
ಚಿಕ್ಕಮಗಳೂರು: ನನ್ನ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದೆ, ನನ್ನನ್ನು ಬಂಧಿಸಿ ಇಡೀ ರಾತ್ರಿ ಸುತ್ತಾಡಿಸಿದ ಕ್ರಮದ ವಿರುದ್ಧ ಪರಿಷತ್ತಿನಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸೋಮವಾರ ಹೇಳಿದರು.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾರ್ಯಾರು ಕೊಲೆ ಪ್ರಯತ್ನ ಮಾಡಿದ್ದರು ಎನ್ನುವುದಕ್ಕೆ ಈಗಾಗಲೇ ದೂರು ನೀಡಲಾಗಿದೆ. ಎಫ್ಐಆರ್ ಆಗಿಲ್ಲ. ಕೊಲೆ ಪ್ರಯತ್ನ, ಅದಕ್ಕೆ ಕುಮ್ಮಕ್ಕು ಕೊಟ್ಟವರನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿ ಚಲೋ’ ಮಾಡೋಣವೆಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ ಎಂದು ಹೇಳಿದರು.
ರಕ್ಷಿಸುವ ನೆಪದಲ್ಲಿ ಆರು ಮಂದಿ ಪೊಲೀಸರೊಂದಿಗೆ ನನ್ನನ್ನು ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಿಸಿ, ಕಬ್ಬಿನ ಗದ್ದೆಗೆ ಕರೆದೊಯ್ದಿದ್ದು ಅನುಮಾನಾಸ್ಪದವಾಗಿದೆ. ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಏನಾದರೂ ಸಂಭವಿಸಬಹುದಿತ್ತು. ಆರಂಭದಲ್ಲಿ ಈ ಘಟನೆಯಲ್ಲಿ ಮುಖ್ಯಮಂತ್ರಿಯವರ ಪಾತ್ರವಿಲ್ಲ ಎಂದು ಭಾವಿಸಿದ್ದೆ, ಆದರೆ, ಈಗ ಅವರ ಹೇಳಿಕೆಗಳನ್ನು ಗಮನಿಸಿದರೆ ಪೊಲೀಸರು ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಆಗಿರುವ ಯೋಜನ ಎಂದೆನಿಸುತತಿದೆ. ಹೀಗಾಗಿ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದೇವೆಂದು ತಿಳಿಸಿದರು.
ನನ್ನ ಮೇಲೆ ದೈಹಿಕ ಹಲ್ಲೆ ನಡೆದ ಸಂಬಂಧ ಕಿಶೋರ್ ಹಾಗೂ ಅರುಣ್ ದೂರು ನೀಡಿದ್ದಾರೆ. ಸುವರ್ಣ ಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಅವರಿಬ್ಬರೂ ನನ್ನ ಜೊತೆ ಇದ್ದರು. ಹಾಗಾಗಿ ದೂರು ನೀಡಿದ್ದಾರೆ. ದೂರಿನಡಿ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ಸಹ ದೂರು ನೀಡಿದ್ದೇನೆ. ಎಫ್ಐಆರ್ ಪ್ರತಿ ನೀಡಿಲ್ಲ. ಎಫ್ಐಆರ್ಗಾಗಿ ಎರಡು ದಿನ ನಮ್ಮ ವಕೀಲರು ಹೋಗಿದ್ದಾರೆ. ಕಮಿಷನರ್ 15 ದಿನ ಸಮಯ ಇದೆ ಎಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ. ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಕಮಿಷನರ್ ಆ ಜಾಗದಲ್ಲಿ ಇರಲು ಸೂಕ್ತರಲ್ಲ ಎಂದು ಕಿಡಿಕಾರಿದರು.
ಹಲ್ಲೆಗೆ ಮುಂದಾದಾಗ ಇದ್ದವರು ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯವರು. ಯಾರೂ ಅಪರಿಚಿತರಲ್ಲ. ಇಬ್ಬರು ಹೆಬ್ಬಾಳ್ಕರ್ ಪಿಎಗಳು ಹಾಗೂ ಬಹುತೇಕ ಮುಸ್ಲಿಮರು ಇದ್ದರು. ಮಾಹಿತಿ ಸಂಗ್ರಹಿಸಿದ್ದೇನೆ. ಎಲ್ಲವನ್ನೂ ಸಂಬಂಧಪಟ್ಟವರಿಗೆ ನೀಡುತ್ತೇನೆ. ಎಲ್ಲರ ಹೆಸರು ಹಾಕಿ ದೂರು ನೀಡಿದ್ದೇನೆ. ನನ್ನ ಮೇಲೆ ಕ್ರಮ ಮಾಡ್ತಾರೆ ಅಂದ್ರೆ ಅವರ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.
