ಬೆಂಗಳೂರು: ಬಣ ಬಡಿದಾಟ ತಾರಕಕ್ಕೇರಿದ್ದು, ಈ ನಡುವಲ್ಲೇ ಬಿಜೆಪಿಯ ಕೆಳ ಹಂತದ ಕಾರ್ಯಕರ್ತರು ಬರೆದಿದ್ದಾರೆನ್ನಲಾದ ಪತ್ರವೊಂದು ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ವಿಜಯೇಂದ್ರ, ಯಡಿಯೂರಪ್ಪ ಒಪ್ಪಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯಲಾಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾವು, ಕಳಮಟ್ಟದ ಬಿಜೆಪಿ ಸದಸ್ಯರ ಗುಂಪೊಂದು, ಕರ್ನಾಟಕದ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿರುವ ದುಸ್ಥಿತಿಯನ್ನು ಹಂಚಿಕೊಳ್ಳಲು ಈ ಪತ್ರವನ್ನು ಬರೆಯುತ್ತೇವೆ. ಈ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗದಿದ್ದರೆ ಭವಿಷ್ಯದಲ್ಲಿ ಪಕ್ಷದ ಪತನಕ್ಕೆ ಇದು ಕಾರಣವಾಗಬಹುದು. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ 3 ಕ್ಷೇತ್ರಗಳಲ್ಲೂ ಸೋತಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಅವರ ತಂದೆ ಬಿ ಎಸ್ ಯಡಿಯೂರಪ್ಪ ನಡೆಸುತ್ತಿರುವ “ಒಪ್ಪಂದ ರಾಜಕೀಯ”ದ ಮೇಲೆ ಬೆಳಕು ಚೆಲ್ಲಿದೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಕೈಜೋಡಿಸಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯನವರನ್ನು ತಡೆಯಲು ಸಾಕಷ್ಟು ಅವಕಾಶ ಇದ್ದರೂ, ಅವರು ಇನ್ನೂ ಅಧಿಕಾರದಲ್ಲಿದ್ದಾರೆ. ಇದು ವಿಜಯೇಂದ್ರ ಮತ್ತು ಯಡಿಯೂರಪ್ಪನವರ ರಕ್ಷಣೆಯ ಕಾರಣದಿಂದಷ್ಟೇ ಸಂಭವಿಸುತ್ತಿದೆ. ಕೆಲವು ತಿಂಗಳ ಹಿಂದೆ, ಸಿದ್ದರಾಮಯ್ಯ ಪೋಸ್ಕೋ ಪ್ರಕರಣದಲ್ಲಿ ಯಡಿಯೂರಪ್ಪನನ್ನು ರಕ್ಷಿಸಿದ್ದರು, ಅವರನ್ನು ಸಮಯಕ್ಕೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಮಾಡಿಕೊಡಲಾಯಿತು.
ಇತ್ತೀಚಿನ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸಕ್ರೀಯವಾಗಿರಲಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲ್ಲಲು ಸಹಾಯ ಮಾಡಿದರು. ಆದರೆ, ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಲು ವಿಫಲವಾಯಿತು, ಇದು ಬಸವರಾಜ ಬೊಮ್ಮಾಯಿಗೆ ತೀವ್ರ ಆಘಾತ ನೀಡಿದೆ.
ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಮತ್ತು ಇತರ ಕಡೆಗಳಲ್ಲಿ ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡ ಈ ಸಂಬಂಧದಲ್ಲಿ ವಿಭಿನ್ನರಲ್ಲ. ಕಾಂಗ್ರೆಸ್ ಸರ್ಕಾರ ಈ ಬಿಜೆಪಿ ನಾಯಕರ ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದು, ಬಿಜೆಪಿ ನಾಯಕರು ಚುನಾವಣೆ ಮತ್ತು ಹಗರಣಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಂಬಲ ನೀಡುತ್ತಾರೆ. ಆರ್. ಅಶೋಕ, ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ವಿಫಲರಾಗಿದ್ದಾರೆ.
ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಸುನಿಲ್ ಕುಮಾರ್ ಅವರಂತಹ ಕೆಲವು ಬಿಜೆಪಿ ನಾಯಕರನ್ನು ಹೊರತುಪಡಿಸಿ, ಉನ್ನತ ನಾಯಕರು ಕಾಂಗ್ರೆಸ್ ಸರ್ಕಾರದ ಅನ್ಯಾಯಗಳ ವಿರುದ್ಧ ಪ್ರತೀಕಾರ ತೋರಿಸುವಂತೆ ಕಾಣುತ್ತಿಲ್ಲ. ಈ ನಮಸ್ಯೆಗಳು ಬೆಳಕಿಗೆ ತರುತ್ತಿದ್ದರೂ, ಪಕ್ಷವು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಮಟ್ಟದಲ್ಲಿ ನಾಯಕತ್ವದಲ್ಲಿ ಬದಲಾವಣೆ ನಡೆಯದಿರುವುದರಿಂದ ಈ ತಾರತಮ್ಯ ರಾಜಕೀಯ ಮುಂದುವರಿಯುತ್ತಲೇ ಇರುತ್ತದೆ, ನಮ್ಮಂತಹ ಕೆಳಮಟ್ಟದ ಕಾರ್ಯಕರ್ತರು ಇದರಿಂದ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಬಿಜೆಪಿ “ಪಾರ್ಟಿ ವಿತ್ ಎ ಡಿಫರೆನ್ಸ್” ಎಂದು ಕರೆಯಲ್ಪಡುವುದರಿಂದ ಕಾರ್ಯಕರ್ತರ ಹಿತವನ್ನು ರಕ್ಷಿಸಲು ಆತ್ಮಾವಲೋಕನ ಮಾಡುವ ಮತ್ತು ಬದಲಾವಣೆಗಳನ್ನು ತರುವ ಅಗತ್ಯವಿದೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಆಶೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Advertisement