್ಕಾರಿ ನಿವಾಸ ಮುಂದೆ ಕೋಲಾರದ ಅಭಿಮಾನಿಗಳ ಪ್ರತಿಭಟನೆ
ಬೆಂಗಳೂರಿನ ಸಿದ್ದರಾಮಯ್ಯ ಸರ್ಕಾರಿ ನಿವಾಸ ಮುಂದೆ ಕೋಲಾರದ ಅಭಿಮಾನಿಗಳ ಪ್ರತಿಭಟನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ.

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆರಂಭದಲ್ಲಿಯೇ ಹೇಳಿದ್ದರು.ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೋಗಿ ಅಲ್ಲಿ ಘೋಷಣೆ ಮಾಡಿ ಸರ್ವೆ ಮಾಡಿಸಿ ಅಲ್ಲಿನ ಚುನಾವಣಾ ವಾತಾವರಣ ತಮಗೆ ಅನುಕೂಲವಾಗಿಲ್ಲ ಎಂದು ಹಿಂದೆ ಸರಿಯುತ್ತಿದ್ದಾರೆ. ತಮ್ಮ ಸ್ಪರ್ಧೆ ಹೈಕಮಾಂಡ್ ಗೆ ಬಿಟ್ಟ ವಿಚಾರ, ಹೈಕಮಾಂಡ್ ಹೇಳಿದಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ.

ಸಿದ್ದು ನಿವಾಸದ ಎದುರು ಹೈಡ್ರಾಮಾ: ಸಿದ್ದರಾಮಯ್ಯ ಕೋಲಾರ(Kolar)ದಿಂದ ಸ್ಪರ್ಧೆ ಮಾಡುವ ಬಗ್ಗೆ ಇಂದು ಬೆಂಗಳೂರಿನ ಅವರ ಸರ್ಕಾರಿ ನಿವಾಸದ ಮನೆ ಮುಂದೆ ರಾಜಕೀಯ(Politics) ಹೈಡ್ರಾಮಾ ನಡೆದಿದ್ದು, ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಭಿಮಾನಿ ಪಟ್ಟು ಹಿಡಿದಿದ್ದಾರೆ, ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶರ್ಟ್​ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿ ಹೊಡೆದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದು ವಿಚಿತ್ರವಾಗಿತ್ತು. ಸಿದ್ದರಾಮಯ್ಯ ನಿವಾಸದ ಮುಂದೆ ಕಾರ್ಯಕರ್ತರು ಜಮಾಯಿಸಿದ್ದಾರೆ.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಹೈಕಮಾಂಡ್ ಎಲ್ಲಿ ಸ್ಪರ್ಧಿಸುವಂತೆ ಸೂಚಿಸುತ್ತದೋ ಅಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಹೈಕಮಾಂಡ್ ಬಳಿ ಕೇಳಿ ನಿಮಗೆ ತಿಳಿಸುತ್ತೇನೆ ಎಂದು ಇಂದು ಕೋಲಾರದಿಂದ ಬಂದ ಅಭಿಮಾನಿಗಳಿಗೆ ಹೇಳಿದ್ದೇನೆ. ನನ್ನ ಕುಟುಂಬ ಸದಸ್ಯರು, ಹಿತೈಷಿಗಳ, ರಾಜಕೀಯ ಮುಖಂಡರ ಜೊತೆ ಕೂಡ ಚರ್ಚಿಸುತ್ತೇನೆ, ಕೋಲಾರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರು ಒಂದೇ ಕಡೆಗೆ ಅಂಟಿಕೊಂಡು ಇರಬೇಡಿ, 1% ರಿಸ್ಕ್ ಕೂಡ ಬೇಡ ಎಂದಿದ್ದಾರೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ ನಾಯಕರು ನೀವು, ಇಡೀ ರಾಜ್ಯ ಸುತ್ತಾಡಿ, ಜನಾಭಿಪ್ರಾಯ ಹೇಗಿದೆ ಎಂದು ತಿಳಿದುಕೊಂಡು ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ, ನನ್ನ ನಿರ್ಧಾರ ನಾಳೆ ತಿಳಿಸುತ್ತೇನೆ ಎಂದಿದ್ದಾರೆ. 

ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬ ಮಾಹಿತಿ ಬರುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಗೊಂದಲಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಕೋಲಾರದಲ್ಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಒಕ್ಕಲಿಗರ ಮುಖಂಡರು, ಕುರುಬ ಸಮುದಾಯದವರು ಸೇರಿದಂತೆ ಎಲ್ಲಾ ಸಮುದಾಯದ ರೈತರು ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com