ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಈಗ ರಾಜ್ಯ ರಾಜಕೀಯ ವಲಯದಲ್ಲಿ ಬಹಳ ಚರ್ಚೆಯ ವಿಷಯವಾಗಿದೆ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಒಂಟಿಯಾಗಿ ಎದುರಿಸಿದ್ದ ಬಿಜೆಪಿ ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ 25ರಲ್ಲಿ ಜಯ ಗಳಿಸಿ ಶೇ.52ರಷ್ಟು ಮತ ಗಳಿಸಿತ್ತು.
2014 ರಲ್ಲಿ, ಬಿಜೆಪಿ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡಿತು, ಕಾಂಗ್ರೆಸ್ 41 ಮತ್ತು ಜೆಡಿಎಸ್ ಶೇಕಡಾ 8-9 ರಷ್ಟು ಮತಗಳ ಹಂಚಿಕೆಗೆ ಹೋಲಿಸಿದರೆ ಶೇಕಡಾ 45 ರಷ್ಟು ಮತಗಳನ್ನು ದಾಖಲಿಸಿತು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪ್ರತ್ಯೇಕವಾಗಿ ಹೋರಾಡಿದ್ದವು. ಕಾಂಗ್ರೆಸ್ ಶೇಕಡಾ 41 ಮತ್ತು ಜೆಡಿಎಸ್ ಶೇಕಡಾ 8-9ರಷ್ಟು ಮತ ಗಳಿಸಿದರೆ, ಬಿಜಿಪಿ ಶೇ.45ರಷ್ಟು ಮತ ಗಳಿಸಿತ್ತು. ಈ ಬಾರಿ 2024ರಲ್ಲಿ ಯಾವ ದಿಕ್ಕಿನತ್ತ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಸಾಗಲಿದೆ ಎಂದು ವಿಶ್ಲೇಷಿಸಿದಾಗ ಬಿಜೆಪಿ-ಜೆಡಿಎಸ್ ಮೈತ್ರಿ ಕೇವಲ ಕಾಗದದಲ್ಲಿ ಮಾತ್ರ ಗೆಲುವಿನ ಮೈತ್ರಿ ಎಂದು ಅನಿಸುತ್ತದೆಯೇ ಹೊರತು ವಾಸ್ತವ ಸತ್ಯ ಬೇರೆಯೇ ಇದೆ.
ಬಿಜೆಪಿ-ಜೆಡಿಎಸ್ ಮಧ್ಯೆ ಪರಸ್ಪರ ಮತಗಳು ಹಂಚಿಕೆಯಾದರೆ ಮಾತ್ರ ಈ ಮೈತ್ರಿಯಿಂದ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಲಾಭವಾಗಬಹುದು. ಮತ ಹಂಚಿಕೆ ಅಂದುಕೊಂಡಷ್ಟು ಸುಲಭವಲ್ಲ ಎಂದು 2019ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ತೋರಿಸಿಕೊಟ್ಟಿದೆ. ರಾಜಕೀಯ ವಿಮರ್ಶಕ ಬಿ ಎಸ್ ಮೂರ್ತಿ, ಇಂದು ಜೆಡಿಎಸ್-ಬಿಜೆಪಿಯ ಮೈತ್ರಿ ಜನತಾ ಪರಿವಾರದ ಯುಗಕ್ಕೆ ಮತ್ತೊಮ್ಮೆ ಕರೆದೊಯ್ಯುತ್ತದೆ. ಕರ್ನಾಟಕದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಮತಗಳು ನಿರ್ಣಾಯಕ. ಹೊರಗಿನಿಂದ ನೋಡಿದರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಶೇಕಡಾ 50ರಷ್ಟು ಮತ ಗಳಿಸಬಹುದು ಎಂದು ಅನಿಸಿದರೂ ಕೂಡ ಅದು ಹೇಳಿದಷ್ಟು ಸುಲಭವಲ್ಲ, ಎರಡೂ ಪಕ್ಷಗಳು ತಳಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಸಾಧ್ಯ. ಪ್ರಸ್ತುತ ಸ್ಥಿತಿಯಲ್ಲಿ ತನ್ನ ಪುನಶ್ಚೇತನಕ್ಕೆ ಜೆಡಿಎಸ್ ಗೆ ಬಿಜೆಪಿ ಜೊತೆ ಮೈತ್ರಿಗೆ ಹೋಗುವುದು ಕೂಡ ಒಳ್ಳೆಯದು ಎಂದು ಜೆಡಿಎಸ್ ನಾಯಕರು ಭಾವಿಸಿದ್ದಾರೆ ಎನ್ನುತ್ತಾರೆ.
ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿ ಮೇಲೆ ಲಿಂಗಾಯತರು ಅಸಮಾಧಾನಗೊಳ್ಳಬಹುದು ಎನ್ನಲಾಗುತ್ತಿದೆ. ಈ ಮೈತ್ರಿಕೂಟಕ್ಕೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬುದು ದೂರದ ಮಾತು. ಹೀಗಾಗಿ ಜೆಡಿಎಸ್ ಶೇಕಡಾ 85ರಷ್ಟು ಮತ ಗಳಿಸಲು ಹೋರಾಟ ಮಾಡಬೇಕಿದೆ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಬಿಜೆಪಿ ಪರವಾಗಿದ್ದ ಲಿಂಗಾಯತರು ಜೆಡಿಎಸ್ ನ್ನು ವಿರೋಧಿಸಿ ಕಾಂಗ್ರೆಸ್ ಗೆ ಮತ ಹಾಕುವ ಸಾಧ್ಯತೆಯಿದೆ ಎನ್ನುತ್ತಾರೆ ಮೂರ್ತಿ.
ಇನ್ನು ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ವರ್ಸಸ್ ಬೇರೆ ಸಮುದಾಯಗಳ ಮಧ್ಯೆ ಮತಗಳು ನಿರ್ಣಾಯಕ. ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಶೇಕಡಾ 43ರಷ್ಟು ಮತ ಗಳಿಸಿದೆ. ಅದೇ ಟ್ರೆಂಡ್ ಸಂಸತ್ತು ಚುನಾವಣೆಯಲ್ಲಿಯೂ ಮುಂದುವರಿಯುತ್ತದೆಯೇ ಎಂಬುದು ಕುತೂಹಲ ವಿಚಾರ.
ಇಷ್ಟು ದಿನ ಕಡ್ಡಿಮುರಿದಂತೆ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಹೇಳುತ್ತಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು ಕೂಡ ಈಗ ತಮ್ಮ ನಿರ್ಧಾರವನ್ನು ಸಡಿಲಿಸಿದಂತಿದೆ. ಪಕ್ಷ ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಬಹುದು. ಬಿಜೆಪಿ-ಜೆಡಿಎಸ್ ಒಂದಾದರೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಕಷ್ಟ ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳುತ್ತಿವೆ. ಇದರಿಂದಾಗಿಯೇ ಮೈತ್ರಿಗೆ ಬಿ ಎಸ್ ಯಡಿಯೂರಪ್ಪನವರೇ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಹೆಚ್ ಡಿಕೆ ಮೈತ್ರಿಗೆ ವಿರೋಧವಿಲ್ಲ-ಜಿ ಟಿ ದೇವೇಗೌಡ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಹೆಚ್ ಡಿ ಕುಮಾರಸ್ವಾಮಿಯವರಿಗೆ ವಿರೋಧವಿಲ್ಲ ಎನ್ನುತ್ತಾರೆ ಜಿ ಟಿ ದೇವೇಗೌಡ. ಜೆಡಿಎಸ್ ನ 19 ಶಾಸಕರು ಮತ್ತು 7 ಎಂಎಲ್ಸಿ ಗಳು ಕಾಂಗ್ರೆಸ್ ನ ಕಾರ್ಯವೈಖರಿಗೆ ಬೇಸತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಒಳ್ಳೆಯದು ಎನ್ನುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳುತ್ತಾರೆ. ಸರ್ಕಾರದ ಆಡಳಿತ ವೈಖರಿ ವಿರುದ್ಧ ಜನರು ಸದ್ಯದಲ್ಲಿಯೇ ತಿರುಗಿಬೀಳುತ್ತಾರೆ ಎನ್ನುತ್ತಾರೆ.
ಇದೇ 10ರಂದು ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಂಡಿದೆ.
Advertisement