ಕಾಂಗ್ರೆಸ್‌ನ ಭದ್ರಕೋಟೆ ಕಲ್ಯಾಣ ಕರ್ನಾಟಕದಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ಯತ್ನ, ಮತದಾರನ ಚಿತ್ತ ಯಾರತ್ತ?

ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮಸ್ಥಳವಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಾಲಿಡಲು ಯತ್ನಿಸುತ್ತಿದೆ. 
ಬಿಜೆಪಿ-ಕಾಂಗ್ರೆಸ್
ಬಿಜೆಪಿ-ಕಾಂಗ್ರೆಸ್

ಹುಬ್ಬಳ್ಳಿ: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮಸ್ಥಳವಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಾಲಿಡಲು ಯತ್ನಿಸುತ್ತಿದೆ. 

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದಿದೆ.

ಈ ಪ್ರದೇಶವು ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ವೀರೇಂದ್ರ ಪಾಟೀಲ್ ಮತ್ತು ಎನ್. ಧರಂ ಸಿಂಗ್ ಅವರ ನೆಲೆಯಾಗಿದೆ.

ಕಲ್ಯಾಣ ಕರ್ನಾಟಕವು ದೊಡ್ಡ ಪಕ್ಷಾಂತರಗಳಿಗೆ ಸಾಕ್ಷಿಯಾಗದಿದ್ದರೂ, ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜಿ ಜನಾರ್ದನರೆಡ್ಡಿ ತಮ್ಮದೇ ಆದ ರಾಜಕೀಯ ಪಕ್ಷವಾದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಅನ್ನು ರಚಿಸಿದ್ದಾರೆ. ಆದರೆ, ಇದು ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳನ್ನು ಮತ್ತು ಬಳ್ಳಾರಿಯ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಅಷ್ಟೇನು ಸದ್ದು ಮಾಡುವ ಸಾಧ್ಯತೆ ಇಲ್ಲ.

ಸದ್ಯ ಕಲಬುರಗಿಯ ಆಳಂದದಲ್ಲಿರುವ ಲಾಡಲ್ ಮಶಾಕ್ ದರ್ಗಾ ಈ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂಬುದು ಈ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿರುವ ಪ್ರಮುಖ ವಿಷಯವಾಗಿದೆ.

ಪ್ರಮೋದ್ ಮುತಾಲಿಕ್ ಅವರ ವಿವಾದಿತ ಶ್ರೀರಾಮ ಸೇನೆಯು, ಮೂಲ ಹಿಂದೂ ದೇವಾಲಯವನ್ನು ಪರಿವರ್ತಿಸಿ ದರ್ಗಾವನ್ನು ನಿರ್ಮಿಸಲಾಗಿದೆ ಎಂಬ ಪ್ರಚಾರದಲ್ಲಿ ಸಕ್ರಿಯವಾಗಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಈ ವಿಷಯದ ಕುರಿತು ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಲಬುರಗಿಯ ವ್ಯಾಪಾರಿ ಮಹಮ್ಮದ್ ಅಬ್ದುಲ್ಲಾ ಹಾಶಿಮ್ ಸುದ್ದಿಸಂಸ್ಥೆ ಐಎಎನ್‌ಎಸ್‌ ಜೊತೆ ಮಾತನಾಡಿ, 'ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕವು ಕೋಮು ಸೌಹಾರ್ದತೆಯ ಕ್ಷೇತ್ರವಾಗಿದೆ. ಕೆಲವರು ಅಸ್ತಿತ್ವದಲ್ಲಿಲ್ಲದ ಕೆಲವು ವಿಷಯಗಳನ್ನು ವಿವಾದವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಬಿಜೆಪಿ ಅವರಿಗೆ ಬೆಂಬಲ ನೀಡಿದಂತಿದೆ. ಇದು ಈ ಪ್ರದೇಶದ ಜನರಿಗೆ ಕೆಲವು ರೀತಿಯ ಅನಿಶ್ಚಿತತೆಗೆ ಕಾರಣವಾಗುತ್ತದೆ ಮತ್ತು ಪ್ರತಿಯೊಬ್ಬರೂ ಅದರಿಂದ ದೂರವಿರಬೇಕು' ಎಂದು ಹೇಳುತ್ತಾರೆ.

ಬೀದರ್ ಜಿಲ್ಲೆಯ ಕಲ್ಯಾಣ ಪಟ್ಟಣವು ಸಮಾಜ ಸುಧಾರಕ ಮತ್ತು ಕವಿ ಬಸವೇಶ್ವರರ ಜನ್ಮಸ್ಥಳವಾಗಿದೆ. ಪ್ರಬಲ ಲಿಂಗಾಯತ ಸಮುದಾಯದ ಅಪ್ರತಿಮ ಆಧ್ಯಾತ್ಮಿಕ ವ್ಯಕ್ತಿ ಇಲ್ಲಿ ಜನಿಸಿದರು ಮತ್ತು ಕಲ್ಯಾಣ ಪಟ್ಟಣವನ್ನು ಬಸವ ಕಲ್ಯಾಣ ಎಂದು ಮರುನಾಮಕರಣ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com