ಶಿರಡಿ ಅಥವಾ ಸೊಲ್ಲಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಚಿಂತನೆ: ಕೇಂದ್ರ ಸಚಿವ ರಾಮದಾಸ್ ಅಠವಳೆ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿರಡಿ ಅಥವಾ ಸೊಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದು, ಈ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಮುಖ್ಯಸ್ಥ, ''ಲೋಕಸಭೆಯಲ್ಲಿ ನನ್ನ ಪಕ್ಷಕ್ಕೆ ಒಬ್ಬ ಸದಸ್ಯನೂ ಇಲ್ಲ. ನಾನು ಶಿರಡಿ ಅಥವಾ ಸೊಲ್ಲಾಪುರದಿಂದ ಸ್ಪರ್ಧಿಸಲು ಯೋಚಿಸುತ್ತಿದ್ದೇನೆ. ಈ ಬಗ್ಗೆ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ" ಎಂದರು.
ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಅಠವಳೆ, "ಆರಂಭದಲ್ಲಿ, ಎಸ್ಸಿ ಸಮುದಾಯಕ್ಕೆ ಅವರ ಜನಸಂಖ್ಯೆಯು ಶೇಕಡಾ 15 ರಷ್ಟಿದ್ದ ಕಾರಣಕ್ಕೆ ಶೇಕಡಾ 15 ರಷ್ಟು ಮೀಸಲಾತಿ ನೀಡಲಾಯಿತು. ಬುಡಕಟ್ಟು ಜನಸಂಖ್ಯೆಯ ಕಾರಣದಿಂದ ಎಸ್ಟಿಗೆ ಶೇಕಡಾ 7.5 ರಷ್ಟು ನೀಡಲಾಗಿದೆ. ಆದರೆ ಈಗ ಈ ಜನಸಂಖ್ಯೆಯು ಸುಮಾರು ಶೇ. 25 ರಷ್ಟಿದೆ. ಆದ್ದರಿಂದ ಎಸ್ಸಿ ಮತ್ತು ಎಸ್ಟಿಗೆ ಶೇಕಡಾ 2.5 ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂಬುದು ಅನೇಕರ ಬೇಡಿಕೆಯಾಗಿದೆ ಮತ್ತು ಇದು ನನ್ನ ಪಕ್ಷದ ಬೇಡಿಕೆಯಾಗಿದೆ ಎಂದರು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(ಇಡಬ್ಲ್ಯುಎಸ್) ಶೇ. 10 ರಷ್ಟು ಮೀಸಲಾತಿಯನ್ನು ಅನುಮೋದಿಸಿದೆ ಮತ್ತು ಜನಗಣತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಹ ಅವರು ಒತ್ತಾಯಿಸಿದರು.