HAL ಬಗ್ಗೆ ಅಪಪ್ರಚಾರ: ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿಗೆ BSY ಆಗ್ರಹ

ಬೆಂಗಳೂರಿನ ಹೆಚ್​​ಎಎಲ್​ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿ.ಎಸ್.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
Updated on

ಬೆಂಗಳೂರು: ಬೆಂಗಳೂರಿನ ಹೆಚ್​​ಎಎಲ್​ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿ.ಎಸ್.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಕಾಂಗ್ರೆಸ್​ನವರು ಮರೆತು ಹೋಗಿದ್ದಾರೆ ಎಂಬ ರೀತಿ ಭಾಸವಾಗುತ್ತಿದೆ. ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿರುವುದರಿಂದ ಯಾವ ನಾಯಕ ಕೂಡಾ ಅವರ ಹೆಸರು ಹೇಳಲು ರೆಡಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕ ಇಲ್ಲದೇ ಕೇಂದ್ರ ಸರ್ಕಾರದ ಮೇಲೆ ವಿವಾದ ಸೃಷ್ಟಿಸಿ ಜನ ಬೆಂಬಲ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಮೋದಿ ಕೆಲಸಗಳ ಆಧಾರದ ಮೇಲೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಬೆಂಗಳೂರಿನ ಹೆಚ್​​ಎಎಲ್​ ಮುಚ್ಚುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ ಇಂದು ಹೆಚ್​ಎಎಲ್​​ ದಾಖಲೆಯ ಆದಾಯಗಳಿಸಿದೆ. ಅಪಪ್ರಚಾರ ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರಾ? ಡಿ.ಕೆ. ಶಿವಕುಮಾರ್ ಕ್ಷಮೆ ಕೊಡಿಸುತ್ತಾರಾ?" ಎಂದು ಪ್ರಶ್ನಿಸಿದರು.

ಎರಡು ಕೋಟಿ ಜಾಬ್​ ನೀಡಿದ್ರಾ ಎಂದು ಕಾಂಗ್ರೆಸ್ ಕೇಳುತ್ತದೆ. ನಾವು ಬಂದ ನಂತರ 2023ರ ತ‌ನಕ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಎಷ್ಟು ಉದ್ಯೋಗ ನೀಡಿದ್ದಾರೆ?. ಕೇವಲ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಹತ್ತು ತಿಂಗಳಲ್ಲಿ ಒಂದೇ ಒಂದು ಉದ್ಯೋಗ ಕೊಡದಿರುವುದು ಸಿದ್ದರಾಮಯ್ಯ ಸರ್ಕಾರದ ದಾಖಲೆಯಾಗಿದೆ" ಎಂದು ಟೀಕಿಸಿದರು.

ಬಿ.ಎಸ್ ಯಡಿಯೂರಪ್ಪ
ಸಿಟಿ ರವಿಗೆ ಅನ್ಯಾಯವಾಗಿದೆ, ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಬಿಎಸ್ ಯಡಿಯೂರಪ್ಪ

ಕಲಬುರಗಿ ಬೀದರ್ ರೈಲು ಮಾರ್ಗ ಪೂರ್ಣ ಆಗಿದೆ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದರೂ ಅದು ಆಗಿರಲಿಲ್ಲ. ಆದರೆ, ಈಗ ಆಗಿದೆ. ಆರು ವಂದೇ ಭಾರತ್ ರೈಲು ಸೇವೆ ದೊರಕಿದೆ. ಗರೀಬ್ ಕಲ್ಯಾಣ ಯೋಜನೆಯಡಿ ನಾಲ್ಕು ವರ್ಷಗಳಿಂದ ಉಚಿತ ಅಕ್ಕಿ ನೀಡುತ್ತಾ ಇದ್ದೇವೆ. ಆಶ್ವಾಸನೆ ನೀಡಿದ ಹತ್ತು ಕೆಜಿ ಅಕ್ಕಿಯಲ್ಲಿ ಒಂದು ಕೆಜಿ ಕೂಡಾ ನೀಡದಿರುವುದು ರಾಜ್ಯ ಸರ್ಕಾರದ ಸಾಧನೆಯಾಗಿದೆ. ಕಿಸಾನ್​​ ಸಮ್ಮಾನ್ ಜೊತೆ ನಾವು ನೀಡುತ್ತಿದ್ದ 4,000 ರೂ. ನಿಲ್ಲಿಸಿರುವುದು ಈ ಸರ್ಕಾರ ದಿವಾಳಿಯಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ.

ಮೆಡಿಕಲ್ ಕಾಲೇಜು ತೆರೆಯೋದು ಇರಲಿ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಸ್ಥಾಪಿಸದಿರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆ. ಕಾಂಗ್ರೆಸ್​ಗೆ ನೀಡುವ ಮತ ಭ್ರಷ್ಟಾಚಾರಕ್ಕೆ, ದೇಶದ ಅಭದ್ರತೆ, ಅರಾಜಕತೆ, ಆಂತರಿಕ ಸುರಕ್ಷತೆಯ ಅಪಾಯಕ್ಕೆ ನೀಡುವ ಮತವಾಗುತ್ತದೆ. ದೇಶ ವಿಭಜನೆಯ ಅಪಸ್ವರ ಎತ್ತಿದವರನ್ನು ರಾಜ್ಯದ ದೇಶ ಭಕ್ತ ಜನತೆ ತಿರಸ್ಕಾರ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲುವುದು ಖಚಿತ. ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಸ್ ಯಡಿಯೂರಪ್ಪ
75 ವರ್ಷ ಆದವರಿಗೆ ಸಿಎಂ ಆಗಲು ಬೇರ್ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲವಾ? ಬಿಎಸ್ವೈ ಪುತ್ರ ವಿಜಯೇಂದ್ರ ಪ್ರಶ್ನೆ

ಒಕ್ಕಲಿಗ ಸರ್ಕಾರವನ್ನು ಬಿಜೆಪಿಯವರೇ ತೆಗೆದರು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಇಂತಹವನ್ನು ಬಿಟ್ಟು ಬೇರೆ ಏನು ಹೇಳೋಕೆ ಸಾಧ್ಯ ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲರು ಕೂಡ ಒಂದಾಗಿದ್ದಾರೆ. ನಮ್ಮ ಜೊತೆ ಇದ್ದಾರೆ. ಹಾಗಾಗಿ ಇಂತಹ ಹೇಳಿಕೆ ನೀಡುವಲ್ಲಿ ಡಿಕೆ ಶಿವಕುಮಾರ್ ಪ್ರವೀಣರು ಅಲ್ವಾ..? ಎಲ್ಲದ್ದಕ್ಕೂ ಅವರೇ ಉತ್ತರ ಕೊಡ್ತಿದ್ದಾರೆ. ಇದರಲ್ಲಿ ಸ್ವಾಮೀಜಿಗಳನ್ನು ಕೇಳಬೇಕು ಎನ್ನುವುದರಲ್ಲಿ ಏನಿದೆ..? ಅವರೇ ಹೋಗಿ ಸ್ವಾಮೀಜಿ ಜೊತೆ ಮಾತಾಡಲಿ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.

ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಫರ್ಧೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ, ಅವರ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ. ನಾನು ಇವತ್ತಿನಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತಿದ್ದೇನೆ. ಅಲ್ಲೊಬ್ಬರು ಇಲ್ಲೊಬ್ಬರು ಟೀಕೆ ಮಾಡಬಹುದು ತೆರಿಗೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವ ಗೊಂದಲ ಇಲ್ಲ, ಕಾಂಗ್ರೆಸ್​ನ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com