
ಚಾಮರಾಜನಗರ: ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ದರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸತ್ತೇಗಾಲ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಂಡಿಲ್ಲ. ಬದಲಿಗೆ ಸಿಎಂ ಖುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಹೇಳಿದರು. ಈ ಬಿಜೆಪಿಯವ್ರು ನಾವು ಕೊಡೊ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆಗೆ ಜಗಳ ತಂದಿಟ್ರು ಎಂದು ಅಪಪ್ರಚಾರ ಮಾಡಿದ್ರು. ಬಿಜೆಪಿಯವರಿಗೆ ಬರಿ ಇದೆ ಕೆಲಸ. ನಿಮಗೆ ಉಚಿತವಾಗಿ ಅಕ್ಕಿ ಕೊಡ್ತಾಯಿರೋರು ಯಾರು? ನಾನು ಮೊದಲು ಬಾರಿ ಸಿಎಂ ಆದಾಗ 5 ಕೆಜಿ ಉಚಿತವಾಗಿ ಕೊಟ್ಟೆ. ಈಗ 10 ಕೆಜಿ ನೀಡುತ್ತೇವೆ ಅಂದ್ರೆ ಕೇಂದ್ರದವರು ಅಡ್ಡಗಾಲು ಹಾಕಿದ್ದಾರೆ. ಫ್ರೀಯಾಗಿ ಏನನ್ನೂ ಕೊಡ್ಬೇಡಿ ಮೋದಿಯವರೇ, ಒಂದು ಕೆಜಿಗೆ 34 ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದರು.
ನಾನು ಬರಿಗಾಲಲ್ಲಿ ಶಾಲೆಗೆ ಹೋಗಬೇಕಿತ್ತು. ಅದಕ್ಕೆ ಕಳೆದ ಬಾರಿ ಸಿಎಂ ಆಗಿದ್ದಾಗ ಪ್ರತಿ ವಿದ್ಯಾರ್ಥಿಯು ಶೂ ಹಾಕೊಳ್ಳೇಬೇಕು ಸಾಕ್ಸ್ ಹಾಕೊಳ್ಳೇಬೇಕು ತಾರತಮ್ಯ ಇರಬಾರದು ಅಂತ ಶೂ ಭಾಗ್ಯ ಜಾರಿಗೆ ತಂದೆ. ಪ್ರತಿಯೊಬ್ಬರೂ ಕೂಡ ಓದಬೇಕು. ನಾನು ಓದದೆ ಇದ್ದರೆ ಸಿಎಂ ಆಗೋಕೆ ಆಗ್ತಿತ್ತಾ? ನಿಮ್ಮ ಮುಂದೆ ನಿಂತುಕೊಂಡು ಭಾಷಣ ಮಾಡೋಕೆ ಆಗ್ತಿತ್ತಾ ಎಂದು ಕೇಳಿದರು. ಜೆ.ಹೆಚ್.ಪಟೇಲರಿಗೆ ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಕಳೆದುಕೊಳ್ಳುತ್ತೀರ ಅಂತ ಆಗಿನ ಕೆಲ ಶಾಸಕರು ಹೇಳಿ ಇಲ್ಲಿಗೆ ಬರಬಾರದ ರೀತಿ ಮಾಡಿದ್ರು. ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ರಾಚಯ್ಯ ಅವರು ನಂಬಲಿಲ್ಲ, ನಾನೂ ನಂಬಲಿಲ್ಲ. ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ವಿ ಎಂದು ತಿಳಿಸಿದರು. ಸತ್ತೇಗಾಲ ಪಟ್ಟಣ ಪಂಚಾಯ್ತಿ ಮಾಡೋದಾಗಿ ಸಿಎಂ ಭರವಸೆ ಕೊಳ್ಳೇಗಾಲ ತಾಲೋಕಿನ ಸತ್ತೇಗಾಲ ಗ್ರಾಮದಲ್ಲಿ 13 ಸಾವಿರ ಮತದಾರರಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯಿತಿ ಮಾಡಲು ಶಾಸಕ ಮಂಜುನಾಥ್ ಮನವಿ ಮಾಡಿದ್ದಾರೆ. ಅದನ್ನು ಸಹ ಮಾಡಿಕೊಡೋಣ ಎಂದ ಸಿಎಂ ಭರವಸೆ ನೀಡಿದರು.
Advertisement