ಬೆಳಗಾವಿ ಅಧಿವೇಶನ ಶಾಸಕರಿಗೆ 10 ದಿನಗಳ ಪ್ರವಾಸವಷ್ಟೇ: JDS ವ್ಯಂಗ್ಯ
ಬೆಳಗಾವಿ: ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಶಾಸಕರು 10 ದಿನಗಳ ವಾರ್ಷಿಕ ಪ್ರವಾಸವೆಂದು ತಿಳಿದಿದ್ದಾರೆಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಸೋಮವಾರ ಲೇವಡಿ ಮಾಡಿದರು.
ವಿಧಾನಸಭೆಯಲ್ಲಿ ಸೋಮವಾರ ನಡೆದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡಿದ ಸ್ಪೀಕರ್ಗೆ ಕೃತಜ್ಞತೆ ಸಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದರು. ಬಳಿಕ ಆಕ್ರೋಶಭರಿತವಾಗಿ ಜಿಲ್ಲೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಇದು ವಿಧಾನಸಭೆ ಅಧಿವೇಶನ ಅಲ್ಲ. ನೀವೆಲ್ಲರೂ 20-25 ಕೋಟಿ ರೂಪಾಯಿ ವೆಚ್ಚದಲ್ಲಿ 10 ದಿನಗಳ ಕಾಲ ಈ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದೀರಿ. ಆದರೆ, ನಿಮಗೆ ಅರ್ಥವಾಗದ ಸಂಗತಿಯೆಂದರೆ ಜನರು ತಮ್ಮ ಸಮಸ್ಯೆಗಳೊಂದಿಗೆ ಬಂದಿರುವುದು, ನಾವೆಲ್ಲಪೂ ಅವರ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದೇವೆಂದು ತಿಳಿದಿದ್ದಾರೆ. ಅವರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಆದರೆ ನಾವು ಉತ್ತರಕರ್ನಾಟಕದ 96 ಶಾಸಕರು, ಕಲ್ಯಾಣ ಕರ್ನಾಟಕದ 43 ಮತ್ತು ಕಿತ್ತೂರು ಕರ್ನಾಟಕದ 53 ಶಾಸಕರು, ಜನರಿಗೆ ಏನನ್ನೂ ಮಾಡಿಲ್ಲ.
ಬೆಳಗಾವಿ ಅಧಿವೇಶನದ ಮೂಲಕ ಸರ್ಕಾರ ಎರಡು ವಾರದ ಟೂರಿಂಗ್ ಬಂದಿದೆ. ಗುರುವಾರ ಇದು ಅಂತ್ಯ ಆಗಲಿದೆ. ಕಳೆದ ಬಾರಿ ನನಗೆ ಅವಕಾಶ ಕೊಟ್ಟಾಗ ಸಾಕಷ್ಟು ಉತ್ತರ ಕರ್ನಾಟಕ ಬಗ್ಗೆ ಮಾತನಾಡಿದೆ. ಕ್ಷೇತ್ರದ ಜನ, ಸೋಷಿಯಲ್ ಮೀಡಿಯಾ, ಟಿವಿ ಪೇಪರ್ ಎಲ್ಲಾ ಕಡೆ ಪ್ರಚಾರ ತಗೊಂಡೆ. ಆದರೆ ಯಾವುದೇ ಕೆಲಸ ಆಗಲಿಲ್ಲ. ಮುಂದಿನ ಅಧಿವೇಶನದಲ್ಲಿ ನಾನು ಸರ್ಕಾರ ವ್ಯವಸ್ಥೆ ತೆಗೆದುಕೊಳ್ಳಲ್ಲ. ಒಂದು ಕಪ್ ಕಾಫಿ ಕೂಡ ಕುಡಿಯಲ್ಲ. ನನ್ನ ಸ್ವಂತ ಖರ್ಚಿನಲ್ಲಿ ನಾನು ಬಂದು ಹೋಗುತ್ತೇನೆ. ಯಾವುದೇ ಕಾರಣಕ್ಕೂ ಸರ್ಕಾರ ವ್ಯವಸ್ಥೆ ಬಳಸುವುದಿಲ್ಲ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕರ, ಸಚಿವರ ಹೆಸರಲ್ಲಿ ಹಣ ವಸೂಲಿ ದಂಧೆ ನಡೆಯುತ್ತಿದೆ. ಇದನ್ನು ಹೇಳುತ್ತೇನೆ ಅಷ್ಟೇ ಚರ್ಚೆ ಮಾಡಲ್ಲ. ಇಡೀ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಯಾದಗಿರಿಯಲ್ಲಿ ಯಾವುದೇ ಕೈಗಾರಿಕಾ ಕೊಟ್ಟಿಲ್ಲ. ಅದೇನು ಸಿಟ್ಟು ನಮ್ಮ ಮೇಲೆ ಗೊತ್ತಿಲ್ಲ. ಅಧಿವೇಶನ ಆರಂಭವಾಗಿ ಇಲ್ಲಿ 8 ದಿನ ಆಯಿತು ಬಾಣಂತಿ ಸಾವಿನ ಬಗ್ಗೆ ಚರ್ಚೆ ನಡೆದಿಲ್ಲ. ಆಡಳಿತ ವಿಪಕ್ಷಗಳಲ್ಲಿ ಈ ಬಗ್ಗೆ ಚರ್ಚೆ ಇಲ್ಲ. ಸರ್ಕಾರ ತೆಗೆದುಕೊಳ್ಳಬಾರದ ಔಷಧ ತೆಗೆದುಕೊಂಡಿದ್ದಕ್ಕೆ ಹೀಗಾಗಿದೆ ಎಂದಿದೆ. ಇದೇ ರೀತಿ ಉತ್ತರ ಕರ್ನಾಟಕದ ಬಗ್ಗೆ ಧೋರಣೆ ಇದ್ದರೆ, ಕ್ಷೇತ್ರಕ್ಕೆ ನಾವು ಓಟ್ ಕೇಳೋಕೆ ಹೋದಾಗ ಗುಂಡಿಕ್ಕುತ್ತಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ ನಡೆಯಿತು. ನನ್ನ ಕ್ಷೇತ್ರದಲ್ಲಿ 127 ಮಕ್ಕಳು ಹುಟ್ಟಿ 24 ಗಂಟೆಯಲ್ಲಿ ಸಾವನ್ನಪ್ಪಿವೆ. ಎಲ್ಲಾ ಬಡವರ ಮಕ್ಕಳೇ. ಇದಕ್ಕೆ ನ್ಯಾಯ ಕೇಳಿದರೆ, ಉಸ್ತುವಾರಿ ಸಚಿವರು ಅಧಿವೇಶನದಲ್ಲಿ ಕೇಳಿ ಎಂದು ಹೇಳುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಲಂಬಾಣಿಯ ಯುವತಿ ಮೇಲೆ ರೇಪ್ ಆಗಿದೆ. ಇದಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಇಂತಹ ಘಟನೆಗಳು ಆಗಬಾರದು ಅಂದರೆ ಗುಂಡಿಟ್ಟು ಹೊಡಿಬೇಕು ಎಂದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಗುಂಡಿಟ್ಟು ಹೊಡಿಬೇಕು ಎಂಬ ಪದ ಕಡತದಿಂದ ತೆಗೆಸಿ ಎಂದು ಒತ್ತಾಯಿಸಿದರು. ಈ ವೇಳೆ ಆಡಳಿತ ವಿಪಕ್ಷದ ನಡುವೆ ಜಟಾಪಟಿ ನಡೆಯಿತು. ಬಳಿಕ ಕಡತದಿಂದ ತೆಗೆಯಲು ಸೂಚಿಸದ ಉಪ ಸಭಾಧ್ಯಕ್ಷರು ಸೂಚಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