ಬೀದರ್ ಲೋಕಸಭೆ ಕ್ಷೇತ್ರ: ಅನುಭವಿ v/s ಅನನುಭವಿ; ಕೇಂದ್ರ ಸಚಿವ ಖೂಬಾ ವಿರುದ್ಧ ತೊಡೆ ತಟ್ಟಿರುವ ಸಾಗರ್ ಖಂಡ್ರೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ನಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದ್ದು, ಅನುಭವಿ ರಾಜಕಾರಣಿ ಭಗವಂತ ಖೂಬಾ (57) ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಾಗರ್ ಖಂಡ್ರೆ (26) ವಿರುದ್ಧ ಕಣಕ್ಕಿಳಿದಿದ್ದಾರೆ.
ಸಾಗರ್ ಖಂಡ್ರೆ,
ಸಾಗರ್ ಖಂಡ್ರೆ,

ಬೀದರ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ನಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದ್ದು, ಅನುಭವಿ ರಾಜಕಾರಣಿ ಭಗವಂತ ಖೂಬಾ (57) ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಾಗರ್ ಖಂಡ್ರೆ (26) ವಿರುದ್ಧ ಕಣಕ್ಕಿಳಿದಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರೂ ಆಗಿರುವ ಖೂಬಾ ಬೀದರ್‌ನಿಂದ ಎರಡು ಬಾರಿ ಸಂಸದರಾಗಿದ್ದಾರೆ. ಅವರು 2014 ರಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಬಲ ನಾಯಕ ದಿವಂಗತ ಧರಂ ಸಿಂಗ್ ಅವರನ್ನು ಹಾಗೂ 2019 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಂಪುಟದ ಹಾಲಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು.

ಖೂಬಾ ಅವರ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನ ಹವಣಿಸುತ್ತಿದೆ, ಇದರ ಜೊತೆಗೆ ಖೂಬಾ ಅವರಿಗೆ ಸ್ವಪಕ್ಷದವರ ವಿರೋಧವು ಎದುರಾಗಿದೆ. ಔರಾದ್‌ ಶಾಸಕರಾಗಿರುವ ಮಾಜಿ ಸಚಿವ ಪ್ರಭು ಚೌಹಾಣ್ ಅವರು ಖೂಬಾ ಅವರನ್ನು ಕಣಕ್ಕಿಳಿಸಲು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅಲ್ಲದೆ, ಬಸವಕಲ್ಯಾಣ ಶಾಸಕ ಶರಣು ಸಲ್ಗಾರ್ ಕೂಡ ಖೂಬಾ ಅವರೊಂದಿಗೆ ಹಲವು ಬಾರಿ ಬಹಿರಂಗವಾಗಿ ವಾಗ್ವಾದ ನಡೆಸಿದ್ದಾರೆ. ಚೌಹಾಣ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಮತ್ತು ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿಂದ ಮುಂಬೈನಲ್ಲಿದ್ದಾರೆ. ಸಲ್ಗಾರ್ ಕೂಡ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಬಿಜೆಪಿ ನಾಯಕರು. ಬೀದರ್‌ನಿಂದ ಸ್ವತಂತ್ರವಾಗಿ ತಮ್ಮ ಸಮುದಾಯದ ಸದಸ್ಯರನ್ನು ಕಣಕ್ಕಿಳಿಸುವ ಮರಾಠರ ನಿರ್ಧಾರ ಕೂಡ ಖೂಬಾ ಅವರ ಗೆಲುವಿನ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವಾಗಿದೆ.

ಸಾಗರ್ ಖಂಡ್ರೆ,
ಕಲ್ಯಾಣ ಯೋಜನೆಗಳಿಂದ ನಿರ್ಗತಿಕರಿಗೆ ಸಹಾಯ, ಉಚಿತಗಳಿಂದ ಮತಗಟ್ಟೆಗಳಲ್ಲಿ ಪಕ್ಷಕ್ಕೆ ಬೆಂಬಲ; ಭಗವಂತ ಖೂಬಾ

ಸದಾ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಸಮುದಾಯ ಬೀದರ್ ನಿಂದ ಡಾ.ದಿನಕರ್ ಮೋರೆ ಅವರನ್ನು ಕಣಕ್ಕಿಳಿಸಿದೆ. 1.45 ಲಕ್ಷ ಮತದಾರರನ್ನು ಹೊಂದಿರುವ ಮರಾಠ ಸಮುದಾಯವು ಔರಾದ್, ಭಾಲ್ಕಿ, ಬಸವಕಲ್ಯಾಣ ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಮುದಾಯವನ್ನು ನಿರ್ಲಕ್ಷಿಸಿವೆ ಎಂದು ಮರಾಠ ಆರೋಪಿಸಿದ್ದಾರೆ.

