ಬೆಂಗಳೂರು: ಬಿಜೆಪಿ ನೀಡಿದ 1 ಪುಟದ ನೋಟಿಸ್ಗೆ ನಾವು 170 ಪುಟಗಳ ಉತ್ತರ ನೀಡಿದ್ದೇವೆ ಎಂದು ರೆಬೆಲ್ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಗೆ ಸದಾಶಿವನಗರ ನಿವಾಸಕ್ಕೆ ಬಿಜೆಪಿ ರೆಬೆಲ್ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಒಂದೇ ಕಾರಿನಲ್ಲಿ ಆಗಮಿಸಿದ್ದರು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಡಿಸಿಎಂ ಭೇಟಿ ಮಾಡಿದ್ದೇವೆ ಎಂದು ಎಸ್ಟಿ ಸೋಮಶೇಖರ್ ಭೇಟಿ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ನಂತರ ಬಿಜೆಪಿ ನೊಟೀಸ್ ಗೆ ಸಂಬಂಧಿಸಿದಂತೆ ಮಾತನಾಡಿಡ ಅವರು, ನಮಗೆ ಬಿಜೆಪಿಯವರು ನೀಡಿದ್ದ ನೋಟಿಸ್ಗೆ ಸುದೀರ್ಘ ಉತ್ತರ ನೀಡಿದ್ದೇವೆ. ಯಾವ್ಯಾವ ರಾಜ್ಯದಲ್ಲಿ ಕೋರ್ಟ್ ತೀರ್ಪು ಏನು ಬಂದಿದೆ? ಯಾವ್ಯಾವ ರಾಜ್ಯದಲ್ಲಿ ಬಿಜೆಪಿ ಇಂತಹ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಂಡಿದೆ? ಎಲ್ಲಾ ದಾಖಲೆ ಸೇರಿಸಿ 170 ಪುಟಗಳ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದೇ ವಿಷಯಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿದ ಶಿವರಾಂ ಹೆಬ್ಬಾರ್, ಸೋಮಶೇಖರ್ ಅವರದ್ದು ಅಡ್ಡ ಮತದಾನ, ನನ್ನದು ಮತದಾನಕ್ಕೆ ಗೈರು ನೋಟಿಸ್ಗೆ ಬೇರೆ ರೀತಿಯ ಉತ್ತರ ಕೊಟ್ಟಿದ್ದೇನೆ. ನನ್ನದು ಸೋಮಶೇಖರ್ ಉತ್ತರಕ್ಕಿಂತ 2 ಪುಟ ಕಡಿಮೆ ಇರಬಹುದು. ಆದರೆ ಎಲ್ಲಾ ದಾಖಲೆ ಸಹಿತ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿ ನಾಯಕರಿಂದ ಸೋಮಶೇಖರ್ ಅಂತರ ಕಾಯ್ದು ಕೊಂಡಿದ್ದಾರೆ. ಬಿಜೆಪಿಯ ಯಾವುದೇ ಸಭೆ, ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿಲ್ಲ, ಹೀಗಾಗಿ ಅವರು ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.
Advertisement