ಬೆಂಗಳೂರು: ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಎದುರಾಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದಿಯಲ್ಲಿ ನಿಂತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬೃಹನ್ನಳೆ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಗ್ಯಾರಂಟಿ ಈಡೇರಿಸಲು 10 ಕೆಜಿ ಅಕ್ಕಿ ಬೇಕು, ಕೇಂದ್ರಕ್ಕೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ..! ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.. ಕಾವೇರಿಯಲ್ಲಿ ನೀರಿಲ್ಲ ಆದರೂ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ..! ರಾಜ್ಯದಲ್ಲಿ ಕಲುಷಿತ ನೀರು ಪೂರೈಕೆಯಿಂದ ಅಪಾರ ಸಾವು-ನೋವು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ..! ರಾಜ್ಯದಲ್ಲಿ 200ಕ್ಕೂ ಹೆಚ್ಚು ರೈತರ ಸರಣಿ ಆತ್ಮಹತ್ಯೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ..! ರಾಜ್ಯ ಸರ್ಕಾರದ ಸಂಪುಟದಲ್ಲಿ ಗೂಂಡಾ ಸಚಿವರುಗಳ ಉಪಟಳ ಹೆಚ್ಚಾಗಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ..! ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಾ ಪತ್ರ ಬರೆಯುತ್ತೇನೆ ಎನ್ನುತ್ತಾ ಕಾಲ ಕಳೆಯುತ್ತಿರುವ ನೀವು ಮುಖ್ಯಮಂತ್ರಿ ಆಗಿರುವುದು ಯಾವ ಪುರುಷಾರ್ಥಕ್ಕೆ..? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯರ ದ್ವಿಮುಖ ನೀತಿ. ಒಂದೆಡೆ ದಲಿತರ ಪರ ಎಂದು ಬೊಗಳೆ ಭಾಷಣ ಮಾಡುವುದು, ಮತ್ತೊಂದೆಡೆ ದಲಿತರ ಭೂಮಿ ಕಬಳಿಸಿದ ಸಚಿವರಿಗೆ ಬೇಷರತ್ ಬೆಂಬಲ ನೀಡುವುದು. ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಕಂಡು ಕೇಳರಿಯದ ಬರ ಆವರಿಸಿಕೊಂಡಿದೆ. ಸಿದ್ದರಾಮಯ್ಯ ಸಾಹೇಬರು ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ವಾರದಿಂದಲೇ ಮುಂಗಾರು ಕೈಕೊಟ್ಟು ಬರಗಾಲ ಸೃಷ್ಟಿಯಾಗಿತ್ತು.
ಆದರೆ, ವರ್ಗಾವಣೆ ದಂಧೆ, ಕಮಿಷನ್, ಕಲೆಕ್ಷನ್, ಶ್ಯಾಡೋ ಸಿಎಂ, ಸಚಿವರ ದರ್ಪದ ಮೇಲಾಟಗಳೇ ಹೆಚ್ಚಾದ ಹಿನ್ನೆಲೆ ಸರ್ಕಾರ ಈಗ ಧೃತರಾಷ್ಟ್ರನಂತೆ ವರ್ತಿಸುತ್ತಿದೆ. ಪರಿಣಾಮ ರೈತರ ಸರಣಿ ಆತ್ಮಹತ್ಯೆ, ಕಲುಷಿತ ನೀರು ಪೂರೈಕೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಹಿಂದೆ ಬರಗಾಲವೇ ಇಲ್ಲವೆಂದು ಸಿದ್ದರಾಮಯ್ಯರವರ ಸರ್ಕಾರ ಮೈಮರೆತ ಕಾರಣ ಇಂದು 195 ತಾಲೂಕುಗಳಲ್ಲಿ ಬರ ಬಂದಿದೆ. ಈಗಲೂ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಾಗದೆ ಕೈಲಾಗದವರಂತೆ ಕೂತಿದೆ ಎಂದು ಲೇವಡಿ ಮಾಡಿದೆ.
ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನೇ ತನ್ನ ಗ್ಯಾರಂಟಿ ಎಂದು ಜನರಿಗೆ ಮಂಕುಬೂದಿ ಎರಚುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಈಗ ಅದರಲ್ಲೂ ಜಾತಿ ರಾಜಕಾರಣ ಮಾಡುವ ಕೀಳು ಕಾರ್ಯಕ್ಕೆ ಕೈ ಹಾಕಿದೆ. ದಲಿತರ ಅಭ್ಯುದಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ/ಟಿಎಸ್ಪಿ ನಿಧಿಯನ್ನು ಈಗಾಗಲೇ ಕಬಳಿಸಿದ್ದೂ ಅಲ್ಲದೆ ಅಕ್ಕಿ ಪಡೆಯಲೂ ಜಾತಿ ಪ್ರಮಾಣಪತ್ರ ಹೆಸರಲ್ಲಿ ಜನರನ್ನು ಅಲೆದಾಡಿಸುತ್ತಿದೆ. ಅದೂ ಸಾಲದೆಂಬಂತೆ ತಾನೇ ಘೋಷಿಸಿದ ಗ್ಯಾರಂಟಿ ಜಾರಿಯನ್ನು ವಿಳಂಬ ಮಾಡಲು ಸರ್ವರ್ ಸಮಸ್ಯೆಯ ನಾಟಕವಾಡುತ್ತಿದೆ. ಲೋಕಸಭೆ ಚುನಾವಣೆಯವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ನಾಟಕವಾಡುತ್ತಾ ಕಾಲಹರಣ ಮಾಡಿ ಕೈತೊಳೆದುಕೊಳ್ಳುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಲೇ ಇದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Advertisement