ಕಾಂಗ್ರೆಸ್ನಲ್ಲಿ ಯಾರ್ಯಾರು ಎಲ್ಲೆಲ್ಲಿ ನಿಂತಿದ್ರು ಮೊದಲು ಚರ್ಚೆ ಮಾಡಿ; ದೇವೇಗೌಡರಿಗೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ: ಪ್ರಜ್ವಲ್ ರೇವಣ್ಣ
ಹಾಸನ: 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬದಲಿಗೆ ಜೆಡಿಎಸ್ ವರಿಷ್ಠಎಚ್ ಡಿ ದೇವೇಗೌಡ ಸ್ಪರ್ಧಿಸಬೇಕು ಎಂಬ ಸ್ವಪಕ್ಷದ ಶಾಸಕ ಎ.ಮಂಜು ಅವರ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ‘ಹಾಸನ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡುವುದಾದರೆ, ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ.ಅಧಿಕಾರ ಯಾರಿಗೂ ಶಾಶ್ವತವಲ್ಲ, ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಸಂತಸದಿಂದ ಸ್ವಾಗತಿಸುತ್ತೇನೆ’ ಎಂದು ಹೇಳಿದರು.
ಎಚ್ಡಿ ಕುಮಾರಸ್ವಾಮಿ ಅವರು ರಾಮನಗರದವರಲ್ಲ, ಹೊಳೆನರಸೀಪುರದವರೆಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಜ್ವಲ್, ನಮ್ಮ ಬಗ್ಗೆ ಮಾತಾಡುವ ಮುನ್ನ ಕಾಂಗ್ರೆಸ್ನಲ್ಲಿ ಯಾರು ಯಾರು ಎಲ್ಲೆಲ್ಲಿ ನಿಂತಿದ್ದರು ಅನ್ನೋದನ್ನ ಮೊದಲು ಚರ್ಚೆ ಮಾಡಿ ನಮ್ಮ ಬಗ್ಗೆ ಮಾತಾಡಿ ಎಂದು ತಿರುಗೇಟು ನೀಡಿದರು.
ನಮ್ಮ ಬಗ್ಗೆ ಮಾತಾಡುವ ಮುನ್ನ ಕಾಂಗ್ರೆಸ್ನಲ್ಲಿ ಯಾರು ಯಾರು ಎಲ್ಲೆಲ್ಲಿ ನಿಂತಿದ್ದರು ಅನ್ನೋದನ್ನ ಮೊದಲು ಚರ್ಚೆ ಮಾಡಿ ನಮ್ಮ ಬಗ್ಗೆ ಮಾತಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಮನಗರದವರಲ್ಲ, ಹೊಳೆನರಸೀಪುರದವರೆಂದು ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು. ಹೆಚ್ಡಿ ದೇವೇಗೌಡ ಹಾಸನದಿಂದ ಹೋಗಿ ದೆಹಲಿ ಆಳಿದರು, ಅದನ್ನು ತಪ್ಪು ಅಂತಾರಾ. ಪ್ರಧಾನಿ ಮೋದಿ ಗುಜರಾತ್ನಿಂದ ಬಂದಿರುವವರು, ವಾರಣಾಸಿಯಲ್ಲಿ ಸ್ಪರ್ಧಿಸಿಲ್ವಾ? ಪ್ರಜಾಪ್ರಭುತ್ವದಲ್ಲಿ ಎಲ್ಲಾದ್ರೂ ಸ್ಪರ್ಧಿಸಿ ಗೆಲ್ಲಬಹುದು ಅಥವಾ ಸೋಲಬಹುದು ಎಂದಿದ್ದಾರೆ.