ಅನ್ನ ತಿನ್ನೋ ಬಾಯಲ್ಲಿ ಏನೇನೋ ಮಾತನಾಡಬೇಡಿ: ನಾಯಕರನ್ನು ಬೆಳೆಸಿರುವ ದೇವೇಗೌಡರಿಗೆ ತುಳಿದು ಗೊತ್ತಿಲ್ಲ; ಪ್ರತಾಪ್ ಸಿಂಹ

ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಸಚಿವ ವೆಂಕಟೇಶ್‌ಗೆ ತಿರುಗೇಟು ನೀಡಿದ್ದಾರೆ.
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮೈಸೂರು: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಸಚಿವ ವೆಂಕಟೇಶ್‌ಗೆ ತಿರುಗೇಟು ನೀಡಿದ್ದಾರೆ.

ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್​​ಗೆ ಟಿಕೆಟ್ ಕೊಟ್ಟಿದ್ದಾರೆ. ಯದುವೀರ್ ಹೆಸರು ಇರಲೇ ಇಲ್ಲ. ಆದರೆ ದೇವೆಗೌಡರೆ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ ಅವರನ್ನ ನಿಲ್ಲಿಸಿದ್ದಾರೆ ಎಂದು ಸಚಿವ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಅಮಿತ್ ಶಾ ಅವರ ಜೊತೆ ಫೋನಿನಲ್ಲಿ ದೇವೇಗೌಡರು ಮಾತನಾಡಿದ್ದರು ಎಂದು ತಿಳಿಸಿದರು.

ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರಲ್ಲಿ ಕೇಳಿದವರಲ್ಲಿ ದೇವೇಗೌಡರು ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದರು. ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು.

ಈ ಹೇಳಿಕೆ ನೋಡಿ ವೆಂಕಟೇಶ್ ಅವರ ಮೇಲೆ ಇದ್ದ ಎಲ್ಲಾ ಗೌರವವು ಮರೆಯಾಗಿದೆ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

ಎರಡು ಬಾರಿ ಮೈಸೂರು-ಕೊಡಗು ಸಂಸದನಾಗಿ ಕೆಲಸ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ. ಪ್ರತಾಪ್ ಸಿಂಹ ಬದಲಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಟಿಕೆಟ್ ನೀಡಲಾಗಿದ್ದು, ಸದ್ಯ ಚುನಾವಣಾ ಪ್ರಚಾರವನ್ನು ಸಹ ಅವರು ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com