ಕಾರವಾರ: ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಬುಧವಾರ ಹೇಳಿದ್ದಾರೆ. ಆದರೆ ತಮ್ಮ ಗೈರು ಹಾಜರಿಗೂ ಪಕ್ಷದ ಜಿಲ್ಲಾ ಘಟಕದೊಂದಿಗಿನ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ನಡೆದ ಮತದಾನದ ವೇಳೆ ಯಲ್ಲಾಪುರ ಶಾಸಕ ಪಕ್ಷ ವಿಪ್ ನೀಡಿದರೂ ಮತದಾನದಿಂದ ದೂರ ಉಳಿದಿದ್ದರೆ, ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಆತ್ಮಸಾಕ್ಷಿಯ ಹೆಸರಿನಲ್ಲಿ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದು ಬಿಜೆಪಿಗೆ ಮುಖಭಂಗವಾಗಿದೆ. ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದ ಸೋಮಶೇಖರ್ ವಿರೋಧ ಪಕ್ಷದ ಇತರ ಬಿಜೆಪಿ ಶಾಸಕರ ನಡುವೆ ತಮ್ಮಗೆ ಗೊತ್ತುಪಡಿಸಿದ ಆಸನದಲ್ಲಿ ಕಾಣಿಸಿಕೊಂಡರು.
ಸೋಮಶೇಖರ್ ಮತ್ತು ಹೆಬ್ಬಾರ್ ಇಬ್ಬರೂ ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು. ಇವರಿಬ್ಬರೊಂದಿಗೆ 17 ಕಾಂಗ್ರೆಸ್-ಜೆಡಿ (ಎಸ್) ಶಾಸಕರು ಪಕ್ಷ ತೊರೆಯುವ ಮೂಲಕ ಜುಲೈ, 2019 ರಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದರು. ನಂತರ ಹೆಬ್ಬಾರ್ ಬಿಜೆಪಿ ಟಿಕೆಟ್ನಲ್ಲಿ ಉಪಚುನಾವಣೆಯಲ್ಲಿ ಗೆದ್ದು, ಹಿಂದಿನ ಕೇಸರಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯಸಭಾ ಚುನಾವಣೆಯಲ್ಲಿ ಗೈರು ಕುರಿತು ಸುದ್ದಿಗಾರರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಮಂಗಳವಾರ ಬೆಳಗ್ಗೆ ನನ್ನ ಆರೋಗ್ಯ ಸರಿಯಿರಲಿಲ್ಲ. ನಾನು ಮತದಾನಕ್ಕೆ ಹೋಗಲು ಯೋಜಿಸಿದ್ದೆ, ವೈದ್ಯರ ಸಲಹೆಯ ಮೇರೆಗೆ ಸಂಜೆ 6 ಗಂಟೆಯ ನಂತರ ಹಿಂತಿರುಗಬೇಕಾಯಿತು, ಈ ಕಾರಣದಿಂದ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಬೇರೆ ಏನೂ ಇಲ್ಲ. ನಾನು ಮತ ಹಾಕಲು ಹೋಗಿ ಅಡ್ಡ ಮತದಾನ ಮಾಡಬಹುದಿತ್ತು ಅಥವಾ ಯಾರಿಗೂ ಮತ ಹಾಕದೇ ಬರಬಹುದಿತ್ತು ಎಂದರು.
ತಾವು ಯಾವುದೇ ಭಯದಿಂದ ಮತದಾನಕ್ಕೆ ಗೈರಾಗುವ ವ್ಯಕ್ತಿಯಲ್ಲ, ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಮಂಗಳವಾರ ಮಧ್ಯಾಹ್ನ 1 ಗಂಟೆಯ ನಂತರ ವಿಪ್ ಜಾರಿ ಮಾಡಲಾಗಿದೆ ಎಂದು ನನ್ನ ಆಪ್ತ ಸಹಾಯಕರು ತಿಳಿಸಿದ್ದಾರೆ. ಯಾವಾಗ ವಿಪ್ ಜಾರಿ ಮಾಡಬೇಕು, ಹೇಗೆ ವಿಪ್ ಜಾರಿ ಮಾಡುವುದರ ಕುರಿತು ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಮತದಾನಕ್ಕೆ ಗೈರುಹಾಜರಿ ಮತ್ತು ಪಕ್ಷದೊಂದಿಗಿನ ಅಸಮಾಧಾನದ ನಡುವೆ ಯಾವುದೇ ಸಂಬಂಧವಿಲ್ಲ, ಅಸಮಾಧಾನ ವ್ಯಕ್ತಪಡಿಸಲು ವೇದಿಕೆಗಳಿವೆ ಎಂದು ಹೇಳಿದರು.
ಗೈರುಹಾಜರಾಗುವ ಮೂಲಕ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, ಇಲ್ಲ ಅಂತಹ ಯಾವುದೇ ಎಚ್ಚರಿಕೆ ನೀಡಿಲ್ಲ. ನನಗೆ ಕೆಲವು ಆರೋಗ್ಯಸಮಸ್ಯೆಗಳಿದ್ದವು, ಆದ್ದರಿಂದ ಹೋಗಲು ಸಾಧ್ಯವಾಗಲಿಲ್ಲ."
ನನ್ನ ಅಸಮಾಧಾನ ಜಿಲ್ಲಾ ಮಟ್ಟದಲ್ಲಿ ಮಾತ್ರ. ನನಗೆ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ಅಸಮಾಧಾನವಿಲ್ಲ. ಈ ಹಿಂದೆಯೂ ಹೇಳಿದ್ದೆ, ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ ಎಂದರು.
Advertisement