ಬಿಜೆಪಿಯಿಂದ ವಲಸೆ ಬಂದ ಪುಟ್ಟಣ್ಣಗೆ ರಾಜಾಜಿನಗರ 'ಕೈ' ಟಿಕೆಟ್: ಬಂಡಾಯ ಸಾರಿದ ಲಿಂಗಾಯತ ನಾಯಕ ಬಿ.ಎಸ್ ಪುಟ್ಟರಾಜು!

ರಾಜಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬೆಂಗಳೂರು ಮಾಜಿ ಉಪಮೇಯರ್ ಬಿಎಸ್ ಪುಟ್ಟರಾಜು ಬಂಡಾಯವೆದ್ದಿದ್ದಾರೆ.
ಬಿ.ಎಸ್ ಪುಟ್ಟರಾಜು
ಬಿ.ಎಸ್ ಪುಟ್ಟರಾಜು

ಬೆಂಗಳೂರು: ರಾಜಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬೆಂಗಳೂರು ಮಾಜಿ ಉಪಮೇಯರ್ ಬಿಎಸ್ ಪುಟ್ಟರಾಜು ಬಂಡಾಯವೆದ್ದಿದ್ದಾರೆ. ಲಿಂಗಾಯತ ಪ್ರಮುಖ ನಾಯಕರಾದ ಪುಟ್ಟರಾಜು ಸೋಮವಾರ ರಾಮಮಂದಿರ ಮೈದಾನದಲ್ಲಿ ಬೆಂಬಲಿಗರ ಸಭೆ ನಡೆಸಿದರು.

ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವಿಧಾನಸಭೆ ಟಿಕೆಟ್‌ಗಾಗಿ ಚರ್ಚಿಸಿದ ವೇಳೆಯಲ್ಲಿ, ಅವರು ಸೂಚಿಸಿದ ಕೆಲ ಹೆಸರುಗಳಲ್ಲಿ ಪುಟ್ಟರಾಜು ಕೂಡ ಸೇರಿದ್ದರು.

ರಾಜ್ಯದ ದಕ್ಷಿಣದಲ್ಲಿ ಸುಮಾರು 100 ಕ್ಷೇತ್ರಗಳಿದ್ದು, ಅದರಲ್ಲಿ ಸಮುದಾಯವು 10 ಸ್ಥಾನಗಳನ್ನು ಬಯಸುತ್ತಿದೆ ಎಂದು ಮಹಾಸಭಾ ಖರ್ಗೆ ಅವರಿಗೆ ತಿಳಿಸಿತ್ತು.

ಬೆಂಗಳೂರಿನಲ್ಲಿ 10 ಸೀಟು ಕೇಳಿದ್ದೇವೆ, ಆರು ಅಥವಾ ಏಳು ಸೀಟು ಕೊಟ್ಟರೂ ಪರವಾಗಿಲ್ಲ ಎಂದು ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದ್ದರು.

ಲಿಂಗಾಯತರು ಈ ಬಾರಿ ಕಾಂಗ್ರೆಸ್  ಪಕ್ಷವನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದಲ್ಲಿ 15 ಲಕ್ಷ ಲಿಂಗಾಯತರು ಇದ್ದಾರೆ, ಆದರೆ ನಮಗೆ ಒಂದೇ ಒಂದು ಟಿಕೆಟ್ ಸಿಕ್ಕಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಶೇ.25 ರಷ್ಟಿರುವ ಒಕ್ಕಲಿಗರು 18 ಸ್ಥಾನಗಳನ್ನು ಪಡೆದಿದ್ದಾರೆ. ಬ್ರಾಹ್ಮಣರು ಮೂರು ಸ್ಥಾನಗಳನ್ನು ಪಡೆದಿದ್ದಾರೆ, ಆದರೂ ಅವರ ಸಂಖ್ಯೆ ಅತ್ಯಲ್ಪವಾಗಿದೆ, ಲಿಂಗಾಯತರು ರಾಜ್ಯದ ಜನಸಂಖ್ಯೆಯ 17-18% ರಷ್ಟಿದ್ದಾರೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿ.ಎಸ್ ಪುಟ್ಟರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ, ತಿಪಟೂರು, ಗುಂಡ್ಲುಪೇಟೆಯಲ್ಲಿ ಲಿಂಗಾಯತರು ತಮಗೆ ಸೀಟು ಸಿಕ್ಕದ್ದಕ್ಕೆ ಖುಷಿಯಲ್ಲಿದ್ದಾರೆ. ಚಿಕ್ಕಮಗಳೂರು, ಕಡೂರು-ತರೀಕೆರೆ, ಚಿತ್ರದುರ್ಗ, ಹಾಸನದ ಬೇಲೂರು ಕ್ಷೇತ್ರಗಳಲ್ಲಿಯೂ ಲಿಂಗಾಯತ ಸಮುದಾಯದ ಮುಖಂಡರು ಟಿಕೆಟ್‌ ಬಯಸಿದ್ದು, ಅವರನ್ನು ಇನ್ನು ಪರಿಗಣಿಸಿಲ್ಲ.

ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಚಿಕ್ಕಪೇಟೆಯಿಂದ ಮಾಜಿ ಮೇಯರ್ ಗಂಗಾಂಬಿಕೆ ಅವರಿಗೆ ಟಿಕೆಟ್ ನೀಡಬೇಕೆಂದು ಸಮುದಾಯದ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಲಿಂಗಾಯತರಿಗೆ ಟಿಕೆಟ್ ನೀಡುವ ಮೂಲಕ ಉತ್ತಮ ಪ್ರಾತಿನಿಧ್ಯ ನೀಡಿದರೆ ಮಾತ್ರ ಸಮುದಾಯ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ನೀಡುತ್ತದೆ ಎಂಬುದು ಅವರ ವಾದ. ವೀರಶೈವ ಮಹಾಸಭಾದ ಜೊತೆಗೆ ವಿವಿಧ ಮಠಾಧೀಶರು ಖರ್ಗೆ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com