ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟನ್ನು ಕಾಂಗ್ರೆಸ್ ಬಗೆಹರಿಸಿದ್ದು ಹೀಗೆ...!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿದ್ದರೂ ಮುಂದೆ ಯಾರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಗೆ ಕಗಂಟ್ಟಾಗಿ ಪರಿಣಮಿಸಿತ್ತು. ಸುಮಾರು ಐದು ದಿನಗಳ ಕಾಲ ನಡೆದ ಹೈಡ್ರಾಮಕ್ಕೆ ಗುರುವಾರ ತೆರೆ ಬಿದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಪಟ್ಟು ಸಡಿಲಿಸದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ತೀವ್ರ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟು ನಿವಾರಿಸಿದ್ದಾರೆ.
ಮೇ 13 ರಂದು ಕರ್ನಾಟಕ ವಿಧಾನಸಭೆಯ ಫಲಿತಾಂಶ ಪ್ರಕಟವಾದಾಗಿನಿಂದ ಇಬ್ಬರೂ ನಾಯಕರು ತಮ್ಮ ಶಾಸಕರ ಬಲ ಪ್ರದರ್ಶನ ಮಾಡಲು ಪ್ರಾರಂಭಿಸಿದರು. ಈ ಮಧ್ಯೆ ಇಬ್ಬರೂ ನಾಯಕರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಎಂಬ ಫೋಸ್ಟರ್ ಹಾಕುವ ಮೂಲಕ ಶುಭಾಶಯ ಕೂಡಾ ಹಾಕುವ ಮೂಲಕ ಫೋಸ್ಟರ್ ವಾರ್ ಕೂಡಾ ಆರಂಭವಾಗಿತ್ತು. ಉನ್ನತ ಹುದ್ದೆಗಾಗಿ ಪೈಪೋಟಿ ಬಿಸಿಯಾಗುತ್ತಿದ್ದಂತೆ, ಖರ್ಗೆಯವರು ಮೂವರು ವೀಕ್ಷಕರನ್ನು ನೇಮಿಸುವ ಮೂಲಕ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಮೇ 14 ರಂದು ನಡೆದ ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲೂ ಉಭಯ ನಾಯಕರ ಬೆಂಬಲಿಗರು ಧ್ವನಿ ಎತ್ತಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯನ್ನು ಪಕ್ಷದ ಅಧ್ಯಕ್ಷರೇ ನೇಮಿಸಬೇಕೆಂದು ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರು ಹೇಳಿದ ನಂತರ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಿಂದ ದೆಹಲಿಗೆ ಸ್ಥಳಾಂತರಗೊಂಡಿತು. ವೀಕ್ಷಕರು ಎಲ್ಲಾ ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಖರ್ಗೆ ಅವರಿಗೆ ನೀಡಿದರು. ನಂತರ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿಗೆ ತೆರಳಿದ ನಂತರ ಈ ಬಿಕ್ಕಟ್ಟು ಮತ್ತಷ್ಟು ತಾರಕ್ಕಕೇರಿತ್ತು. ನಂತರ ಶಿವಕುಮಾರ್ ಅವರನ್ನು ಹೆಚ್ಚಿನ ಸಮಾಲೋಚನೆಗಾಗಿ ದೆಹಲಿಗೆ ಬರುವಂತೆ ತಿಳಿಸಲಾಗಿತ್ತು. ಸಿದ್ದರಾಮಯ್ಯ ಸೋಮವಾರ ಸಂಜೆ ಆಗಮಿಸಿದರೆ, ಶಿವಕುಮಾರ್ ಆರೋಗ್ಯದ ಕಾರಣ ನೀಡಿ ಸಭೆಯನ್ನು ರದ್ದುಗೊಳಿಸಿದರು.
ಮರುದಿನ ಆಗಮಿಸಿದ ಶಿವಕುಮಾರ್ ವಿರುದ್ಧ ಪಕ್ಷ ತನ್ನ ನಿಲುವನ್ನು ಗಟ್ಟಿಗೊಳಿಸಿದ್ದರಿಂದ ಇದು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿತು. ಮಂಗಳವಾರ ಸಮಾಲೋಚನಾ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಖರ್ಗೆ ಅವರ ನಿವಾಸಕ್ಕೆ ತೆರಳಿ ಕರ್ನಾಟಕ ಸರ್ಕಾರ ರಚನೆ ಕುರಿತು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಮಂಗಳವಾರ ಖರ್ಗೆ ಹಾಗೂ ಇಬ್ಬರು ಪ್ರಧಾನ ಕಾರ್ಯದರ್ಶಿ ಪ್ರತ್ಯೇಕವಾಗಿ ಅವರಿಬ್ಬರನ್ನೂ ಭೇಟಿ ಮಾಡುವ ಮೂಲಕ ಸರಣಿ ಸಭೆ ನಡೆಸಿದರು.
