ಕುಮಾರಸ್ವಾಮಿ ಅವರ 'ಜಾತ್ಯಾತೀತ'ವೇ ಜಾತಿಗೆಟ್ಟಿದೆ: ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರೋಲ್ಲ; ಕಾಂಗ್ರೆಸ್-ಜೆಡಿಎಸ್ ಟ್ವೀಟ್ ವಾರ್

ರಾಜ್ಯವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ತೀವ್ರಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣೆಕೆ ಮಾಡಿಕೊಂಡಿತ್ತು ಎಂಬ ಕಾಂಗ್ರೆಸ್ ಆರೋಪಕ್ಕೆ ಜೆಡಿಎಸ್ ತಿರುಗೇಟು ನೀಡಿದೆ.
ಸಿಪಿ ಯೋಗೇಶ್ವರ್ ಮತ್ತು ಎಚ್.ಡಿ ಕುಮಾರಸ್ವಾಮಿ
ಸಿಪಿ ಯೋಗೇಶ್ವರ್ ಮತ್ತು ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ತೀವ್ರಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣೆಕೆ ಮಾಡಿಕೊಂಡಿತ್ತು ಎಂಬ ಕಾಂಗ್ರೆಸ್ ಆರೋಪಕ್ಕೆ ಜೆಡಿಎಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವಿಟ್ಟರ್ ವಾರ್ ಜೋರಾಗಿಯೇ ಇದೆ. ಜೆಡಿಎಸ್, ಬಿಜೆಪಿಯ ಕಳ್ಳಾಟದ ಅಸಲಿ ಕತೆಯನ್ನು ಸಿಪಿ ಯೋಗೀಶ್ವರ್ ಬಿಚ್ಚಿಟ್ಟಿದ್ದಾರೆ. ಡಿಯರ್ ಬಿಜೆಪಿ ಕರ್ನಾಟಕ, ಕದ್ದುಮುಚ್ಚಿ ಸಂಸಾರ ಮಾಡುವ ಬದಲು ನೇರವಾಗಿ ಸಂಸಾರ ಮಾಡುವ ಅಭ್ಯಾಸ ನಿಮಗೆ ಇಲ್ಲವೇಕೆ?! ಬಿಜೆಪಿಯೊಂದಿಗೆ ಅನೈತಿಕ ಸಖ್ಯ ಹೊಂದಿರುವ ಎಚ್.ಡಿ ಕುಮಾರಸ್ವಾಮಿ ಅವರೇ  ಅವರ 'ಜಾತ್ಯಾತೀತ'ವೇ ಜಾತಿಗೆಟ್ಟಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಜೆಡಿಎಸ್‌ನದ್ದು ಜಾತಿಗೆಟ್ಟ ಜಾತ್ಯಾತೀತತೆ" ಎನ್ನುವ ನಿಜಸಂಗತಿ ಬಯಲಾಗಿದೆ. ಜೆಡಿಎಸ್‌ನೊಂದಿಗೆ ಒಳಮೈತ್ರಿ ಮಾಡಿಕೊಳ್ಳುವ ಬಿಜೆಪಿ ಕಳ್ಳ ಸಂಸಾರ ನಡೆಸುವ ಬದಲು ಬಹಿರಂಗವಾಗಿ ಮೈತ್ರಿ ಘೋಷಣೆ ಮಾಡಿಕೊಳ್ಳಲಿ. ಜೆಡಿಎಸ್ ಪಕ್ಷವು ಬಿಜೆಪಿ ಸರ್ಕಾರದ ಯಾವುದೇ ಭ್ರಷ್ಟಾಚಾರದ ವಿರುದ್ಧ ಮತನಾಡದಿರುವುದು ಕೂಡ ಈ ಒಳಮೈತ್ರಿಯ ಕಾರಣಕ್ಕಾಗಿಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ತಿರುಗೇಟು ನೀಡಿರುವ ಜೆಡಿಎಸ್ , ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ  ಬುದ್ದಿ ಕಲಿಸುತ್ತಾರೆ.

ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ ಎಂದು ಜೆಡಿಎಸ್ ತಪರಾಕಿ ಹಾಕಿದೆ.

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..?? ಎಂದು ಜೆಡಿಎಸ್ ಪ್ರಶ್ನಿಸಿದೆ.

ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com