ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಶೆಟ್ಟರ್ ಆಗ್ರಹ
ಬೆಳಗಾವಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶನಿವಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ನೇರವಾಗಿ ಸಿಎಂ ಅವರ ಪಾತ್ರ ಇದೆ. 50:50 ಪ್ಯಾಕೇಜ್ ಮೈಸೂರಿನಲ್ಲಿ ಮಾತ್ರ ಇಂಪ್ಲಿಮೆಂಟ್ ಆಗಿದೆ ಅದು ಬೇರೆ ಕಡೆ ಆಗಿಲ್ಲ. ವಿಚಿತ್ರ ಎಂದರೆ ಒಂದು ಸಲ ನೋಟಿಫೈ ಮಾಡಿ ನಂತರ ಡಿ ನೋಟಿಫೈ ಮಾಡಿದ್ದಾರೆ ಎಂದು ಹೇಳಿದರು.
ಡಿ ನೋಟಿಫೈ ಆದ ಲ್ಯಾಂಡ್ ಎಕ್ಸ್ ವೈ ಝಡ್ ಹೆಸರಿನಲ್ಲಿ ಇದೆ. ಬಳಿಕ ಸಿಎಂ ಪತ್ನಿಯ ಹೆಸರಲ್ಲಿ ವ್ಯಕ್ತಿ ದಾನ ಕೊಟ್ಟಿದ್ದಾರೆ. ದಾನ ಕೊಟ್ಟ ಮೇಲೆ ಸಿಎಂ ಪತ್ನಿಯೂ ಸಹ ಲೆಟರ್ ಬರೆದಿದ್ದಾರೆ. ಡಿ ನೋಟಿಫೈ ಆದ ಲ್ಯಾಂಡ್ ಅಲ್ಲಿನ ಅಧಿಕಾರಿಗಳು ಹೇಗೆ ಅಭಿವೃದ್ದಿಪಡಿಸಿದರು. ನೀರು ರಸ್ತೆ ಎಲ್ಲಾ ರೀತಿಯ ಸೌಲಭ್ಯ ಯಾಕೆ ಕೊಟ್ಟರು ಎಂದು ಪ್ರಶ್ನಿಸಿದರು.
ಆಗಲೇ ತಡೆ ಹಿಡಿಯಬಹುದಿತ್ತು. ಆದರೆ, ಅಧಿಕಾರಿಗಳು ಸುಮ್ಮನೆ ಕುಳಿತರು. ಲೇಔಟ್ ಆದ ನಂತರ 50:50 ಕೊಡಿ ಎಂದು ಅಧಿಕಾರಿಗಳು ಕೇಳಿದ್ದಾರೆ. ಅಂತಹ ರೂಲ್ಸ್ ಎಲ್ಲಿಯೂ ಇಲ್ಲ. ಡೆವಲಪ್ಮೆಂಟ್ ಅಥಾರಿಟಿಯವರಿಗೆ ಯಾವುದೇ ರೈತರು ಭೂಮಿ ಕೋಡುತ್ತಿಲ್ಲ. ಬೇರೆ ಕಡೆಗೆ ಲ್ಯಾಂಡ್ ಕೊಡೊದಕ್ಕೂ ಬರೊಲ್ಲ. ಲೇಔಟ್ ಮಾಡುವಾಗ ಯಾಕೆ ಅಧಿಕಾರಿಗಳು ಬಿಟ್ಟು ಕೊಟ್ಟರು. ಅತೀ ಹೆಚ್ಚು ದುರುಪಯೋಗ ಮೂಡಾದಲ್ಲಿ ಆಗಿದೆ.
ಹಗರಣ ಹೊರಗೆ ಬಂದ ಮೇಲೆ 50:50 ಪ್ಲಾನ್ ಶುರುವಾಯ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಅತೀಹೆಚ್ಚು ದುರುಪಯೋಗ ಆಗಿದ್ದು ಮೈಸೂರಿನಲ್ಲಿ. ಇದರಲ್ಲಿ ಸಿಎಂ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಎಸ್ಟಿ ನಿಗಮದ ಹಣ ದುರುಪಯೋಗ ಮಾಡಿಕೊಂಡಿರೋ ವಿಚಾರವಾಗಿ ಮಾತನಾಡಿದ ಅವರು, ನೇರವಾಗಿ ಸಿಎಂ ಅವರೂ ಸಹ ಇದರಲ್ಲಿ ಹೊಣೆಗಾರರಾಗುತ್ತಾರೆ. ಈ ವಿಚಾರವಾಗಿ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ ಎಂದರು.
ಎಸ್ಇಪಿಟಿಎಸ್"ಪಿ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟ್ರಜರಿ ಖಾಲಿ ಆಗಿದೆ ಅಂತ ಹೇಳಿ ಸಿದ್ದರಾಮಯ್ಯ ಈ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎಸ್ ಸಿ, ಎಸ್ ಟಿ ಹಣ ದುರುಪಯೋಗ ಮಾಡ್ಕೊಂಡ್ರಿ ಅಂತ ನಮಗೆ ಹೇಳುತ್ತಿದ್ದರು. ಆದರೆ ಈಗ ಅದೇ ಹಣವನ್ನು ನೀವು ಗ್ಯಾರಂಟಿಗೆ ಟ್ರಾನ್ಸಪರ್ ಮಾಡಿದ್ದಿರಿ. ಇವತ್ತು ಟ್ರೇಜರಿಯಲ್ಲಿ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣ ಮಾಡಿದ್ದಿರಿ. ರಾಜ್ಯದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿದೆ. ಶಾಸಕರು ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಮಹದಾಯಿ ಕಾಮಗಾರಿ ತಡೆಯಲು ಗೋವಾ ಯತ್ನ
ಮಹದಾಯಿ ಯೋಜನೆಗೆ ಗೋವಾ ಸಿಎಂ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿ, ನ್ಯಾಯಮಂಡಳಿ ಕರ್ನಾಟಕಕ್ಕೆ 13 ಟಿಎಂಸಿ ಅಡಿ ಮಂಜೂರು ಮಾಡಿದೆ. ಯೋಜನೆಯ ಕಾಮಗಾರಿ ಆರಂಭಿಸಲು ಗ್ರೀನ್ ಸಿಗ್ನಲ್ ಕೂಡ ನೀಡಿದೆ. ಈ ಆದೇಶದ ಹೊರತಾಗಿಯೂ, ಗೋವಾ ಸರ್ಕಾರ ಆಕ್ಷೇಪಣೆಗಳನ್ನು ಎತ್ತುವ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದೆ. ನ್ಯಾಯಾಧಿಕರಣದ ಆದೇಶದಂತೆ ಯೋಜನೆಯ ಕಾಮಗಾರಿಗೆ ಅವಕಾಶ ನೀಡಬೇಕು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