ಸಚಿವ ಸಂಪುಟ ರಚನೆ ಕಸರತ್ತು: ಮೊದಲ ಪಟ್ಟಿಯಲ್ಲಿ ಶೋಷಿತ ವರ್ಗಕ್ಕೆ ಸಿಂಹಪಾಲು ನೀಡಿದ ಕಾಂಗ್ರೆಸ್
ದಲಿತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ ಕಾಂಗ್ರೆಸ್ ಸಚಿವ ಸಂಪುಟ ರಚನೆಯ ಮೊದಲ ಪಟ್ಟಿಯಲ್ಲಿ ಶೋಷಿತ ಸಮುದಾಯಕ್ಕೆ ಸಿಂಹಪಾಲು ನೀಡಿದೆ.
Published: 20th May 2023 11:24 AM | Last Updated: 20th May 2023 01:49 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದಲಿತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ ಕಾಂಗ್ರೆಸ್ ಸಚಿವ ಸಂಪುಟ ರಚನೆಯ ಮೊದಲ ಪಟ್ಟಿಯಲ್ಲಿ ಶೋಷಿತ ಸಮುದಾಯಕ್ಕೆ ಸಿಂಹಪಾಲು ನೀಡಿದೆ.
ಪ್ರಮಾಣ ವಚನ ಸ್ವೀಕರಿಸಲಿರುವ ಎಂಟು ಸಚಿವರ ಪೈಕಿ ಮೂವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಒಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಿರುವುದರಿಂದ ಮೊದಲ ಪಟ್ಟಿಯ ಸಚಿವರ ಹುದ್ದೆಯಲ್ಲಿ ಯಾವುದೇ ಒಕ್ಕಲಿಗ ನಾಯಕರ ಹೆಸರಿಲ್ಲ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಂಪುಟದಲ್ಲಿ ಪ್ರಾಬಲ್ಯ ಹೊಂದಿದ್ದ ಲಿಂಗಾಯತ ಸಮುದಾಯದವರು ಕಾಂಗ್ರೆಸ್ ಸರ್ಕಾರದ ಮೊದಲ ಪಟ್ಟಿಯಲ್ಲಿ ಒಬ್ಬ ಪ್ರತಿನಿಧಿಯನ್ನು ಹೊಂದಿದ್ದಾರೆ.
ದಲಿತ ಸಮುದಾಯದ ಪ್ರಮುಖ ನಾಯಕ ಡಾ.ಜಿ.ಪರಮೇಶ್ವರ ಅವರು ಡಿಸಿಎಂ ಹುದ್ದೆಯ ತೀವ್ರ ಆಕಾಂಕ್ಷಿಯಾಗಿದ್ದರು. ಸಮುದಾಯ ರೊಚ್ಚಿಗೇಳುವ ಮುನ್ನ ಪಕ್ಷ ಸಮುದಾಯದ ಬೇಡಿಕೆಗೆ ಮನ್ನಣೆ ನೀಡುವಂತೆ ತಾಕೀತು ಮಾಡಿದ್ದರು. ಆದರೆ ಡಿಸಿಎಂ ಸ್ಥಾನವನ್ನು ಒಬ್ಬರಿಗೆ ಮಾತ್ರ ನೀಡಲಾಗಿದ್ದು, ಸಚಿವರ ಮೊದಲ ಪಟ್ಟಿಯಲ್ಲಿ ಪರಮೇಶ್ವರ್ ಅವರ ಹೆಸರಿದೆ.
ಕೆ.ಹೆಚ್. ಮುನಿಯಪ್ಪ ದಲಿತ ಸಮುದಾಯದ ಪ್ರಬಲ ಮುಖ್ಯಮಂತ್ರಿ ಮತ್ತು ನಂತರ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು. ಮಾಜಿ ಕೇಂದ್ರ ಸಚಿವ ಮುನಿಯಪ್ಪ ಅವರಿಗೂ ಸಚಿವರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುನಿಯಪ್ಪ ಬಿಜೆಪಿಗೆ ಮರಳಲಿದ್ದಾರೆ ಎಂಬ ಮಾತುಗಳು ಚುನಾವಣೆಗೂ ಮುನ್ನವೇ ಹರಿದಾಡಿದ್ದವು.
ಆದರೆ ಆಗ ಕಾಂಗ್ರೆಸ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಸಫಲವಾಯಿತು. ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ಹಾಗೂ ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮಗಳಿಗೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು, ಆದರೆ ಮುನಿಯಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ.
