ಹಾಸನದಲ್ಲಿ ಶ್ರೇಯಸ್ ಗೆಲ್ಲಿಸದಿದ್ದರೆ ಯಾರಿಗೂ ಮುಖ ತೋರಿಸಲ್ಲ: ದೇವೇಗೌಡ ಕುಟುಂಬಕ್ಕೆ ರಾಜಣ್ಣ ಸವಾಲು!

ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಲು ವಿಫಲವಾದರೆ ಯಾರ ಮುಂದೆಯೂ ಮುಖ ತೋರಿಸುವುದಿಲ್ಲ ಎಂದು ಸಚಿವ ರಾಜಣ್ಣ ಬಹಿರಂಗ ಸವಾಲು ಹಾಕಿದ್ದಾರೆ.
ಶ್ರೇಯಸ್ ಪಟೇಲ್ ಮತ್ತು ಪ್ರಜ್ವಲ್ ರೇವಣ್ಣ
ಶ್ರೇಯಸ್ ಪಟೇಲ್ ಮತ್ತು ಪ್ರಜ್ವಲ್ ರೇವಣ್ಣ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಹಾಗೂ ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಲು ವಿಫಲವಾದರೆ ಯಾರ ಮುಂದೆಯೂ ಮುಖ ತೋರಿಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೋಮವಾರ ಬಹಿರಂಗ ಸವಾಲು ಹಾಕಿದ್ದಾರೆ.

ತುಮಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ನಾನು ಯಾರಿಗೂ ಮುಖವನ್ನೇ ತೋರಿಸಲ್ಲ ಅಂತಾ ದೇವೇಗೌಡ ಕುಟುಂಬಕ್ಕೆ ರಾಜಣ್ಣ ಓಪನ್ ಚಾಲೆಂಜ್ ಹಾಕಿದ್ದಾರೆ.

1999ರ ಚುನಾವಣೆಯಲ್ಲಿ ಹಾಸನದಿಂದ ಎಚ್‌ಡಿ ದೇವೇಗೌಡರನ್ನು ಸೋಲಿಸಿದ್ದ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಎಂಬ ಕಾರಣಕ್ಕೆ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಶ್ರೇಯಸ್‌ಗೆ ಟಿಕೆಟ್‌ಗಾಗಿ ಲಾಬಿ ಮಾಡಿದರು.

ಪುಟ್ಟಸ್ವಾಮಿಗೌಡರು ದೇವೇಗೌಡರನ್ನ ಸೋಲಿಸಿದರು. ಈಗ ದೇವೇಗೌಡರ ಮೊಮ್ಮಗ ಹಾಸನದಲ್ಲಿ ನಿಲ್ಲುತ್ತಿದ್ದಾರೆ. ಪುಟ್ಟಸ್ವಾಮಿಗೌಡರ ಮೊಮ್ಮಗ ನಮ್ಮ ಪಕ್ಷದಿಂದ ನಿಲ್ಲುತ್ತಿದ್ದಾರೆ ಎಂದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಗೆಲುವಿನ ಹೊಣೆ ಹೊತ್ತಿರುವ ಲೋಕಸಭಾ ಕ್ಷೇತ್ರದ ಸಮನ್ವಯಾಧಿಕಾರಿಯೂ ಆಗಿದ್ದಾರೆ.

ಶ್ರೇಯಸ್ ಪಟೇಲ್ ಮತ್ತು ಪ್ರಜ್ವಲ್ ರೇವಣ್ಣ
ಪಾಕ್ ಪರ ಘೋಷಣೆ ಕೂಗುವವರ ಗುಂಡಿಕ್ಕಿ ಕೊಲ್ಲಬೇಕು: ಸಚಿವ ರಾಜಣ್ಣ

ದೇವೇಗೌಡರು ಯಾವತ್ತೂ ಕೂಡ ಜಾತ್ಯತೀತರಲ್ಲ. ಮೋದಿ ಗೆದ್ದರೆ ನಾನು ದೇಶ ಬಿಡುತ್ತೇನೆ ಎಂದು ಹೇಳಿದ್ದರು, ಈಗ ಏನು ಮಾಡಿದರು? ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯ ನಿಲ್ಲುತ್ತಿದ್ದಾರೆ. ಹಾಗಿದ್ದರೆ ಜೆಡಿಎಸ್​ನಲ್ಲಿ ಬೇರೆ ಯಾರು ಅಭ್ಯರ್ಥಿಗಳು ಇಲ್ಲವೇ ಎಂದು ಪ್ರಶ್ನಿಸಿದರು.

ಸಹಕಾರಿ ಇಲಾಖೆ ಸಚಿವ ಕೆ ಎನ್ ರಾಜಣ್ಣ
ಸಹಕಾರಿ ಇಲಾಖೆ ಸಚಿವ ಕೆ ಎನ್ ರಾಜಣ್ಣ

ಯಾರನ್ನೇ ಕೇಳಿದರೂ ಕಾಂಗ್ರೆಸ್ ಅಭ್ಯರ್ಥಿ ತುಂಬಾ ಒಳ್ಳೆಯವರು ಎಂದು ಹೇಳುತ್ತಿದ್ದಾರೆ. ಎರಡು ದಶಕಗಳಿಂದ ಕಾಂಗ್ರೆಸ್ ಹಾಸನದಲ್ಲಿ ಅಧಿಕಾರದಲ್ಲಿಲ್ಲ. ಹೀಗಾಗಿ ಕಾರ್ಯಕರ್ತರನ್ನ ದುರ್ಬಿನ್ ತಗೆದುಕೊಂಡು ಹುಡುಕುವ ಸ್ಥಿತಿ ಇರಬೇಕಿತ್ತು. ಆದರೆ ಹಾಸನದಲ್ಲಿ ಆ ಸ್ಥಿತಿ ಇಲ್ಲ, ಅಲ್ಲಿನ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.

28 ಸೀಟುಗಳಲ್ಲಿ 20 ಸೀಟು ಗೆಲ್ಲದಿದ್ದರೆ ಸರ್ಕಾರ ನಡೆಸುವ ನೈತಿಕ ಹಕ್ಕು ನಮಗಿಲ್ಲ. ಹಾಗಾಗಿ ನಾವೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡಬೇಕು, ಬಿಜೆಪಿ ಇಂದಿಗೂ ನಮ್ಮ ಸಂವಿಧಾನವನ್ನು ಅಂಗೀಕರಿಸದೆ ಅದನ್ನು ಉಳಿಸಿಕೊಂಡಿದೆ. ಹೀಗಾಗಿ ಅವರ ಸಿದ್ಧಾಂತವನ್ನು ಸೋಲಿಸಬೇಕು. ನಾವು ಹಿಂದೂಗಳು, ಆದರೆ ನಾವು ಮಹಾತ್ಮಾ ಗಾಂಧಿಯವರ ಹಿಂದೂಗಳು, ಬಿಜೆಪಿಯವರು ಗೋಡ್ಸೆಯ ಹಿಂದೂಗಳು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com