ಬೆಂಗಳೂರು: ಲಿಂಗಾಯತ ನಾಯಕರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ಹಲವು ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು, ತಮ್ಮ ಆಯಸ್ಸಿನ ಮುಕ್ಕಾಲು ಭಾಗವನ್ನು ಕಾಂಗ್ರೆಸ್ ಪಕ್ಷದಲ್ಲೇ ಕಳೆದಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಜಾತಿಗೆ ಸೀಮಿತವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳ ಎಂಬುದನ್ನು ಶಾಮನೂರು ಅವರಿಗೆ ತಿಳಿಹೇಳುವ ಅಗತ್ಯವಿಲ್ಲ. ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಜನರ ಕೊಡುಗೆಯನ್ನು ಮರೆತು ತಮ್ಮ ಸಮುದಾಯದವರಿಗೆ ಸೀಮಿತವಾಗಿ ಮಾತನಾಡಿರುವುದು ನೋವಿನ ಸಂಗತಿ ಎಂದು ತಿಳಿಸಿದ್ದಾರೆ.
ಸಂಪುಟದಲ್ಲಿ ಏಳು ಮಂದಿ ಲಿಂಗಾಯತರಿಗೆ ಅವಕಾಶ ಸಿಕ್ಕಿದೆ. ಇಬ್ಬರು ಮುಸ್ಲಿಮರಿಗೆ ಮಾತ್ರ ಸಚಿವ ಸ್ಥಾನ ದೊರಕಿದೆ. ಲಂಬಾಣಿ, ಉಪ್ಪಾರ, ಬಲಿಜಿಗ, ಯಾದವ ಸಮುದಾಯಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಈ ಎಲ್ಲ ಸಮುದಾಯದವರೂ ಶಿಸ್ತು ಮೀರದೆ ಬೇಡಿಕೆ ಮಂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಧೋರಣೆ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಮಾತನಾಡಬಾರದು ಎಂದು ಆಗ್ರಹಿಸಿದ್ದಾರೆ.
ನೀವು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಒಂದೇ ಸಮುದಾಯ ಕಾರಣವಲ್ಲ. ಎಲ್ಲ ಸಮುದಾಯಗಳ ಬೆಂಬಲದಿಂದ ಅದು ಸಾಧ್ಯವಾಗಿದೆ. ಹೀಗಾಗಿ ಎಲ್ಲ ಸಮುದಾಯಗಳ ಪರವಾಗಿ ಮಾತನಾಡಬೇಕಿತ್ತು. ಒಂದು ಸಮುದಾಯದ ಬೆರಳೆಣಿಕೆಯಷ್ಟು ಅಧಿಕಾರಿಗಳ ಪರ ಮಾತನಾಡಬಾರದಿತ್ತು’ ಎಂದರು.
Advertisement