ಸಕ್ಕರೆ ನಾಡಿನ ಅಧಿಪತಿಯಾಗುತ್ತಾರಾ ಕುಮಾರಸ್ವಾಮಿ?: ನೆರೆಯ ಜಿಲ್ಲೆಗಳಲ್ಲಿ ಬಿಜೆಪಿಗೆ ವರವಾಗುತ್ತಾ ಮಾಜಿ ಸಿಎಂ ಸ್ಪರ್ಧೆ?

ಪ್ರತಿ ಚುನಾವಣೆ ಬಂದಾಗಲೂ ಅದು ವಿಧಾನಸಭೆ ಚುನಾವಣೆಯಿರಲಿ, ಲೋಕಸಭೆ ಚುನಾವಣೆ ಆಗಿರಲಿ ಮಂಡ್ಯ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತದೆ. ಸಕ್ಕರೆ ನಾಡು ಮಂಡ್ಯ ಕ್ಷೇತ್ರವು ರಾಜಕೀಯವಾಗಿ ಯಾವಾಗಲೂ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗುತ್ತದೆ.
ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ
ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ

ಮೈಸೂರು: ಪ್ರತಿ ಚುನಾವಣೆ ಬಂದಾಗಲೂ ಅದು ವಿಧಾನಸಭೆ ಚುನಾವಣೆಯಿರಲಿ, ಲೋಕಸಭೆ ಚುನಾವಣೆ ಆಗಿರಲಿ ಮಂಡ್ಯ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತದೆ. ಸಕ್ಕರೆ ನಾಡು ಮಂಡ್ಯ ರಾಜಕೀಯವಾಗಿ ಯಾವಾಗಲೂ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗುತ್ತದೆ.

2019 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವು ರಾಜಕೀಯಕ್ಕೆ ಚೊಚ್ಚಲ ಬಾರಿಗೆ ಧುಮುಕಿದ ನಟಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನಡುವೆ ತೀವ್ರ ಹೋರಾಟಕ್ಕೆ ಸಾಕ್ಷಿಯಾಯಿತು. ಅಭ್ಯರ್ಥಿ ಘೋಷಣೆಯಾಗಿ ಚುನಾವಣಾ ಪ್ರಚಾರದಿಂದ ಹಿಡಿದು ಚುನಾವಣೆ ಮುಗಿದು ಫಲಿತಾಂಶದವರೆಗೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಚುನಾವಣೆಯಲ್ಲಿ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ನಂತರ ರಾಜ್ಯ ಜೆಡಿಎಸ್ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದರೊಂದಿಗೆ ಈಗ 'ಕರ್ನಾಟಕದ ಸಕ್ಕರೆ ನಾಡು' ಪ್ರತಿಷ್ಠಿತ ಹೋರಾಟಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ನೆರೆಯ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಹೆಚ್ ಡಿ ಕುಮಾರಸ್ವಾಮಿ ಅವರು ಒಕ್ಕಲಿಗ ಹೃದಯಭಾಗ ಮಂಡ್ಯದಿಂದ ಸ್ಪರ್ಧಿಸಬೇಕೆಂದು ಜೆಡಿಎಸ್ ಆರಂಭದಿಂದಲೂ ಬಯಸಿತ್ತು.

ಮಂಡ್ಯ ಜಿಲ್ಲೆಯನ್ನು ತನ್ನ ಭದ್ರಕೋಟೆ ಎಂದು ಜೆಡಿಎಸ್ ಹೇಳಿಕೊಂಡರೂ, 2019 ರ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ನಿಖಿಲ್ ಸುಮಲತಾ ವಿರುದ್ಧ ಸೋತರು. ಈ ಬಾರಿ ಮಂಡ್ಯದ ಕೋಟೆಯನ್ನು ಬೇಧಿಸಲು ನಿರ್ಧರಿಸಿರುವ ಕುಮಾರಸ್ವಾಮಿ ಬಿಜೆಪಿ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದಾರೆ.

ರಾಜಕೀಯ ಪಂಡಿತರ ಲೆಕ್ಕಾಚಾರ ಪ್ರಕಾರ, ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುವ ಮೂಲಕ ದೊಡ್ಡ ಸವಾಲಿಗೆ ಇಳಿದಿದ್ದಾರೆ. ಅವರು ಗೆದ್ದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕಳಪೆ ಪ್ರದರ್ಶನದ ನಂತರ ಇದು ಅವರ ರಾಜಕೀಯ ಪುನರ್ಜನ್ಮವಾಗಲಿದೆ. ಎನ್‌ಡಿಎ ಗೆದ್ದರೆ ಅವರು ಕೇಂದ್ರ ಸಚಿವ ಸಂಪುಟಕ್ಕೂ ಬರಬಹುದು. ಒಂದು ವೇಳೆ ಸೋತರೆ ಈ ನಷ್ಟವು ಜೆಡಿಎಸ್-ಬಿಜೆಪಿ ಮೈತ್ರಿ, ಜೆಡಿಎಸ್ ಭವಿಷ್ಯ ಮತ್ತು ಗೌಡರ ಕುಟುಂಬಕ್ಕೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.

ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್- ಕುಮಾರಸ್ವಾಮಿ ಭೇಟಿ, ಮಹತ್ವದ ಮಾತುಕತೆ!

ಹಳೆ ಮೈಸೂರಿನ ಮಂಡ್ಯ ಮತ್ತು ಹಾಸನ ಭಾಗದಲ್ಲಿ ಒಕ್ಕಲಿಗ ನಾಯಕತ್ವ ಮತ್ತು ಪಾರಮ್ಯಕ್ಕಾಗಿ ಕೆಪಿಸಿಸಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಸವಾಲಾಗಿದ್ದಾರೆ.

ಈ ಅಂಶಗಳು ಮತ್ತು ಕರ್ನಾಟಕದ ಬದಲಾದ ರಾಜಕೀಯ ಸನ್ನಿವೇಶವನ್ನು ತಿಳಿದ ಜೆಡಿಎಸ್ ಎಲ್ಲಾ ಬಿಜೆಪಿ ನಾಯಕರನ್ನು ಮತ್ತು ಕುಮಾರಸ್ವಾಮಿ ಅವರ ಒಂದು ಕಾಲದ ರಾಜಕೀಯ ವೈರಿ, ಮಾಜಿ ಸಚಿವ ನಾರಾಯಣ ಗೌಡ ಅವರ ಬಳಿಗೆ ಸಹ ಹೋಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದೆ. ಪುತ್ರ ನಿಖಿಲ್ ಗೆ ಆದ ಪರಿಸ್ಥಿತಿ ತಮಗೂ ಆಗಬಾರದು ಎಂಬ ಎಚ್ಚರಿಕೆ ಕುಮಾರಸ್ವಾಮಿಯವರಿಗಿದೆ.

ಇತ್ತೀಚೆಗಷ್ಟೇ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಅವರಿಗೆ ಒಕ್ಕಲಿಗ ಮತದಾರರ ಬೆಂಬಲ ಸಿಗಲಿದೆ ಎಂಬುದು ಜೆಡಿಎಸ್ ಮುಖಂಡರ ಅಭಿಪ್ರಾಯ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ರಾಜಕೀಯ ಪರಂಪರೆಗೆ ಕಾಂಗ್ರೆಸ್ ಅಭ್ಯರ್ಥಿ ‘ಸ್ಟಾರ್’ ಚಂದ್ರು ಸರಿಸಾಟಿಯಲ್ಲ ಎಂದು ಅವರು ಹೇಳುತ್ತಾರೆ.

ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ
ಮಂಡ್ಯ ಸಂಸದೆ ಸುಮಲತಾಗೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಎಚ್ಚರಿಕೆ!

ಇದೇ ವೇಳೆ ಕುಮಾರಸ್ವಾಮಿ ಅವರು ಅಹಿಂದ ಮತಗಳಿಗೆ(ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಕತ್ತರಿ ಹಾಕಲೇಬೇಕು, ಏಕೆಂದರೆ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರನ್ನು ಹೊರತುಪಡಿಸಿ ಮೇಲ್ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಹಲವಾರು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿರುವ ‘ಹೊರಗಿನವರು V/s ಒಳಗಿನವರು’ ಅಭಿಯಾನವನ್ನು ಕುಮಾರಸ್ವಾಮಿಯವರು ಎದುರಿಸಬೇಕಾಗುತ್ತದೆ.

ಈ ನಡುವೆ ಸಂಸದೆ ಸುಮಲತಾ ಪಾಳಯದಲ್ಲಿನ ಬೆಳವಣಿಗೆಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹಾಲಿ ಸಂಸದೆ ಏಪ್ರಿಲ್ 3 ರಂದು ಮುಂದಿನ ನಡೆ ಪ್ರಕಟಿಸುವುದಾಗಿ ಘೋಷಿಸಿದ್ದು, ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ಮಂಡ್ಯದಲ್ಲಿ ಚುನಾವಣೆ ಮತ್ತಷ್ಟು ಕುತೂಹಲ ಮೂಡಿಸಲಿದೆ. ಹಿರಿಯ ನಟಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಪಾಳಯ ಹೇಳಿಕೊಂಡಿದೆ, 2019ರಲ್ಲಿ ಕಾಂಗ್ರೆಸ್ ಸುಮಲತಾಗೆ ರಹಸ್ಯವಾಗಿ ಬೆಂಬಲಿಸಿದ್ದು ಜಗಜ್ಜಾಹೀರಾಗಿದೆ.

ತಾವು ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ, ಸುಮಲತಾ ಅವರು ನನ್ನ ಸೋದರಿ, ರಾಜಕೀಯದಲ್ಲಿ ಶಾಶ್ವತ ಶತ್ರುಗಳಿರುವುದಿಲ್ಲ ಎಂದು ಹೇಳಿದ್ದು ನಿನ್ನೆ ಅವರ ನಿವಾಸಕ್ಕೆ ಹೋಗಿ ಬೆಂಬಲ ಕೋರಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬಲಪಡಿಸಲು ಮಂಡ್ಯವನ್ನು ಗೆಲ್ಲಲು ಎನ್‌ಡಿಎ ಜೊತೆ ಮುಂದೆ ಕೂಡ ಮುಂದುವರಿಯುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com