ಏನೂ ಆಗಿಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, , ಕಾಂಗ್ರೆಸ್ನವರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಬರಬೇಕು. ಹೆಬ್ಬಾಳ್ಕರ್ ಡಾಕ್ಟರ್ ಅಲ್ಲ. ತಲೆಗೆ ಗಾಯವಾದ ಬಳಿಕವೂ 3-4 ಗಂಟೆಗಳ ಕಾಲ ಚಿಕಿತ್ಸೆ ಕೊಡಿಸಿಲ್ಲ. ಖಾನಾಪುರದಲ್ಲಿ ಗಾಯವಾದರೆ, ರಾಮದುರ್ಗದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆಯನ್ನು ಸುರಿಸುತ್ತಿದ್ದಾರೆ. ಸುಳ್ಳನ್ನು ಸೋಲಿಸಬಹುದು. ಆದರೆ, ಸತ್ಯವನ್ನು ಸೋಲಿಸಲು ಆಗಲ್ಲ.
ಹೆಬ್ಬಾಳ್ಕರ್ ಕಣ್ಣೀರಿನಿಂದ ಲಾಭ ಪಡೆಯಬಹುದು ಅಂದುಕೊಂಡಿರಬಹುದು. ನನ್ನ ಪಿಎಗಳು ಲಂಚ ಕೇಳಿದ ಉದಾಹರಣೆಗಳಿಲ್ಲ. ಯಾರು ಸತ್ತಿಲ್ಲ. ಕೊಲೆಗಡುಕರು ಯಾರು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಯಾರ ರಾಜಕೀಯ ಹೇಗೆ ಶುರುವಾಯ್ತು ಎಂಬುದನ್ನು ಸ್ಥಳೀಯರಿಂದ ಕೇಳಬಹುದು. ಲಕ್ಷ್ಮಿ ಹೆಬ್ಬಾಳ್ಕರ್, ಮೋದಿ ಹತ್ತಿರ ಹೋಗ್ತೀನಿ ಅಂತಾರೆ, ಬಿಜೆಪಿಯವರು ಎಲ್ಲರೂ ದುಶ್ಯಾಸನರಾದರೇ ಅವರ ಬಳಿ ಏಕೆ ನ್ಯಾಯ ಕೇಳ್ತಾರೆ ? ಎಂದರು.
ಪಕ್ಕೆ, ಬೆನ್ನಿನಲ್ಲಿ ಪೆಟ್ಟಾಗಿರುವ 3-4 ನಾಲ್ಕು ಗುರುತುಗಳು ಇನ್ನೂ ಇವೆ. ಹೆಬ್ಬಾಳ್ಕರ್ ಪಿಎಗೆ ಅಷ್ಟು ಸೊಕ್ಕು ಹೇಗೆ? ಎಲ್ಲಿಂದ ಬಂತು? ಆ ಸೊಕ್ಕಿಗೆ ಕಾರಣ ಯಾರು? ಗೂಂಡಾಗಳಿಗೆ ಸುವರ್ಣಸೌಧದೊಳಗೆ ಪಾಸ್ ಕೊಟ್ಟಿದ್ದು ಯಾರು? ಅವರು ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಟಿದ್ದನ್ನ ಆ ಮಹಾತಾಯಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಈ ಘಟನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಕೂಡ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ನಾನೇನು ಹೇಳಲ್ಲ. ತನಿಖೆ ವೇಳೆ ಎಲ್ಲವನ್ನೂ ಹೇಳಬೇಕು. ಅವರು ಸ್ವತಂತ್ರರು ಏನೇನು ಕೇಳಿಸಿಕೊಂಡರು ಹೇಳಲಿ. ಆದರೆ, ಜಾಣ ಕುರುಡು, ಜಾಣ ಕಿವುಡು ಆಗೋದು ಬೇಡ. ಕಾಲ್ ಲೀಸ್ಟ್ ತೆಗೆದರೆ ಯರ್ಯಾರು ಸಂಪರ್ಕದಲ್ಲಿದ್ದರು, ಯಾರು ಫೋನ್ ಮಾಡಿ ಏನೇನು ಹೇಳಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಆಂಬ್ಯುಲೆನ್ಸ್ ಸೈರನ್ ಬಳಸಿ ಸಿ ಟಿ ರವಿಗೆ ಸ್ವಾಗತ; ಮಾಲೀಕರ ವಿರುದ್ಧ ಎಫ್ಐಆರ್
ಈ ನಡುವೆ ಸಿ. ಟಿ ರವಿ ಸ್ವಾಗತ ಮೆರವಣಿಗೆ ವೇಳೆ ಆಂಬ್ಯುಲೆನ್ಸ್ ಬಳಕೆ ಮಾಡಿರುವ ಆರೋಪದ ಮೇರೆಗೆ ಆಂಬ್ಯುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗಿದ್ದ ಸಿ ಟಿ ರವಿ ತವರು ಜಿಲ್ಲೆ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈ ವೇಳೆ ಎಂಎಲ್ಸಿ ಸಿ.ಟಿ ರವಿ ಸ್ವಾಗತ ಮೆರವಣಿಗೆಗೆ 7 ಆಂಬ್ಯುಲೆನ್ಸ್ಗಳನ್ನ ಬಳಸಿದ ಕಾರ್ಯಕರ್ತರು ಸೈರನ್ ಲೈಟ್ ಹಾಕಿ ಮೆರವಣಿಗೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕರಿಗೆ ಶಾಂತಿಭಂಗ ಉಂಟುಮಾಡಿದ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
Advertisement