ಬುಧವಾರ ಉಭಯ ನಾಯಕರು ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ ಅಂತಿಮ ಸುತ್ತಿನ ಮಾತುಕತೆ ಪ್ರಾರಂಭವಾಯಿತು. ಈ ಮಧ್ಯೆ, ಶಿವಕುಮಾರ್ ಮತ್ತು ಸಿದ್ದರಾಮಯ್ಯ ರಜೆಯ ಮೇಲೆ ಶಿಮ್ಲಾಕ್ಕೆ ತೆರಳಿದ್ದ ಸೋನಿಯಾ ಗಾಂಧಿಯವರೊಂದಿಗೆ ಮಾತನಾಡಿದ್ದಾರೆ. ಸೋನಿಯಾ ಅವರು ಖರ್ಗೆ ಮತ್ತು ರಾಹುಲ್ ಅವರೊಂದಿಗೆ ಮಾತನಾಡಿ ಬಿಕ್ಕಟ್ಟು ಪರಿಹರಿಸಲು ಶಿವಕುಮಾರ್ ಅವರನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.
ಸೋಮವಾರದಿಂದ ತೀವ್ರ ವಾಗ್ವಾದಗಳು ಮುಂದುವರೆದವು ಮತ್ತು ಗುರುವಾರ ನಸುಕಿನವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಆಯ್ಕೆಯಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸುವಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ತಮ್ಮ ವಾದವನ್ನು ವರಿಷ್ಠರ ಮುಂದೆ ಮಂಡಿಸಿದರು. ತಮ್ಮ ಅಧ್ಯಕ್ಷತೆಯಲ್ಲಿ ದಕ್ಷಿಣ ರಾಜ್ಯದಲ್ಲಿ ಪಕ್ಷ ಅದ್ಭುತ ವಿಜಯವನ್ನು ಸಾಧಿಸಿದ ಕಾರಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಶಿವಕುಮಾರ್ ಪ್ರತಿಪಾದಿಸಿದ್ದರಿಂದ ಕರ್ನಾಟಕದಲ್ಲಿ ನಾಯಕತ್ವದ ಸಮಸ್ಯೆ ಮುಂದುವರೆದಿತ್ತು.
ಖರ್ಗೆ ಜತೆಗೂಡಿ ಪರಿಹಾರ ಕಂಡುಕೊಳ್ಳಿ ಎಂದು ರಾಹುಲ್ ಗಾಂಧಿ ಉಭಯ ನಾಯಕರಿಗೆ ಹೇಳಿದ ಬೆನ್ನಲ್ಲೇ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಕೂಡಾ ಸಭೆ ಮಾತುಕತೆ ನಡೆಸಿ, ಭಿನ್ನಾಭಿಪ್ರಾಯ ಬಗೆಹರಿಸಿದ್ದು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು ಎನ್ನಲಾಗಿದೆ. ಗುರುವಾರ ನಸುಕಿನ ವೇಳೆಗೆ ಉಭಯ ನಾಯಕರ ಆಪ್ತರಿಗೆ ಅವಕಾಶ ಕಲ್ಪಿಸಲು ಒಪ್ಪಿಗೆ ಸೂಚಿಸಿದ್ದು, ಮುಂದಿನ ವರ್ಷದ ಸಂಸತ್ ಚುನಾವಣೆವರೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವಂತೆ ಶಿವಕುಮಾರ್ ಅವರಿಗೆ ಸೂಚಿಸಿದಾಗ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಸರ್ಕಾರದಲ್ಲಿ ನಂಬರ್ 2 ಸ್ಥಾನವನ್ನು ಉಳಿಸಿಕೊಳ್ಳಲು, ಶಿವಕುಮಾರ್ ಅವರನ್ನು ಏಕೈಕ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಮೇ 20 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಅವರ ಉಪ ಸಚಿವ ಸಂಪುಟದ 20 ಕ್ಕೂ ಹೆಚ್ಚು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಹಲವಾರು ರಾಜಕೀಯ ಪಕ್ಷಗಳ ನಾಯಕರನ್ನು ಸಹ ಆಹ್ವಾನಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