ಬಳ್ಳಾರಿ ಲೋಕಸಭೆ ಕ್ಷೇತ್ರ: ಗಣಿ ಧೂಳಿನಲ್ಲಿ ಕಮಲ ಅರಳುವುದೇ? ಕೈ ಹಿಡಿಯುತ್ತಾ ಕಾಂಗ್ರೆಸ್ ಗ್ಯಾರಂಟಿ?

2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್‌ನ ಬಿ.ನಾಗೇಂದ್ರ ವಿರುದ್ಧ ಸೋತಿದ್ದ ಶ್ರೀರಾಮುಲು ಅವರಿಗೆ ಕ್ಷೇತ್ರ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಶ್ರೀರಾಮುಲು ಮತ್ತು ತುಕಾರಾಮ್
ಶ್ರೀರಾಮುಲು ಮತ್ತು ತುಕಾರಾಮ್

ಬಳ್ಳಾರಿ: ಕಬ್ಬಿಣದ ಅದಿರು ಗಣಿಗಳಿಗೆ ಹೆಸರುವಾಸಿಯಾಗಿರುವ ಬಳ್ಳಾರಿಯಲ್ಲಿ ಬಿಜೆಪಿಯ ಮಾಜಿ ಸಚಿವ ಬಿ ಶ್ರೀರಾಮುಲು ಮತ್ತು ಸಂಡೂರಿನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಇ ತುಕಾರಾಂ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 2008 ರಲ್ಲಿ ಡಿಲಿಮಿಟೇಶನ್ ನಂತರ ಈ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್‌ನ ಬಿ.ನಾಗೇಂದ್ರ ವಿರುದ್ಧ ಸೋತಿದ್ದ ಶ್ರೀರಾಮುಲು ಅವರಿಗೆ ಕ್ಷೇತ್ರ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕ್ಷೇತ್ರವು ಎಂಟು ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿದೆ, ಅದರಲ್ಲಿ ಆರು ಕ್ಷೇತ್ರಗಳನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈಗ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದ್ದವು. 6 ಲಕ್ಷಕ್ಕೂ ಹೆಚ್ಚು ಎಸ್‌ಟಿ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಲಿಂಗಾಯತರು, ಅಲ್ಪಸಂಖ್ಯಾತರು ಮತ್ತು ಕುರುಬ ಜನಾಂಗದವರೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರು ಸಂಸದರನ್ನು ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.

ಎಸ್ಟಿಗಳಿಗೆ ಮೀಸಲಿಡುವ ಮೊದಲು, ಬಳ್ಳಾರಿ ಲೋಕಸಭಾ ಕ್ಷೇತ್ರವು 1952 ಮತ್ತು 1999 ರ ನಡುವಿನ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದಿದ್ದರಿಂದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ಉಳಿದಿತ್ತು. 2000 ರ ದಶಕದಲ್ಲಿ ರೆಡ್ಡಿ ಸಹೋದರರು ಮತ್ತು ಬಿಜೆಪಿಯ ಪ್ರಾಬಲ್ಯದಿಂದ ಕಾಂಗ್ರೆಸ್ ಅವನತಿ ಪ್ರಾರಂಭವಾಯಿತು . 2018 ರ ಉಪಚುನಾವಣೆಯಲ್ಲಿ ಸೋಲನ್ನು ಹೊರತುಪಡಿಸಿ, 2004 ರಿಂದ ನಡೆದ ಎಲ್ಲಾ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಈ ಸ್ಥಾನವನ್ನು ಗೆಲ್ಲುತ್ತಾ ಬಂದಿದೆ. 1999 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ ನಂತರ ಕ್ಷೇತ್ರವು ಎಲ್ಲರ ಗಮನ ಸೆಳೆಯಿತು.

2024ರ ಲೋಕಸಭೆ ಚುನಾವಣೆಯಲ್ಲಿST ಸಮುದಾಯದ ನಾಯಕ ಶ್ರೀರಾಮುಲು ಅವರು ಸಂಡೂರು ಶಾಸಕ ಇ ತುಕಾರಾಂ ಅವರನ್ನು ಎದುರಿಸಲಿದ್ದಾರೆ, ತಮ್ಮ ಗೆಲುವಿಗಾಗಿ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ.

ಆದರೆ ಈ ಕ್ಷೇತ್ರದಿಂದ ಕೇವಲ ಒಬ್ಬ ಶಾಸಕರಿರುವ ಕಾರಣ ಬಿಜೆಪಿಗೆ ಆತಂಕ ಎದುರಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಗೆದ್ದಿದ್ದ ಏಕೈಕ ಬಿಜೆಪಿ ಅಭ್ಯರ್ಥಿ ಕೃಷ್ಣಾನಾಯ್ಕ. ಮಾಜಿ ಸಚಿವ ಮತ್ತು ಮಾಜಿ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ತೊರೆದು ತಮ್ಮದೇ ಆದ ಪಕ್ಷ ಸ್ಥಾಪಿಸಿದ್ದರು, ಇದು ಬಿಜೆಪಿಯ ಸೋಲಿಗೆ ಕಾರಣವಾಯಿತು. ಇದೀಗ ರೆಡ್ಡಿ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, 2019ರಲ್ಲಿ ಗೆದ್ದಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಾಸಕ ರೆಡ್ಡಿ, ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ, ಏಕೆಂದರೆ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಬಳ್ಳಾರಿಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ.

ಶ್ರೀರಾಮುಲು ಮತ್ತು ತುಕಾರಾಮ್
ಬಳ್ಳಾರಿ: ಭೂದಾಖಲೆಗಳಲ್ಲಿ ತಾಂತ್ರಿಕ ದೋಷ; ಕೃಷ್ಣಾನಗರ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ!

ಆದಾಗ್ಯೂ, 2023 ರಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಪಕ್ಷವು ಗೆದ್ದ ನಂತರ ಕಾಂಗ್ರೆಸ್ ಲೋಕಸಭೆಯಲ್ಲೂ ಗೆಲ್ಲಲು ಹವಣಿಸುತ್ತಿದೆ. ಎಲ್ಲಾ ನಾಯಕರು ತುಕಾರಾಂ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಶ್ರೀರಾಮುಲು ಎಸ್‌ಟಿ ಮತದಾರರನ್ನು ಸೆಳೆಯುವುದರ ಜೊತೆಗೆ ಲಿಂಗಾಯತರ ಬೆಂಬಲವನ್ನೂ ಪಡೆಯುತ್ತಾರೆ ಎಂಬುದು ಬಿಜೆಪಿಯ ಆಶಯ. ಮತ್ತೊಂದೆಡೆ, ತುಕಾರಾಂ ಅವರಿಗೆ ಅಲ್ಪಸಂಖ್ಯಾತರು, ಕುರುಬರು, ಎಸ್‌ಸಿಗಳು ಮತ್ತು ಇತರರ ಬಲವಾದ ಬೆಂಬಲವಿದೆ ಎಂದು ಕಾಂಗ್ರೆಸ್ ಹೇಳುತ್ತದೆ. ಶ್ರೀರಾಮುಲು ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ತಂದರೂ ಸೋತರು ಎಂದು ಅನುಕಂಪದ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. "ಪ್ರಧಾನಿ ಮೋದಿಯವರ ವರ್ಚಸ್ಸಿನ ಮೇಲೆ ಶ್ರೀರಾಮುಲು ಮತ ಕೇಳುತ್ತಿದ್ದಾರೆ. ತುಕಾರಾಂ ಅವರ ಗೆಲುವಿನಿಂದ ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆ ನಡಯಲು ಕಾರಣವಾಗುತ್ತದೆಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com