ರಾಮಜನ್ಮಭೂಮಿ ಹೋರಾಟ ಪ್ರಕರಣಕ್ಕೆ ಮರುಜೀವ: ಇಬ್ಬರು ಕಾರ್ಯಕರ್ತರ ಬಂಧನ ವಿರುದ್ಧ ಆರ್. ಅಶೋಕ್ ಕೆಂಡ!

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು 31 ವರ್ಷಗಳ ನಂತರ ಬಂಧಿಸುವುದರೊಂದಿಗೆ ಕಾಂಗ್ರೆಸ್ ಸರ್ಕಾರ ಕೇಸ್ ರೀ ಓಪನ್‌ ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ಸೋಮವಾರ ಆರೋಪಿಸಿದೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು 31 ವರ್ಷಗಳ ನಂತರ ಬಂಧಿಸುವುದರೊಂದಿಗೆ ಕಾಂಗ್ರೆಸ್ ಸರ್ಕಾರ ಕೇಸ್ ರೀ ಓಪನ್‌ ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ಸೋಮವಾರ ಆರೋಪಿಸಿದೆ. ಆದರೆ, ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ, ಇದು ಸಾಮಾನ್ಯ  ಕಾರ್ಯವಿಧಾನವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಕೆ ಸುಕುಮಾರ್ ತಿಳಿಸಿದ್ದಾರೆ.

ಈಗ ಆರವತ್ತು ವರ್ಷವಾಗಿರುವ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, 31 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಮತ್ತೆ ತೆರೆಯುವ ಮೂಲಕ ಹಿಂದೂ ಕಾರ್ಯಕರ್ತರನ್ನು ಕಾಂಗ್ರೆಸ್ ಸರ್ಕಾರ ಭೀತಿಗೊಳಿಸುತ್ತಿದೆ ಎಂದರು. 

ಬಂಧಿತರ ಮೇಲೆ ಗಲಭೆಯ ಸಮಯದಲ್ಲಿ ಕಲ್ಲು ತೂರಾಟ ನಡೆಸಿರುವ ಆರೋಪವಿದೆ. ಕಾಂಗ್ರೆಸ್ ಸರ್ಕಾರವು 31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ತೆರೆಯುತ್ತಿದೆ. ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಅಯೋಧ್ಯೆಯ ಭವ್ಯ ಮಂದಿರದ ಶಂಕುಸ್ಥಾಪನೆಯ ಐತಿಹಾಸಿಕ ಸಂದರ್ಭಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿರುವ ಸಮಯದಲ್ಲಿ ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂಬ ಭಾವನೆಯನ್ನು ಇದು ನೀಡುತ್ತದೆ ಎಂದು ಅಶೋಕ ಆರೋಪಿಸಿದರು.

ಇಬ್ಬರು ಕಾರ್ಯಕರ್ತರ ಬಂಧನದ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಭ್ರಮಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ಕೇಳಿರುವಾಗ ಕಾಂಗ್ರೆಸ್ ಸರ್ಕಾರ ರಾಮ ಭಕ್ತರನ್ನು ಜೈಲಿಗೆ ಕಳುಹಿಸುವ ಮೂಲಕ "ಭಯೋತ್ಪಾದನೆ" ಮಾಡುತ್ತಿದೆ ಎಂದು ಕಿಡಿಕಾರಿದರು.

ನಾನು ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಭಾಗವಹಿಸಿದ್ದೆವು. ನನ್ನನ್ನು ಮತ್ತು ಯಡಿಯೂರಪ್ಪ ಅವರನ್ನು ಬಂಧಿಸಲು ನಿಮಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.ಸರ್ಕಾರ ಸೇಡಿನ ರಾಜಕಾರಣ ಮಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಹಾಗೂ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಅಶೋಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬಂಧನವನ್ನು ಖಂಡಿಸಿದ ಅವರು, ಘಟನೆ ನಡೆದು 31 ವರ್ಷಗಳ ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಳೆಯ ಪ್ರಕರಣ ಕೆದಕಲು ಮತ್ತು ಅಮಾಯಕ ರಾಮ ಭಕ್ತರನ್ನು ಏಕೆ ಬಂಧಿಸುತ್ತಿದೆ ಎಂದು ಪ್ರಶ್ನಿಸಿದರು. ಇದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ಸಂಗತಿ. ಟಿಪ್ಪು ಸಂಸ್ಕೃತಿಯನ್ನು ಕರ್ನಾಟಕಕ್ಕೆ ತರಲು ನೀವು ಹೇಗೆ ಬಯಸುತ್ತೀರಿ ಎಂಬುದನ್ನು ಇದು ತೋರಿಸುತ್ತದೆ. ಅದನ್ನು ಖಂಡಿಸುತ್ತೇನೆ. ತಕ್ಷಣ ಬಂಧಿತರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com