Loksabha Election 2024: ಕೋಲಾರಕ್ಕೆ ಕುಮಾರಸ್ವಾಮಿ ಪಟ್ಟು, ಭರವಸೆ ನೀಡದ ಅಮಿತ್ ಶಾ, ಸಂಧಾನ ಸಕ್ಸಸ್ ಆದ್ರೆ ಅಭ್ಯರ್ಥಿ ಯಾರು?
ಬೆಂಗಳೂರು: ಲೋಕಸಭಾ ಚುನಾವಣೆ 2024ಕ್ಕೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರಗಳಿಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಗ್ಗಜಗ್ಗಾಟ ಮುಂದುವರೆದಿದ್ದು, ಮಂಡ್ಯ ಬೆನ್ನಲ್ಲೇ ಇದೀಗ ಕೋಲಾರಕ್ಕೂ ಜೆಡಿಎಸ್ ಪಟ್ಟು ಹಿಡಿದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ನೀಡುವಂತೆ ಬಿಜೆಪಿ ಬಳಿ ಬಿಗಪಟ್ಟು ಹಿಡಿದಿದ್ದು, ಮೈತ್ರಿಕೂಟದ ಭಾಗವಾಗಿ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಹಂಚಿಕೆ ಮಾಡಿರುವ ಜೆಡಿಎಸ್ ಕೋಲಾರ ಕ್ಷೇತ್ರಕ್ಕೂ ಬೇಡಿಕೆ ಇಟ್ಟಿದೆ.
ಈ ಬಗ್ಗೆ ಬಿಜೆಪಿ ವರಿಷ್ಠರು ಯಾವುದೇ ರೀತಿಯ ಭರವಸೆ ನೀಡಿಲ್ಲ ಎಂದು ಹೇಳಲಾಗಿದೆ. ಬಿಜೆಪಿಯ ಕೇಂದ್ರ ನಾಯಕತ್ವದಿಂದ ಕ್ಷೇತ್ರದ ಬಗ್ಗೆ ಖಚಿತ ಭರವಸೆ ಪಡೆಯಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಶನಿವಾರ ವಿಫಲರಾಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವಂತೆ ಮನವಿ ಮಾಡಿದರು. ಆದರೆ, ಕುಮಾರಸ್ವಾಮಿ ಅವರಿಗೆ ಯಾವುದೇ ಭರವಸೆ ನೀಡಲು ನಿರಾಕರಿಸಿದ ಶಾ, ರಾಜ್ಯ ಬಿಜೆಪಿ ನಾಯಕರ ಸಲಹೆ ಪಡೆದು ಒಂದೆರೆಡು ದಿನದಲ್ಲಿ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ದೆಹಲಿಗೆ ಬಂದಿದ್ದ ಕುಮಾರಸ್ವಾಮಿ, ಅಮಿತ್ ಶಾ ಭೇಟಿಯಾದ ಬಳಿಕ ಸಂಜೆ ತರಾತುರಿಯಲ್ಲಿ ಬೆಂಗಳೂರಿಗೆ ತೆರಳಿದರು. ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಳ್ಳಲು ಮಾಜಿ ಸಿಎಂ ನಿರಾಕರಿಸಿದರು.
ಸಂಧಾನ ಸಕ್ಸಸ್ ಆದರೆ ಅಭ್ಯರ್ಥಿಯಾರು?
ಒಂದು ವೇಳೆ ಕೋಲಾರವನ್ನು ತೆಕ್ಕೆಗೆ ಹಾಕಿಕೊಳ್ಳಲು ಜೆಡಿಎಸ್ ಯಶಸ್ವಿಯಾದರೆ ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್ ಅಥವಾ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಕಣಕ್ಕಿಳಿಸಲು ಮುಂದಾಗಬಹುದು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ನೀಡಿದ್ದಾರೆ. ಆದರೆ, ಪ್ರಸ್ತುತ ಲೋಕಸಭೆಯಲ್ಲಿ ಪಕ್ಷದ ಎಸ್ ಮುನಿಸ್ವಾಮಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಬಿಜೆಪಿಯ ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರವನ್ನು ಕೈ ಬಿಡಬೇಡಿ ಎಂದು ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