ಬೀದರ್‌ನಲ್ಲಿ ಮೋದಿ ಅಲೆ ಇನ್ನೂ ಪ್ರಬಲವಾಗಿದೆ. ಖೂಬಾ ಅವರು ಚುನಾವಣೆಯಲ್ಲಿ ಗೆದ್ದರೆ, ಅದಕ್ಕೆ ಕಾರಣ ಮೋದಿ ಅಲೆ ಮಾತ್ರ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಕರ್ನಾಟಕದಲ್ಲಿ ಈ ವರ್ಷ ಕಣಕ್ಕಿಳಿದಿರುವವರ ಪೈಕಿ ಸಾಗರ್ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ತಂದೆ ಈಶ್ವರ ಖಂಡ್ರೆ ಅವರಿಗೆ ಸಹಾಯ ಮಾಡಿದ್ದರೂ ಸಾಗರ್ ಅಖಾಡಕ್ಕಿಳಿದಿರುವುದು ಇದೇ ಮೊದಲು.

ಖಂಡ್ರೆ ಕುಟುಂಬ ಹಲವು ದಶಕಗಳಿಂದ ಚುನಾವಣಾ ರಾಜಕೀಯದಲ್ಲಿದೆ. ಸಾಗರ್ ಅವರ ತಾತ ಭೀಮಣ್ಣ ಖಂಡ್ರೆ ಅವರು ಮಾಜಿ ಸಚಿವರಾಗಿದ್ದರು. ಸಾಗರ್ ಅವರ ತಂದೆ ಈಶ್ವರ ಖಂಡ್ರೆ ಅವರು ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದಾರೆ. ಸಚಿವ ರಹೀಂ ಖಾನ್ ಅವರು ಸಾಗರ ಪರ ಪ್ರಚಾರ ನಡೆಸುತ್ತಿದ್ದರೂ ಬೀದರ್‌ನ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ.

ಇದೇ ವೇಳೆ 3.7 ಲಕ್ಷ ಮತದಾರರಿರುವ ಮುಸ್ಲಿಮರು ಕಾಂಗ್ರೆಸ್‌ಗೆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ವೀರಶೈವ-ಲಿಂಗಾಯತರನ್ನು ಕಣಕ್ಕಿಳಿಸಿರುವುದರಿಂದ ಮುಸ್ಲಿಂ ಸಮುದಾಯದ ಮತಗಳು ಯಾರ ಪಾಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸಾಗರ್ ಖಂಡ್ರೆ,
ರಾಹುಲ್ ಗಾಂಧಿ ಮನವಿ ಮೇರೆಗೆ ಕೇರಳ ಸಂತ್ರಸ್ತನ ಕುಟುಂಬಕ್ಕೆ ಪರಿಹಾರ: ಈಶ್ವರ್ ಖಂಡ್ರೆ

2009 ರವರೆಗೆ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ದಿವಂಗತ ರಾಮಚಂದ್ರ ವೀರಪ್ಪ ಏಳು ಬಾರಿ (ಎರಡು ಬಾರಿ ಕಾಂಗ್ರೆಸ್ ಮತ್ತು ಐದು ಬಾರಿ ಬಿಜೆಪಿಯಿಂದ), ನರಸಿಂಗ್ ರಾವ್ ಸೂರ್ಯವಂಶಿ (ಕಾಂಗ್ರೆಸ್) ನಾಲ್ಕು ಬಾರಿ ಹಾಗೂ ಶಂಕರ್ ದೇವ್ ಅವರು ಮೂರು ಬಾರಿ ಆಯ್ಕೆಯಾಗಿದ್ದರು. 2009 ರಲ್ಲಿ ಡಿಲಿಮಿಟೇಶನ್ ನಂತರ, 2009 ರಲ್ಲಿ ಧರಂ ಸಿಂಗ್ ಮತ್ತು 2014 ಮತ್ತು 2019 ರಲ್ಲಿ ಖೂಬಾ ಗೆದ್ದರು.

ಸಾಗರ್ ಮತ್ತು ಖೂಬಾ ಇಬ್ಬರೂ ವೀರಶೈವ-ಲಿಂಗಾಯತ ಸಮುದಾಯದಿಂದ ಬಂದವರು. ಬೀದರ್‌ನಲ್ಲಿ ಸುಮಾರು 3 ಲಕ್ಷ ಸಮುದಾಯದ ಮತದಾರರಿದ್ದಾರೆ. SC (ಬಲ) ಜನಸಂಖ್ಯೆಯು ಸುಮಾರು 2.7 ಲಕ್ಷ, ಮತ್ತು SC (ಎಡ) 1.1 ಲಕ್ಷ. ಎಸ್ ಟಿ ಕೋಲಿ ಮತ್ತು ಕಬ್ಬಲಿಗ ಮತದಾರರ ಸಂಖ್ಯೆ ಸುಮಾರು 1.6 ಲಕ್ಷ ಇದೆ.

ಬೀದರ್ ಲೋಕಸಭಾ ಕ್ಷೇತ್ರವು ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್, ಬೀದರ್-ದಕ್ಷಿಣ, ಬೀದರ್, ಭಾಲ್ಕಿ ಮತ್ತು ಔರಾದ್ ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಆಳಂದವನ್ನು ಒಳಗೊಂಡಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com