ಟ್ರಸ್ಟ್‌ಗೆ KIADB ಜಮೀನು: ಊರಿಗೆ ಉಪದೇಶ ಕೊಡುವ ಖರ್ಗೆ ಈಗ ಉತ್ತರಿಸಲಿ- ಹೆಚ್.ಡಿ ಕುಮಾರಸ್ವಾಮಿ

ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ?
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on

ಮಂಡ್ಯ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಖರ್ಗೆ ದೇಶಕ್ಕೆಲ್ಲಾ ಉಪದೇಶ ನೀಡುತ್ತಾರೆ. ಇದೀಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ ವ್ಯಂಗ್ಯವಾಡಿದರು.

ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಟೀಕಿಸಿದರು.

ಎಚ್ ಡಿ ಕುಮಾರಸ್ವಾಮಿ
ಟ್ರಸ್ಟ್‌ಗೆ KIADB ಜಮೀನು ಪಡೆದ ಆರೋಪ: ಖರ್ಗೆ ಕುಟುಂಬಕ್ಕೆ ಕಾನೂನುಬದ್ಧವಾಗಿ ಭೂಮಿ ಮಂಜೂರು- ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಕಾಂಗ್ರೆಸ್ ಪಕ್ಷದ ರಾಜಭವನ ಚಲೋ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು 30ನೇ ತಾರೀಖು ರಾಜಭವನ ಚಲೋ ಮಾಡುತ್ತಿರುವುದಕ್ಕೆ ಬಹಳ ಸಂತೋಷ. ಅವರು ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಕೂಡ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ. ರಾಜ್ಯಪಾಲರ ಅನುಮತಿ ಪಡೆದು ತನಿಖೆ ಮಾಡಲಿ ಎಂದು ಸವಾಲು ಹಾಕಿದರು.

ನನ್ನ ಬಗ್ಗೆ ಮಾತನಾಡುವ ಡಿಕೆ.ಶಿವಕುಮಾಹ್ ಬಗ್ಗೆ ಚರ್ಚೆ ಮಾಡಲು ಬಹಳಷ್ಟು ವಿಚಾರಗಳು ಇವೆ. ಪಾಪ ನಮ್ಮನ್ನು ಕೆದಕಿದ್ದಾರೆ. ನಿನ್ನೆಯ ದಿನ ಅಸಲಿ ನಕಲಿ ಎಂದು ಹೇಳಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿ-ನೋಟಿಫಿಷನ್ ಮಾಡಿಕೊಂಡು ಜೀವನ ಮಾಡುವವರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇದೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಹಗರಣ ಕುರಿತು ಮಾತನಾಡಿ, ‘ಕಾನೂನು ಪ್ರಕಾರ ಎಷ್ಟು ಸೈಟ್ ಬೇಕಾದರೂ ಪಡೆಯಿರಿ. ನಮ್ಮ ವಿರೋಧವಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇಂಥ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನೊಬ್ಬನಿಗೆ ಜಮೀನು ಖಾತೆ ಮಾಡಿಕೊಡುತ್ತಾರಾ? ಭೂಪರಿವರ್ತನೆ ಮಾಡಿದ್ದೀರಲ್ಲವೇ? ಅದು ಯಾರ ಭೂಮಿ? ಆ ವ್ಯಕ್ತಿ ಸತ್ತು 25 ವರ್ಷವಾಗಿದೆ. ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ‌ಮಾಡಿಸಿದ್ದು ಯಾರು? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com