ಚುನಾವಣಾ ಕಾರ್ಯತಂತ್ರ ಮತ್ತು ಪ್ರಚಾರದಲ್ಲಿ ಹಿರಿಯ ಖರ್ಗೆ ಅವರ ಪ್ರಮುಖ ಪಾತ್ರದತ್ತ ಇದು ಪಕ್ಷದ ಇಂಗಿತವಾಗಿದೆ ಎಂದು ಪಕ್ಷದ ಮೂಲಗಳು ವಿವರಿಸಿವೆ. ಪ್ರಧಾನಿ ಮೋದಿಯವರ ಪ್ರಚಾರದ ಮಿಂಚುದಾಳಿಯ ವಿರುದ್ಧ ಖರ್ಗೆಯವರ "ನಾನು ಭೂಮಿಪುತ್ರ" ಹೇಳಿಕೆಯು ರಾಜ್ಯದ ಜನರನ್ನು ಬಡಿದೆಬ್ಬಿಸಿತು.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ನ ಶಕ್ತಿಯಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಅವರು ಮೂಢನಂಬಿಕೆಗಳ ವಿರುದ್ಧ ಚಳುವಳಿಗೆ ಹೆಸರುವಾಸಿಯಾಗಿದ್ದಾರೆ. 'ಹಿಂದೂ' ಪದದ ಮೂಲವು ಪರ್ಷಿಯನ್ ಮತ್ತು "ಗುಲಾಮ" ಎಂಬ ಅರ್ಥವನ್ನು ಹೊಂದಿದೆ ಎಂದು ಜಾರಕಿಹೊಳಿ ಹೇಳಿಕೆಯು ಕೋಲಾಹಲವನ್ನು ಸೃಷ್ಟಿಸಿ ಅದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸತೀಶ್ ಜಾರಕಿಹೊಳಿ ಅವರು ತಮ್ಮ ಜನ್ಮದಿನವನ್ನು ಸ್ಮಶಾನದಲ್ಲಿ ಆಚರಿಸುತ್ತಾರೆ. ಅಶುಭ ಸಮಯದಲ್ಲಿ ಪ್ರಮುಖ ಕೆಲಸಗಳನ್ನು ಕೈಗೊಳ್ಳುತ್ತಾರೆ. ಅವರು ಕರ್ನಾಟಕ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾದ ರಮೇಶ್ ಜಾರಕಿಹೊಳಿ ಅವರ ಸಹೋದರ.ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಲ್ಲಿ ಒಬ್ಬರಾದ ಎಂ ಬಿ ಪಾಟೀಲ್ ಅವರಿಗೂ ಸಂಪುಟ ಸ್ಥಾನ ನೀಡಲಾಗಿದೆ. ಸಿದ್ಧರಾಮಯ್ಯನವರ ಆಪ್ತ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಆಂದೋಲನವನ್ನು ಆರಂಭಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಟ್ಟಾಳುವಿನ ಚಾಣಾಕ್ಷ ನಡೆ: 'ಸಂಪದ್ಭರಿತ' ಖಾತೆ ನೀಡಲು ಒಪ್ಪಿದ ಕೈ ಪಡೆ; ಜಮೀರ್ ಸಂಪುಟ ಸೇರಲು ಡಿಕೆಶಿ ತಡೆ!
ಬೆಂಗಳೂರಿನ ಅತ್ಯಂತ ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿ ಅವರಿಗೆ ಪ್ರತಿಷ್ಠಿತ ಸ್ಥಾನ ನೀಡಲಾಗಿದೆ. ರೆಡ್ಡಿ ಸಮುದಾಯವು ಹೈಕಮಾಂಡ್ಗೆ ಒತ್ತಾಯಿಸಿದ್ದು, ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಪತ್ರ ಬರೆದಿತ್ತು. ಅವರ ಬೆಂಬಲಿಗರ ಪ್ರಕಾರ, ಅವರು ರಾಮಲಿಂಗಾ ರೆಡ್ಡಿ ಹಿರಿಯರು ಮತ್ತು ಸಿದ್ದರಾಮಯ್ಯ ಮತ್ತು ಶಿವಕುಮಾರ್ಗಿಂತ ಹೆಚ್ಚು ಚುನಾವಣೆಗಳನ್ನು ಗೆದ್ದಿದ್ದಾರೆ.
ಅವರನ್ನು ಸೋಲಿಸುವುದನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿ ಎಲ್ಲ ತಂತ್ರಗಳನ್ನು ಹೆಣೆದಿತ್ತು. ಜಯನಗರ ಕ್ಷೇತ್ರದಲ್ಲಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು 16 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಕಟ್ಟಾ ಬೆಂಬಲಿಗರಾದ ಬಿ. ಜಮೀರ್ ಅಹ್ಮದ್ ಖಾನ್ ಅವರು ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದು ಶಿವಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಶಿವಕುಮಾರ್ ಅವರು ಜಮೀರ್ ಅವರನ್ನು ಸಂಪುಟದಿಂದ ಹೊರಗಿಡಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ವಿಫಲರಾದರು ಎಂದು ಮೂಲಗಳು ಹೇಳಿವೆ. ಜಮೀರ್ ಮಾಸ್ ಲೀಡರ್ ಆಗಿದ್ದು, ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯಗಳ ಸರದಾರ: ಬಡವರ ಪಾಲಿಗೆ ಸಿದ್ದು, ಮಾಜಿ ಸಿಎಂ 'ಅರಸು' ಅಪರಾವತಾರ!
ಹಿರಿಯ ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್ ಕಳೆದ ಬಾರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಗೃಹ ಖಾತೆ ಹೊಂದಿದ್ದರು. ಹೈಕಮಾಂಡ್ ನಿರ್ದೇಶನದ ಮೇರೆಗೆ ಮೊದಲ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ದಲಿತರು ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಕಾಂಗ್ರೆಸ್ ಮೊದಲ ಹಂತದಲ್ಲಿ ಎಲ್ಲಾ ಸಮುದಾಯಗಳು ಮತ್ತು ಧರ್ಮಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿದೆ.
ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಸರ್ಕಾರಗಳು ರಚನೆಯಾದಾಗಲೆಲ್ಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ಸಚಿವರ ಆಯ್ಕೆಯನ್ನು ವಿರೋಧ ಪಕ್ಷಗಳು ಯಾವ ರೀತಿ ನೋಡುತ್ತವೆ ಎಂದು ತಿಳಿಯಬೇಕಿದೆ.