ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಇಂಡಿಯಾ ಒಕ್ಕೂಟದಿಂದ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ಕರ್ನಾಟಕ ಘಟಕದ ಮುಖಂಡರ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಇಂಡಿಯಾ ಒಕ್ಕೂಟ ಜನ್ಮ ತಾಳಿತು. ಜನ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದಾರೆ. ಜನ ನಮ್ಮ ಮೇಲಿನ ನಂಬಿಕೆ ಉಳಿಸಲು 10 ಪ್ರಮುಖ ಪಕ್ಷಗಳು ಚರ್ಚೆ ಮಾಡಿದ್ದೇವೆ. ಅವರದ್ದೇ ತತ್ವ ಸಿದ್ಧಾಂತದ ಮೇಲೆ ಪಕ್ಷ ಕಟ್ಟಿಕೊಂಡು ಬಂದಿದ್ದಾರೆ. ಅವರ ಪಕ್ಷದ ಶಾಸಕರು, ಎಂಎಲ್ಸಿಗಳು ಎಷ್ಟು ಇದ್ದಾರೆಂಬುದು ಮುಖ್ಯ ಅಲ್ಲ, ಅವರೆಲ್ಲ ನಮ್ಮ ಜೊತೆ ಒಗ್ಗೂಡಿ ಎನ್ಡಿಎ ಸೋಲಿಸುವುದೇ ಗುರಿಯಾಗಿದೆ. ಹೀಗಾಗಿ ರಾಜ್ಯಮಟ್ಟದಿಂದ ಬೂತ್ ವರೆಗೂ ಕೆಲಸ ಮಾಡಬೇಕಿದೆ. ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಕೂತು ಚರ್ಚೆ ಮಾಡಿದ್ದೇವೆ. ಈ ಚುನಾವಣೆ 'ಕೋಮುವಾದಿ ಸರ್ವಾಧಿಕಾರ Vs ಪ್ರಜಾಪ್ರಭುತ್ವ' ಈ ಘೋಷಣೆಯಡಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. 17 ಸಾವಿರ ಮತ ಸಿಪಿಎಂ ಪಡೆದಿತ್ತು. ಆಗ ದೇವೇಗೌಡರು ಸೋತರು. ಹೀಗೆಂದು ಸಭೆಯಲ್ಲಿ ಉದಾಹರಣೆ ಕೊಟ್ಟರು. ಈಗ ಪ್ರಜಾಪ್ರಭುತ್ವ ಉಳಿಸಬೇಕು. ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ಹೇಗೆ ಮುಗಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ವಿರೋಧ ಪಕ್ಷಗಳಿಗೆ ಐಟಿ ನೋಟೀಸ್ ಕೊಟ್ಟಿದೆ. ಯಾವತ್ತಾದರೂ ಒಂದು ದಿನ ಪರವಾಗಿ ತೀರ್ಪು ಬರುತ್ತೆ. ಸದ್ಯ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಬಗ್ಗೆ ಅನಗತ್ಯ ಆರೋಪ ಮಾಡುತ್ತಿದೆ. ಈ ಕ್ರಮವನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ, ಚುನಾವಣಾ ಬಾಂಡ್ಗಳ ಪ್ರಕರಣದಲ್ಲಿ ಬಿಜೆಪಿ ಸ್ಪಷ್ಟ ಪ್ರತಿಕ್ರಿಯೆ ನೀಡುತ್ತಿಲ್ಲ, ಎಡಪಕ್ಷಗಳಿಗೆ 11 ಕೋಟಿ ರೂ.ಗೆ ನೋಟಿಸ್ ನೀಡಿದ್ದಾರೆ, ಈ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ದೇಶದ ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದಿದೆ. ಬರಗಾಲದಲ್ಲೂ ಕೇಂದ್ರದಿಂದ ನಮಗೆ ಅನ್ಯಾಯವಾಗಿದೆ. 'ನಮ್ಮ ತೆರಿಗೆ ನಮ್ಮ ಹಕ್ಕು' ರಾಜ್ಯಕ್ಕೆ ಬರಬೇಕಾದ ತೆರಿಗೆ ನೀಡದೆ ಅನ್ಯಾಯ ಮಾಡಿದೆ.ಇದಕ್ಕೆಲ್ಲ ಪ್ರಧಾನಿ ಮೋದಿ ಉತ್ತರ ಕೊಡಬೇಕು, ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ದೇಶವನ್ನು ಉಳಿಸುವ ದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. 28ಕ್ಕೆ 28 ಕ್ಕೆ ಗೆಲ್ಲುವ ವಿಶ್ವಾಸವನ್ನು ಮಿತ್ರಪಕ್ಷಗಳು ಕೊಟ್ಟಿವೆ. ಅವರು ಎಲ್ಲೆಲ್ಲಿ ಪ್ರಚಾರಕ್ಕೆ ಹೋಗಬೇಕು ಎಂಬ ಮಾಹಿತಿ ಕೊಟ್ಟಿದ್ದೇವೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ, ಕುರ್ಚಿ ಉಳಿಸಿಕೊಳ್ಳಲು ಒಬ್ಬರು, ಕುರ್ಚಿಗಾಗಿ ಇನ್ನೊಬ್ಬರು ಕಾಲೆಳೆಯುತ್ತಿದ್ದಾರೆಂಬ ಅಮಿತ್ ಶಾ ಟೀಕೆಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ, ನನ್ನನ್ನ ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಅಭಿನಂದನೆ. ಈಗಲಾದರೂ ಹೆಸರು ನೆನಪಿಸಿಕೊಂಡರಲ್ಲ ಎಂದರು.
ಇದೇ ವೇಳೆ ದೇಶ ವಿಭಜನೆ ವಿಚಾರದ ಸಂಬಂಧ ಡಿಕೆ ಸುರೇಶ್ ಹೆಸರು ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ದೇಶ ವಿಭಜನೆ ಮಾಡುವ ಮಾತನಾಡಿದ್ದಾರೆ. ಯಾರೂ ಆ ರೀತಿ ಮಾತಾಡಿಲ್ಲ. ಜನ ಆ ರೀತಿ ಆಲೋಚನೆ ಮಾಡಬಹುದು. ಆ ರೀತಿ ಪರಿಸ್ಥಿತಿ ಬರಬಹುದು ಎಂದು ಹೇಳಿದ್ದಾರೆ. ಸುರೇಶ್ ಅವರನ್ನ ನೆನೆಸಿಕೊಂಡಿದ್ದಕ್ಕೆ ಮೋದಿಯವರಿಗೆ ಧನ್ಯವಾದಗಳು ಎಂದು ತಿಳಿಸಿದರು.
Advertisement