
ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆ ನಡೆಯುತ್ತಿದ್ದು, ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆ ಆಗಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ನಾನು ಕೂಡ ಮಾಧ್ಯಮದಲ್ಲಿ ಸೂರಜ್ ರೇವಣ್ಣ ಬಗ್ಗೆ ನೋಡಿದ್ದೇನೆ. ಸೂರಜ್ ರೇವಣ್ಣ ಸಹ ಆರೋಪ ಮಾಡಿದ್ದಾರೆ. ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕೇಸ್ನಲ್ಲಿ ಮೇಲ್ನೋಟಕ್ಕೆ ಗೊಂದಲ ಕಾಣಿಸುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.
ನಿಷ್ಪಕ್ಷಪಾತವಾದ ತನಿಖೆ ಆಗಲಿ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮ ಆಗೇ ಆಗುತ್ತೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಒಳ್ಳೆಯದಲ್ಲ. ಎರಡೂ ಕಡೆ ದೂರು ದಾಖಲು ಆದ ಹಿನ್ನೆಲೆಯಲ್ಲಿ ಇದು ಜಟಿಲ ಕೇಸ್ ರೀತಿಯಲ್ಲಿ ಕಾಣಿಸುತ್ತಿದೆ. ಮೊದಲೇ ದೂರು ಕೊಟ್ಟಿದು ಸೂರಜ್ ರೇವಣ್ಣ. ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಸೂಕ್ತ ತನಿಖೆ ಆಗಲಿ, ಸತ್ಯಾಸತ್ಯತೆ ಹೊರ ಬರಲಿ. ಇದು ಜೆಡಿಎಸ್ ಆಂತರಿಕ ವಿಚಾರ. ಇದರ ಬಗ್ಗೆ ಅವರ ನಾಯಕರು ಮಾತನಾಡುತ್ತಾರೆ ಎಂದು ತಿಳಿಸಿದರು.
Advertisement